ಪುತ್ತೂರು: ಆಹಾರ ಧಾನ್ಯ ಬೆಳೆ ಉತ್ಪಾದನೆಯಲ್ಲಿ ಕುಸಿತ
Team Udayavani, Apr 28, 2022, 9:21 AM IST
ಪುತ್ತೂರು: ಕೃಷಿ ಪ್ರಧಾನ ತಾಲೂಕಾಗಿರುವ ಪುತ್ತೂರಿನಲ್ಲಿ ಆಹಾರ ಧಾನ್ಯ ಬೆಳೆಗಳ ಉತ್ಪಾದನೆ ಪ್ರಮಾಣ ವರ್ಷದಿಂದ ವರ್ಷಕ್ಕೆ ದಾಖಲೆ ಪ್ರಮಾಣದಲ್ಲಿ ಕುಸಿತ ಕಾಣುತ್ತಿದೆ.
ಬಹುಮುಖ್ಯವಾಗಿ ಭತ್ತ, ದ್ವಿದಳ ಧಾನ್ಯದ ಉತ್ಪಾದನೆ ತೀವ್ರ ಇಳಿಕೆ ಕಂಡಿರು ವುದನ್ನು ಕೃಷಿ ಇಲಾಖೆಯ ಅಂಕಿ- ಅಂಶ ದಾಖಲಿಸಿರುವುದು ಇದಕ್ಕೆ ನಿದರ್ಶನ.
ಕೊರತೆ ಶೇ. 97.43
ಪ್ರಸ್ತುತ ತಾಲೂಕಿನಲ್ಲಿ ಆಹಾರ ಧಾನ್ಯಗಳ ಉತ್ಪಾದನೆ ಆಗುತ್ತಿರುವುದು ಶೇ. 2.57ರಷ್ಟು. ಅಂದರೆ 97.43 ಶೇ. ಕೊರತೆ. ಅಂಕಿ ಅಂಶದ ಆಧಾರದಲ್ಲಿ ತಾಲೂಕಿಗೆ 34,675 ಟನ್ ಆಹಾರಧಾನ್ಯದ ಆವಶ್ಯಕತೆ ಇದೆ. ಪ್ರಸ್ತಕ ಹಿಂಗಾರು ಮತ್ತು ಮುಂಗಾರು ಸೇರಿ 893 ಟನ್ ಮಾತ್ರ ಉತ್ಪಾದನೆ ಆಗುತ್ತಿದೆ. ಅಂದರೆ 33,782 ಟನ್ ಉತ್ಪಾದನೆ ಕೊರತೆ ಇದೆ. ಕೊರತೆ ನೀಗಿಸಲು ಸದ್ಯ ಉಳಿದೆಡೆಯಿಂದ ಆಹಾರ ಧಾನ್ಯ ಪೂರೈಸಲಾಗುತ್ತಿದೆ.
ಧಾನ್ಯಗಳ ಮೇಲೆ ಪರಿಣಾಮ
ವಾಣಿಜ್ಯ ಆಧಾರಿತ ಕೃಷಿಯತ್ತ ಪ್ರಾಮುಖ್ಯ ಹೆಚ್ಚಾದ ಕಾರಣ ಹಾಗೂ ಮಾರು ಕಟ್ಟೆಯಲ್ಲಿ ಆಹಾರ ಧಾನ್ಯ ಖರೀದಿಗೆ ಅವಕಾಶ ಇರುವ ಕಾರಣ ಹೆಚ್ಚಿನ ಬೇಸಾಯಗಾರರು ಆಹಾರ ಧಾನ್ಯ ಉತ್ಪಾದನೆಯತ್ತ ಗಮನ ಹರಿಸಿಲ್ಲ. ಹಿಂದೆ ಸುಗ್ಗಿ ಬೇಸಾಯದ ಬಳಿಕ ದ್ವಿದಳ ಧಾನ್ಯಗಳ ಬೆಳೆ ಮಾಡಲಾಗುತಿತ್ತು. ಕಾಡು ಪ್ರಾಣಿಗಳ ಉಪಟಳ ಸೇರಿದಂತೆ ವಿವಿಧ ಕಾರಣಗಳಿಂದ ಗದ್ದೆ ಬೇಸಾಯದ ಜತೆಗೆ ತರಕಾರಿ, ದ್ವಿದಳ ಧಾನ್ಯ ಬೆಳೆ ಬಹುತೇಕ ಸ್ಥಗಿತಗೊಂಡಿದೆ ಎಂಬ ಕಾರಣ ಇದ್ದರೂ ಕಾರ್ಮಿಕರ ಕೊರತೆಯೂ ಇದರ ಹಿಂದಿದೆ.
ಹಡಿಲು ಗದ್ದೆ ನಾಟಿ ಅಭಿಯಾನ
ಹಡಿಲು ಬಿದ್ದ ಗದ್ದೆ ನಾಟಿ ಮಾಡುವ ನಿಟ್ಟಿನಲ್ಲಿ ಕಳೆದ ವರ್ಷ ಪುತ್ತೂರಿನಲ್ಲಿ ಬನ್ನಿ ಗದ್ದೆಗಿಳಿಯೋಣ ಎಂಬ ಅಭಿಯಾನ ನಡೆ ಯಿತು. ಇದರ ಪರಿಣಾಮ 360 ಹೆಕ್ಟೇರಿ ನಷ್ಟಿದ್ದ ಗದ್ದೆ 404 ಹೆಕ್ಟೇರಿಗೆ ಏರಿಕೆ ಕಂಡಿತು. ಈ ವರ್ಷ ಇನ್ನೂ 20 ಹೆಕ್ಟೇರಿನಷ್ಟು ಏರಿಕೆಯ ನಿರೀಕ್ಷೆ ಹೊಂದಲಾಗಿದೆ. ಈ ಅಭಿಯಾನ ಮತ್ತಷ್ಟು ವರ್ಷಗಳ ಕಾಲ ವಿಸ್ತಾರಗೊಂಡಲ್ಲಿ ಮಾತ್ರ ಅದರ ಫಲ ದೊರಕಲು ಸಾಧ್ಯವಿದೆ. ಆದರೆ ಮುಂಗಾರು ಹಂಗಾಮಿನಲ್ಲಿ ಕಾಲ-ಕಾಲಕ್ಕೆ ಸರಿಯಾಗಿ ಮಳೆ ಸುರಿಯದಿರುವುದು, ಹಿಂಗಾರು ಅವಧಿಯಲ್ಲಿ ಮಳೆ ಬರುವುದು ಹೀಗೆ ವಾಡಿಕೆಗಿಂತ ಮಳೆ ಹೆಚ್ಚು ಕಡಿಮೆ ಆಗುವುದರಿಂದ ಆಹಾರ ಬೆಳೆಗಳ ಉತ್ಪಾದನೆ ಪ್ರಮಾಣ ಕಳೆದ ವರ್ಷಕ್ಕಿಂತ ಕಡಿಮೆ ಆಗುವ ಸಾಧ್ಯತೆ ಇರುತ್ತದೆ.
ಜನರೂ ಸಹಕರಿಸಬೇಕು
ತಾಲೂಕಿಗೆ 34,465 ಟನ್ ಆಹಾರ ಧಾನ್ಯದ ಆವಶ್ಯಕತೆ ಇದ್ದರೂ ಉತ್ಪಾದನ ಪ್ರಮಾಣ ಮಾತ್ರ 893 ಟನ್ನಷ್ಟಿದೆ. ಈ ಬಗ್ಗೆ ಸಂಬಂಧಿಸಿದ ಇಲಾಖೆ ಯೋಜನೆ ರೂಪಿಸಿಕೊಂಡು ಆಹಾರಧಾನ್ಯ ಉತ್ಪಾದನೆಗೆ ಪ್ರೋತ್ಸಾಹ ನೀಡಲು ಸೂಚಿಸಲಾಗಿದೆ. ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬಿ ಯಾಗಲು ಜನರೂ ಸಹಕಾರ ನೀಡಬೇಕು. -ಸಂಜೀವ ಮಠಂದೂರು, ಶಾಸಕರು, ಪುತ್ತೂರು.
ಇಲಾಖೆ ಪ್ರೋತ್ಸಾಹ
ತಾಲೂಕಿನಲ್ಲಿ ಈ ಹಿಂದೆ 360 ಹೆಕ್ಟೇರ್ ಭತ್ತದ ಗದ್ದೆ ಇತ್ತು. ಹಡಿಲು ಬಿದ್ದ ಗದ್ದೆ ನಾಟಿ ಅಭಿಯಾನದ ಬಳಿಕ ಇದರ ವಿಸ್ತೀರ್ಣ 404 ಹೆಕ್ಟೇರಿಗೆ ಏರಿಕೆ ಕಂಡಿದೆ. ಭತ್ತದ ಜತೆಗೆ ಆಹಾರ ಧಾನ್ಯ ಉತ್ಪಾದನೆಗೂ ಇಲಾಖೆ ಪ್ರೋತ್ಸಾಹ ನೀಡುತ್ತಿದೆ. ಇಲಾಖೆಯ ಮೂಲಕ ದೊರೆಯುವ ಸವಲತ್ತುಗಳನ್ನು ನೀಡಲಾಗುತ್ತಿದೆ. -ನಾರಾಯಣ ಶೆಟ್ಟಿ, ಕೃಷಿ ಅಧಿಕಾರಿ, ಪುತ್ತೂರು
ಕಿರಣ್ ಪ್ರಸಾದ್ ಕುಂಡಡ್ಕ