ಬಿಜೆಪಿ ಬಿರುಸಿನ ಪ್ರಚಾರ ಅಭಿಯಾನ
Team Udayavani, Apr 9, 2019, 6:00 AM IST
ಅಂಗಡಿಮನೆ ಕಾಲನಿಯಲ್ಲಿ ಮತ ಯಾಚಿಸುತ್ತಿರುವ ಬಿಜೆಪಿ ಕಾರ್ಯಕರ್ತರು.
ಕಡಬ: ಬಿಜೆಪಿಯ ಚುನಾವಣ ಪ್ರಚಾರದ ತಂತ್ರಗಾರಿಕೆಯ ಒಂದು ಭಾಗವಾದ ಚುನಾವಣಾ ಪ್ರಚಾರ ಅಭಿಯಾನ ಸುಳ್ಯ ವಿಧಾನಸಭಾ ಕ್ಷೇತ್ರದಾದ್ಯಂತ ಪ್ರತೀ ಬೂತ್ ಮಟ್ಟದಲ್ಲಿ ರವಿವಾರ ಏಕಕಾಲದಲ್ಲಿ ನಡೆಯಿತು.
30 ಮತದಾರರಿಗೆ ಒಬ್ಬ ಪೇಜ್ ಪ್ರಮುಖರಂತೆ ನೇಮಕ ಮಾಡಿರುವ ಬಿಜೆಪಿ ಅವರಿಂದ ಒಂದು ಸುತ್ತಿನ ಮನೆ ಮನೆ ಭೇಟಿ ಕಾರ್ಯವನ್ನು ಮುಗಿಸಿಕೊಂಡಿದೆ. ತಳಮಟ್ಟದಲ್ಲಿ ಮತದಾರರನ್ನು ಮುಟ್ಟುವ ದೃಷ್ಟಿಯಿಂದ 10ರಿಂದ 12 ಗ್ರಾಮಗಳನ್ನೊಳಗೊಂಡ ಮಹಾಶಕ್ತಿ ಕೇಂದ್ರ, ಐದಾರು ಗ್ರಾಮಗಳನ್ನೊಳಗೊಂಡ ಶಕ್ತಿಕೇಂದ್ರ ಹಾಗೂ ನಾಲ್ಕರಿಂದ ಆರು ಬೂತ್ಗಳನ್ನೊಳಗೊಂಡ ಶಕ್ತಿ ಕೇಂದ್ರ ಹಾಗೂ ಪೇಜ್ ಪ್ರಮುಖರನ್ನು ನೇಮಿಸಿಕೊಂಡು ಚುನಾವಣ ಪ್ರಚಾರ ಕಾರ್ಯವನ್ನು ಆಯೋಜಿಸಿರುವ ಬಿಜೆಪಿ ಒಂದು ಶಕ್ತಿ ಕೇಂದ್ರದ ಪ್ರಮುಖರನ್ನು ಇನ್ನೊಂದು ಶಕ್ತಿ ಕೇಂದ್ರದ ಬೂತ್ಗಳ ಪ್ರಭಾರಿಗಳನ್ನಾಗಿ ಕಳುಹಿಸಿ ಸುಳ್ಯ ಕ್ಷೇತ್ರದ ಪ್ರತೀ ಬೂತ್ನಲ್ಲಿ ಪ್ರಮುಖರ ಭೇಟಿ ಮಾಡಿ ಮನೆ ಮನೆ ಭೇಟಿ ಅಭಿಯಾನವನ್ನು ಮಾಡಲಾಯಿತು.
ಕಡಬದಲ್ಲಿ ಕಾರ್ಯಕರ್ತರೊಂದಿಗೆ ಸುಳ್ಯ ಪರಿಸರದ ಬಿಜೆಪಿ ಪ್ರಮುಖರು ಮನೆ ಮನೆಗೆ ಭೇಟಿ ನೀಡಿದರೆ, ಕಡಬ ಭಾಗದ ಪ್ರಮುಖರು ಸುಳ್ಯ ಪರಿಸರದಲ್ಲಿ ಮತಯಾಚನೆ ಮಾಡಿದರು. ಇದು ಪ್ರತಿಯೊಬ್ಬ ಮತದಾರನನ್ನೂ ಸಂಪರ್ಕಿಸಿ ಬಿಜೆಪಿಯತ್ತ ಆಕರ್ಷಿಸುವ ತಂತ್ರಗಾರಿಕೆಯಾದರೆ ಎ. 14ರಂದು ಮತ್ತೂಂದು ಮಹಾ ಅಭಿಯಾನ ನಡೆಯಲಿದೆ ಎಂದು ಬಿಜೆಪಿ ಪ್ರಮುಖರು ತಿಳಿಸಿದ್ದಾರೆ.