Kalladka: ಕಾರುಗಳ ಅಪಘಾತ; ದಂಪತಿಗೆ ಹಲ್ಲೆ; ಪ್ರಕರಣ ದಾಖಲು
Team Udayavani, Apr 16, 2024, 12:30 AM IST
ಬಂಟ್ವಾಳ: ಕಲ್ಲಡ್ಕ ಸಮೀಪದ ಕೆ.ಸಿ. ರೋಡ್ ನಲ್ಲಿ ಕಾರುಗಳ ಅಪಘಾತಕ್ಕೆ ಸಂಬಂಧಿಸಿದಂತೆ ದಂಪತಿಗೆ ನಾಲ್ವರ ತಂಡವೊಂದು ಹಲ್ಲೆ ನಡೆಸಿದ ಘಟನೆ ಸೋಮವಾರ ನಡೆದಿದೆ.
ಪುತ್ತೂರು ಎರ್ಮುಂಜಪಲ್ಲ ನಿವಾಸಿ ದಂಪತಿ ಮಂಜುನಾಥ ಹಾಗೂ ಪೂರ್ಣಿಮಾ ಹಲ್ಲೆಗೊಳ ಗಾದವರು. ಜತೆಗೆ ಪೂರ್ಣಿಮಾ ಅವರ ಕುತ್ತಿಗೆಯಲ್ಲಿದ್ದ ಬಂಗಾರದ ಚೈನ್ ಕೂಡ ನಾಪತ್ತೆಯಾಗಿದೆ ಎಂದು ಆರೋಪಿಸಲಾಗಿದೆ.
ದಂಪತಿ ಕಾರಿನಲ್ಲಿ ತೆರಳುತ್ತಿದ್ದ ವೇಳೆ ನರಹರಿ ಪರ್ವತ ಬಳಿ ಹರಿಯಾಣ ಮೂಲದ ಕಾರೊಂದು ಓವರ್ಟೇಕ್ ಮಾಡುವ ಭರದಲ್ಲಿ ಢಿಕ್ಕಿ ಹೊಡೆದಿದೆ. ಈ ವೇಳೆ ಕೈ ಸನ್ನೆಯಲ್ಲಿ ಪ್ರಶ್ನಿಸಿದರು ಎನ್ನುವ ಕಾರಣಕ್ಕೆ ಬೆನ್ನಟ್ಟಿಕೊಂಡು ಬಂದು ಕೆ.ಸಿ. ರೋಡ್ನಲ್ಲಿ ಅಡ್ಡಗಟ್ಟಿ ದಂಪತಿಗೆ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಹಲ್ಲೆ ಯಿಂದ ಮಂಜುನಾಥ ಅವರ ಕಣ್ಣಿಗೆ ಗಾಯವಾಗಿದ್ದು, ಪೊಲೀಸರು ವಾಹನ ಮತ್ತು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.