ಧರ್ಮಸ್ಥಳ ಲಕ್ಷದೀಪೋತ್ಸವ: ರಂಗವೈಭವದಲ್ಲಿ ರಂಜಿಸಿದ ಭರತನಾಟ್ಯ
Team Udayavani, Nov 27, 2019, 4:22 AM IST
ಬೆಳ್ತಂಗಡಿ: ನವರಸಗಳನ್ನು ಅದ್ಭುತವಾಗಿ ಪ್ರತಿಬಿಂಬಿಸುವ ದೇಶೀಯ ಸಂಸ್ಕೃತಿ ಭರತನಾಟ್ಯದ ಛಾಪು ಧರ್ಮಸ್ಥಳ ಲಕ್ಷದೀಪೋತ್ಸವ ಸಾಂಸ್ಕೃತಿಕ ವಸ್ತು ಪ್ರದರ್ಶನ ರಂಗ ವೇದಿಕೆಯಲ್ಲಿ ಪ್ರೇಕ್ಷಕ ರನ್ನು ಮಂತ್ರಮುಗ್ಧಗೊಳಿಸಿತು. ಬೆಂಗಳೂರಿನ ನಂದಿನಿ ಲೇಔಟ್ನ “ನಾಟ್ಯಕಲಾ ಮೈತ್ರಿ ಸ್ಕೂಲ್ ಆಫ್ ಡ್ಯಾನ್ಸ್’ನ ವಿದ್ಯಾರ್ಥಿನಿಯರು ತುಳಸಿ ವನಂ ಸಂಗೀತ ಸಂಯೋಜನೆಯ “ಭಜಮಾನಸಂ’ ಕುಚುಪುಡಿ ಶೈಲಿಯ ವಿನಾಯಕ ಸ್ತುತಿ ನೃತ್ಯದೊಂದಿಗೆ ಕಾರ್ಯ ಕ್ರಮಕ್ಕೆ ಚಾಲನೆ ನೀಡಿದರು. ಹದಿನೆಂಟು ಮಂದಿ ಕಲಾವಿದೆಯರು ದೇವರಿಗೆ ಮತ್ತು ನೆರೆದ ಭಕ್ತರಿಗೆ ಪುಷ್ಪ ನಮನ ಸಲ್ಲಿಸಿ, ಭೂಮಿತಾಯಿಗಾಗುವ ಪಾದಾಘಾತಕ್ಕೆ ಕಲಾವಿದೆಯರು ಕ್ಷಮೆ ಯಾಚಿಸುತ್ತಾ ಗಣಪತಿ ಸ್ತುತಿಯೊಂದಿಗೆ ನೃತ್ಯಾರಂಭವಾಯಿತು.
ವಿದ್ಯಾ – ಬುದ್ಧಿದಾತೆ ಸರಸ್ವತಿಯ ಸ್ತುತಿ, ದೇಹ – ಮನಸ್ಸುಗಳನ್ನು ಅರಳಿ ಸುವ “ಅಲರಿಪು’ ಪ್ರದರ್ಶನಗೊಂಡಿತು. ಜತಿಸ್ವರ ನೃತ್ಯಬಂಧ, ನಾಡದೇವಿ ಚಾಮುಂಡೇಶ್ವರಿಯ ಅವತಾರ ಬಿಂಬಿ ಸುವ ನೃತ್ಯಗಳು ಮನ ಮುಟ್ಟಿದವು. ಶ್ರೀಕೃಷ್ಣನ ಬಾಲಲೀಲೆಗಳಾದ ಪೂತನಿ ಸಂಹಾರ, ಧೈರ್ಯ, ಸ್ಥೈರ್ಯ, ತುಂಟಾಟ ಮತ್ತು ಮಹಾಭಾರತದ ಗೀತೋಪ ದೇಶದ “ಪದವರ್ಣ’ವೆಂಬ ಅಭಿನಯ ನೋಡುಗರ ಮನಸೂರೆಗೊಂಡಿತು. ನಾಟ್ಯದೇವ ನಟರಾಜ ಪರಮೇಶ್ವರನ ಭಕ್ತರ ಮೇಲಿನ ಕರುಣೆ ಮತ್ತು ಶಿವ ಲೀಲೆಗಳನ್ನು ನೃತ್ಯದ ಮೂಲಕ ಪ್ರದರ್ಶನ ವಿಶೇಷ ಆಕರ್ಷಣೆಯಾಗಿತ್ತು. “ತಿಲ್ಲಾನ’ ನೆರೆದವರ ಕರತಾಡನಕ್ಕೆ ಸಾಕ್ಷಿಯಾಯಿತು.
ದಿಗ್ಗಜರ ಹಾಡಿಗೆ ಹೆಜ್ಜೆ
ಸ್ವಾಮಿ ದೀಕ್ಷಿತರು, ದಯಾನಂದ ಸರಸ್ವತಿ, ಸ್ವಾಮಿ ತಿರುನಾಳ, ಪುರಂದರ ದಾಸ, ದಯಾನಂದ ಸರಸ್ವತಿ, ಕನಕದಾಸರಂತಹ ಸಾಹಿತ್ಯ ದಿಗ್ಗಜರ ಹಾಡಿಗೆ ಗೆಜ್ಜೆಕಟ್ಟಿ ವಿದ್ಯಾರ್ಥಿನಿಯರು ಹೆಜ್ಜೆ ಹಾಕಿದರು. ಮಹಾವಿಷ್ಣುವಿನ ದಶಾವತಾರದ ಪ್ರದರ್ಶನ ನೋಡುಗರ ಮೈ ರೋಮಾಂಚನಗೊಳಿಸಿತು. ತಿಲ್ಲಾನ ನೃತ್ಯದೊಂದಿಗೆ ಭರತನಾಟ್ಯ ಸಂಪನ್ನಗೊಂಡಿತು.
ಅರಳು ಪ್ರತಿಭೆಗಳ ನಾಟ್ಯರಂಜನೆ
ಬೆಂಗಳೂರಿನ ಪುಷ್ಪಾಂಜಲಿ ನೃತ್ಯ ಶಾಲೆಯ ವೃಂದಾ ದೀಪಕ್ ತಂಡವು ಪ್ರದರ್ಶಿಸಿದ ಭರತನಾಟ್ಯ ಪ್ರೇಕ್ಷಕರನ್ನು ರಂಜಿಸಿತು. “ಪುಷ್ಪಾಂಜಲಿ’ ನೃತ್ಯದ ಮೂಲಕ ಆರಂಭವಾಗಿ, ರಾಗನಾಟ್ಯ, ಶ್ರೀ ಮಹಾಗಣಪತಿ ಸುರಪತಿ, ಸಕಲಕಲಾದೇವಿ ಶಾರದೆ, ಪಾಹಿಮಾನ್ರಾಜರಾಜೇಶ್ವರೀ, ಓಂ ನಮಃ ಶಿವಾಯ, ಮಹಾದೇವ ಶಿವ ಶಂಭೋ, ಸಾಂಬ ಸದಾಶಿವ, ಅರ್ಪುದ ಸಿರ್ಪುದೆ ಪೊನ್ನಮ್ಮ, ನಾಗತಾಳ ಹಾಗೂ ತಿಲ್ಲಾನ ಹಾಡುಗಳ ಅರ್ಥವಂತಿಕೆ ಯನ್ನು ತಂಡದ ಕಲಾವಿದರು ಭರತನಾಟ್ಯದ ಮೂಲಕ ಹೆಚ್ಚಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು
Road Mishap;ಅರಂತೋಡು: ಕಾರು – ಬೈಕ್ ಢಿಕ್ಕಿ: ಸವಾರ ಸಾವು
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು