ವಿವಿಧ ಪ್ರದೇಶಗಳಿಗೆ ಡಾ| ರಾಜೇಂದ್ರ ಭೇಟಿ
ಸುಳ್ಯಪದವು: ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ
Team Udayavani, Apr 18, 2022, 9:34 AM IST
ಸುಳ್ಯಪದವು: ಜಿಲ್ಲಾಡಳಿತ, ದ.ಕ. ಜಿಲ್ಲಾ ಕಾರ್ಯನಿರತ ಪತ್ರ ಕರ್ತರ ಸಂಘ, ಪುತ್ತೂರು ತಾಲೂಕು ಪತ್ರಕರ್ತರ ಸಂಘ, ಬಡಗನ್ನೂರು ಗ್ರಾಮ ಪಂಚಾಯತ್, ಸರ್ವೋದಯ ವಿದ್ಯಾಸಂಸ್ಥೆಗಳು ಸುಳ್ಯಪದವು ಇವುಗಳ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯದಲ್ಲಿ ಜಿಲ್ಲಾದಿಕಾರಿ ಡಾ| ರಾಜೇಂದ್ರ ಕಟ್ಟಾವು ಎಸ್ಸಿ ಕಾಲನಿ, ಪಳ್ಳತ್ತಾರು ಎಂಡೋ ಪೀಡಿತ ಓರ್ವರ ಮನೆಗೆ, ಕನ್ನಡ್ಕದಲ್ಲಿ ಪಂಚಾಯತ್ ವತಿಯಿಂದ ಕಾಯ್ದಿರಿಸಿದ ಮನೆ ನಿವೇಶನ ಸ್ಥಳ, ಅನಾದಿ ಕಾಲದ ಕೆರೆ ಇರುವ ಪ್ರದೇಶ, ಸುಳ್ಯಪದವು ಅಂಗನವಾಡಿ ಮೊದಲಾದೆಡೆಗೆ ಭೇಟಿ ನೀಡಿದರು.
ಅವರು ಮಾತನಾಡಿ, ಹಳ್ಳಿಗಳಲ್ಲಿ ಇನ್ನೂ ಮನೆ, ವಿದ್ಯುತ್ ಸಂಪರ್ಕ ಇಲ್ಲದ ಮನೆಗಳು ಇದೆ ಎನ್ನುವುದು ಕಾಲನಿ ಭೇಟಿ ಸಂದರ್ಭ ಗೋಚರಿಸಿತು. ಜನರ ಬಳಿಗೆ ನಮ್ಮ ಇಲಾಖೆಯ ಅಧಿಕಾರಿಗಳೇ ಹೋಗಿ ಅವರಿಗೆ ಬೇಕಾದ ವ್ಯವಸ್ಥೆ ಕಲ್ಪಿಸಲು ಸೂಚಿಸಿದ್ದೇನೆ ಎಂದರು.
ಸಹಾಯಕ ಆಯುಕ್ತ ಗಿರೀಶ್ ನಂದನ್, ತಹಶೀಲ್ದಾರ್ ರಮೇಶ ಬಾಬು, ಕಂದಾಯ ನಿರೀಕ್ಷಕ ಗೋಪಾಲ್, ಗ್ರಾಮಕರಣಿಕರಾದ ಉಮೇಶ್ ಕಾವಡಿ, ಮಂಜುನಾಥ್, ಪುತ್ತೂರು ತಾಲೂಕು ಆರೋಗ್ಯಾಧಿಕಾರಿ ಡಾ| ದೀಪಕ್ ರೈ, ಈಶ್ವರಮಂಗಲ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ| ನಿಖೀಲ್, ಮಹಿಳಾ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಶ್ರೀಲತಾ, ಬಡಗನ್ನೂರು ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಕೆ., ಉಪಾಧ್ಯಕ್ಷ ಸಂತೋಷ್ ಆಳ್ವ ಪಿಡಿಒ ವಸೀಮ ಗಂಧದ ಮತ್ತಿತರರು ಜತೆಗಿದ್ದರು.
ಹಿರಿಯರ ಜತೆ ಸಮಾಲೋಚನೆ
ಊರಿನ ಹಿರಿಯರಾದ ರಾಮ ಭಟ್, ಇಂದಾಜೆ ಪ್ರಭಾಕರ ನಾಯಕ್, ನಿವೃತ್ತ ಶಿಕ್ಷಕ ರಾಮಣ್ಣ ಗೌಡ, ಹಿರಿಯ ಕೃಷಿಕ ಬುದ್ಧ ನಾಯ್ಕ ಹಳೆಯ ನೆನಪುಗಳನ್ನು ಬಿಚ್ಚಿಟ್ಟರು. ಸರ್ವೋದಯ ಶಾಲಾ ಸಂಚಾಲಕ ಮಹಾದೇವ ಭಟ್, ಗ್ರಾಮ ಪಂಚಾಯತ್ ಮಾಜಿ ಸದಸ್ಯ ವಾಸುದೇವ ಗೌಡ ಮಾತನಾಡಿದರು.
ನಾನು ಮಂಗಳೂರು ಪೇಟೆಯಲ್ಲಿ ಹುಟ್ಟಿ ಬೆಳೆದವಳು. ಹಳ್ಳಿ ಎಂದರೆ ಏನು ಎಂದು ಗೊತ್ತಿರಲಿಲ್ಲ. 1971ರಲ್ಲಿ ಟಿಸಿಚ್ ಮುಗಿಸಿದಾಗ ಈ ಊರಿಗೆ ಮದುವೆ ಆಯಿತು. ಅದೇ ಸಮಯದಲ್ಲಿ ಸರಿಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸವು ಸಿಕ್ಕಿತು. ಆದರೆ ಸರ್ವೋದಯ ಶಾಲೆಯಲ್ಲಿ ಶಿಕ್ಷಕಿ ಒಬ್ಬಳ ಅನಿವಾರ್ಯತೆ ಇದ್ದಾಗ ಸರಕಾರಿ ಕೆಲಸಕ್ಕೆ ರಾಜೀನಾಮೆ ನೀಡಿ ಈ ಖಾಸಗಿ ಶಾಲೆಗೆ ಬಂದೆ. ಈ ಶಾಲೆಯನ್ನು ಉಳಿಸಿ ಬೆಳೆಸಬೇಕು ಎಂದು ನಿವೃತ್ತ ಶಿಕ್ಷಕಿ ಪ್ರೇಮಾ ಹೇಳಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಪತ್ರಕರ್ತ ಡಾ| ಯು.ಪಿ. ಶಿವಾನಂದ ಮಾತನಾಡಿದರು.
ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಶ್ರವಣಕುಮಾರ್ ನಾಳ ಉಪಸ್ಥಿತರಿದ್ದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ವಂದಿಸಿದರು. ಉಪಾಧ್ಯಕ್ಷ ಭಾಸ್ಕರ ರೈ, ಕೋಶಾಧಿಕಾರಿ ಪುಷ್ಪರಾಜ್ ಕಾರ್ಯಕ್ರಮ ನಿರೂಪಿಸಿದರು. ಶನಿವಾರ ರಾತ್ರಿ ಸುಳ್ಯಪದವು ಸರ್ವೋದಯ ಪ್ರೌಢಶಾಲೆಯಲ್ಲಿ ವಾಸ್ತವ್ಯ ಹೊಂದಿದ ಜಿಲ್ಲಾಧಿಕಾರಿ ರವಿವಾರ ಬೆಳಗ್ಗೆ ಮಂಗಳೂರಿಗೆ ತೆರಳಿದರು.