ಅಭಿವೃದ್ಧಿ ನಿರೀಕ್ಷೆಯಲ್ಲಿದೆ ನಂದಿನಿ ಉಗಮ ತಾಣ
ರಸ್ತೆಗಳು ಸಂಚಾರ ಯೋಗ್ಯವಾಗಲಿ; ಬಸ್ ಸೌಕರ್ಯಕ್ಕೆ ಒತ್ತು ಸಿಗಲಿ
Team Udayavani, Aug 22, 2022, 10:35 AM IST
ಕೈಕಂಬ: ಇತಿಹಾಸ ಪ್ರಸಿದ್ಧ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಸುತ್ತ ಹರಿಯುವ ನಂದಿನಿ ನದಿಯ ಉಗಮ ಸ್ಥಾನವಾಗಿ ಪ್ರಸಿದ್ಧಿ ಪಡೆದ ಬಡಗ ಎಡಪದವು ಗ್ರಾಮದಲ್ಲಿ ಮೂಲ ಸೌಕರ್ಯಗಳೂ ಸೇರಿ ಅಭಿವೃದ್ಧಿ ಕಾರ್ಯಗಳು ಯಾವಾಗ ಗರಿಗೆದರುವುದೋ ಎಂಬ ನಿರೀಕ್ಷೆ ಹೊತ್ತು ಸ್ಥಳೀಯರು ಕಾಯುತ್ತಿದ್ದಾರೆ.
ಮರದಿಂದಾವೃತವಾದ ನಾಗಬನ, ತಗ್ಗಿಬಗ್ಗಿ ಕೊಂಡು ನಡೆದು ಸಾಗ ಬೇಕಾದ ದಾರಿ, ಝಳುಝುಳು ನೀರಿನ ನಿನಾದದೊಂದಿಗೆ ತಂಪಾದ ವಾತಾವರಣ ದಲ್ಲಿ ಇಲ್ಲಿ ನಂದಿನಿ ನದಿಯ ಉಗಮವಾಗಿರುವುದು ಬಡಗ ಎಡಪದವಿನ ಕುರಿತು ಮಿಜಾರಿನ ಉರ್ಕಿ ಕನಕಬೆಟ್ಟುವಿನಲ್ಲಿ ಉಲ್ಲೇಖವಿದೆ.
2015ರಲ್ಲಿ ರೂಪುಗೊಂಡ ಗ್ರಾ.ಪಂ.
ಎಡಪದವು ಗ್ರಾಮ ಪಂಚಾಯತ್ನಿಂದ 2015ರಲ್ಲಿ ವಿಭಜನೆಗೊಂಡು ಪ್ರತ್ಯೇಕ ಬಡಗ ಎಡಪದವು ಗ್ರಾಮ ಪಂಚಾಯತ್ ಆಗಿ ರೂಪುಗೊಂಡ ಗ್ರಾಮ ಪಂಚಾಯತ್ ನಲ್ಲಿ 11 ಸದಸ್ಯರಿದ್ದಾರೆ.
ಅಮೃತ ಗ್ರಾಮ ಪಂಚಾಯತ್ ಯೋಜನೆಗೆ ಆಯ್ಕೆ
ದೇಶ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸವಿನೆನೆಪಿಗಾಗಿ ಮುಖ್ಯಮಂತ್ರಿ ಘೋಷಿಸಿರುವ ಅಮೃತ ಗ್ರಾಮ ಪಂಚಾಯತ್ ಯೋಜನೆಯಲ್ಲಿ ಜಿಲ್ಲೆಯಿಂದ 27 ಗ್ರಾಮ ಪಂಚಾಯತ್ ಆಯ್ಕೆಯಾಗಿದ್ದು, ಮಂಗಳೂರು ತಾಲೂಕಿನಿಂದ ಆಯ್ಕೆಯಾದ 5 ಗ್ರಾ.ಪಂ. ಗಳಲ್ಲಿ ಬಡಗ ಎಡಪದವು ಒಂದು.
ಈ ಯೋಜನೆಯಲ್ಲಿ ಬೀದಿ ದೀಪ ಅಳವಡಿಕೆ, ಕುಡಿಯುವ ನೀರಿನ ನಳ್ಳಿ ಸಂಪರ್ಕ, ಸಂಪೂರ್ಣ ಘನತ್ಯಾಜ್ಯ ವಿಂಗಡನೆ, ವಿಲೇವಾರಿ, ಗ್ರಾಮ ಪಂಚಾಯತ್ ಕಟ್ಟಡಕ್ಕೆ ಸೌರವಿದ್ಯುತ್ ಅಳವಡಿಕೆ, ಉದ್ಯಾನವನಗಳ ನಿರ್ಮಾಣ, ಗ್ರಾಮ ಪಂಚಾಯತ್ ಗ್ರಂಥಾಲಯಗಳ ಡಿಜಿಟಲೀಕರಣ, ಅಂಗನವಾಡಿ ಕೇಂದ್ರಗಳಿಗೆ ಕುಡಿಯುವ ನೀರು, ಶೌಚಾಲಯ, ಆಟದ ಮೈದಾನ, ಆವರಣ ಗೋಡೆ ನಿರ್ಮಾಣ ಕಾರ್ಯಗಳನ್ನು ಮಾಡಲಾಗುತ್ತದೆ. ಇದನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ್ದಲ್ಲಿ 25 ಲಕ್ಷ ರೂಪಾಯಿ ಅನಿರ್ಬಂಧಿತ ಅನುದಾನವನ್ನು ಸರಕಾರದ ವತಿಯಿಂದ ನೀಡಲಾಗುತ್ತದೆ.
2018ರಿಂದ ಸುವರ್ಣ ಗ್ರಾಮ ಯೋಜನೆಯು ಸಮುದಾಯ ಭವನದಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದೆ. ಒಂದೇ ಸೂರಿನಡಿಯಲ್ಲಿ ಎಲ್ಲ ಸರಕಾರಿ ಸೇವೆಯನ್ನು ನೀಡುವ ಮಾದರಿ ಪಂಚಾಯತ್ ಕಟ್ಟಡಕ್ಕೆ 1.66 ಕೋ.ರೂ.ನ ಯೋಜನೆ ರೂಪಿಸಲಾಗಿದ್ದು, ನರೇಗಾ ಯೋಜನೆಯಡಿಯಲ್ಲಿ 35 ಲಕ್ಷ ರೂಪಾಯಿ ಅನುದಾನದಲ್ಲಿ ಈಗಾಗಲೇ ಕಾರ್ಯ ಆರಂಭಿಸಲಾಗಿದೆ. ಸರಕಾರದಿಂದ ಹೊಸ ಪಂಚಾಯತ್ ಕಟ್ಟಡಕ್ಕೆ 20 ಲಕ್ಷ ರೂಪಾಯಿ ಅನುದಾನ, ತಾಲೂಕು ಪಂಚಾಯತ್ನಿಂದ ಅನುದಾನ, ಶಾಸಕ ಅನುದಾನ ನೀಡುವ ಭರವಸೆ ಇದೆ.
ಬಂಗಾರಗುಡ್ಡೆಯಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ 4 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಟೆಂಡರ್ ಕೂಡ ನಡೆದಿದೆ. ಆದರೆ ಮಳೆಯಿಂದಾಗಿ ಕಾಮಗಾರಿ ಪ್ರಾರಂಭವಾಗಿಲ್ಲ. ಇದು ಪೂರ್ಣಗೊಂಡರೆ ಬಂಗಾರಗುಡ್ಡೆ ಪ್ರದೇಶಗಳಿಗೆ ಕೃಷಿಕರಿಗೆ ಉಪಯುಕ್ತವಾಗಲಿದೆ.
ಬೇಡಿಕೆಗಳು ಹಲವು
ಬಡಗ ಎಡಪದವು ಗ್ರಾಮದ ದಡ್ಡಿ, ಧೂಮ ಚಡವು, ಬೈತರಿ ಬೆಳ್ಳೆಚಾರು ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿ 169 ಹಾದು ಹೋಗುತ್ತಿದೆ. ಪೇಟೆಯಿಂದ ದೂರವಿರುವ ಉರ್ಕಿ, ಬಂಗಾರಗುಡ್ಡೆ, ಪೂಪಾಡಿಕಲ್ಲು, ದೊಡ್ಲ, ಮಜ್ಜಿಗುರಿ, ಮಂಜನಕಟ್ಟೆ ಕಾಯರಬೆಟ್ಟು ಪ್ರದೇಶಗಳ ಅಭಿವೃದ್ಧಿಯಾಗಬೇಕಾಗಿದೆ. ಉರ್ಕಿ -ಕೈಕಂಬ, ಬೆಳ್ಳೆಚಾರು- ಉರ್ಕಿ, ಮಜ್ಜಿಗುರಿ, ಇರುವೈಲು, ಪೂಪಾಡಿ ಕಲ್ಲುಗಳಿಗೆ ಸರಕಾರಿ ಬಸ್ ಸೌಲಭ್ಯ ಕಲ್ಪಿಸಬೇಕು. 15 ಕೊಳವೆ ಬಾವಿಗಳ ಕುಡಿಯುವ ನೀರಿಗೆ ಅವಲಂಬಿತವಾಗಿರುವ ಬಡಗ ಎಡಪದವು ಗ್ರಾಮದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅಗತ್ಯವಾಗಿ ರೂಪುಗೊಳ್ಳಬೇಕಿದೆ. ಈಗಾಲೇ ಪಲ್ಗುಣಿ ವೆಂಟೆಡ್ ಡ್ಯಾಂ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿದೆ. ಮಜ್ಜಿಗುರಿ ಬಳಿ ಮನೆ ನಿವೇಶನಕ್ಕೆ ಸೂಕ್ತ ಸ್ಥಳವಿಲ್ಲದೇ ಇರುವುದರಿಂದ ದಡ್ಡಿಯಲ್ಲಿ ನಿವೇಶನ ಮಂಜೂರಾತಿಗಾಗಿ ವಸತಿ ನಿಗಮಕ್ಕೆ ಮನವಿ ಕಳುಹಿಸಲಾಗಿದೆ. ಡಿಸಿ ಮನ್ನಾ ಜಾಗ 6 ಎಕರೆ ಇದೆ. ಅದರಲ್ಲಿ ಅಂಬೇಡ್ಕರ್ ಭವನಕ್ಕೆ 1.5 ಎಕರೆ ಜಾಗ ಕಾಯ್ದಿರಿಸಲಾಗಿದೆ. 10 ಲಕ್ಷ ರೂ. ಅನುದಾನವೂ ಬಿಡುಗಡೆಗೊಂಡಿದೆ. ಅಲ್ಲಿ ಆಟದ ಮೈದಾನ ಹಾಗೂ ಮನೆ ನಿವೇಶನಕ್ಕೆ ಜಾಗ ಕಾಯ್ದಿರಿಸಬೇಕು ಎಂಬ ಬೇಡಿಕೆಗಳೂ ಇವೆ.
ಸರ್ವತೋಮುಖ ಅಭಿವೃದ್ಧಿ: ಪಂಚಾಯತ್ನ ನೂತನ ಕಟ್ಟಡ ನಿರ್ಮಾಣವಾಗಬೇಕಾಗಿದೆ. ಇದರಲ್ಲಿ ಬ್ಯಾಂಕ್, ಅಂಚೆ ಕಚೇರಿ ಸೇರಿದಂತೆ ಎಲ್ಲ ಸರಕಾರಿ ಸೇವೆಗಳು ಗ್ರಾಮಸ್ಥರಿಗೆ ಸಿಗಬೇಕು. ಕುಡಿಯುವ ನೀರಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಶೀಘ್ರ ಅನುಷ್ಠಾನವಾಗಬೇಕು. ಒಳ ರಸ್ತೆಗಳ ಅಭಿವೃದ್ಧಿ, ಸರಕಾರಿ ಬಸ್ಗಳ ಸೇವೆ ಸಿಗಬೇಕು. ಅಮೃತ ಗ್ರಾಮ ಪಂಚಾಯತ್ ಯೋಜನೆಯಲ್ಲಿ ಬಡಗ ಎಡಪದವು ಗ್ರಾಮ ಆಯ್ಕೆಯಾಗಿರುವುದು ತುಂಬಾ ಖುಷಿ ಕೊಟ್ಟಿದೆ. ಇದರಿಂದ ಗ್ರಾಮದ ಸರ್ವತೋಮುಖ ಅಭಿವೃದ್ಧಿ ಸಾಧ್ಯವಿದೆ.. – ಹರೀಶ್, ಅಧ್ಯಕ್ಷರು, ಬಡಗ ಎಡಪದವು ಗ್ರಾ.ಪಂ.
-ಸುಬ್ರಾಯ ನಾಯಕ್ ಎಕ್ಕಾರು