ನೀರಿನ ಕಟ್ಟ ನಿರ್ಮಾಣಕ್ಕೆ ಎನ್ನೆಸ್ಸೆಸ್ ಸಹಯೋಗ
ಅಂತರ್ಜಲ ಸಂರಕ್ಷಣೆಗೆ ಕನಕಮಜಲು ಯುವಕ ಮಂಡಲದ ಹೊಸ ಉಪಕ್ರಮ
Team Udayavani, Dec 11, 2019, 4:21 AM IST
ಸುಳ್ಯ: ಅಂತರ್ಜಲದ ಸಂರಕ್ಷಣೆ ಅಗತ್ಯ ಈ ಕಾಲಘಟ್ಟದಲ್ಲಿ ದೇಶದ ಭವಿಷ್ಯದಷ್ಟೇ ಮಹತ್ವದ್ದು. ಇದನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ವಿದ್ಯಾರ್ಥಿಗಳನ್ನು ಜತೆಗೂಡಿಸಿ ಕೃಷಿ ಕ್ಷೇತ್ರದಲ್ಲಿ ನೀರಿನ ಕಟ್ಟಗಳನ್ನು ನಿರ್ಮಿಸಿ ಯುವ ಸಮುದಾಯದಲ್ಲಿ ಜಾಗೃತಿ ಮೂಡಿಸುವ ವಿಶೇಷ ಪ್ರಯತ್ನ ನಡೆದಿದೆ.
ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ, ನೆಹರೂ ಯುವ ಕೇಂದ್ರ ಮಂಗಳೂರು, ಕನಕಮಜಲು ಯುವಕ ಮಂಡಲ ಇವುಗಳ ಸಹಯೋಗದಲ್ಲಿ ಸುಳ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳು ಕನಕಮಜಲಿನ ಮುಗೇರು ಎಸ್ಟೇಟಿನ ಪ್ರಭಾಕರ ರಾವ್ ಮತ್ತು ದಿನೇಶ್ ರಾವ್ ಇವರ ಕೃಷಿ ಕ್ಷೇತ್ರದಲ್ಲಿ ಜಲ ಸಂರಕ್ಷಣೆ ಪ್ರಯುಕ್ತ ನೀರಿನ ಕಟ್ಟಗಳನ್ನು ನಿರ್ಮಿಸುವ ಕಾಯಕ ಮಂಗಳವಾರ ನಡೆಯಿತು.
39 ವಿದ್ಯಾರ್ಥಿಗಳು
ಪ್ರತಿ ವರ್ಷದ ನೀರಿನ ಕಟ್ಟಗಳ ನಿರ್ಮಾಣಕ್ಕೆ ಒತ್ತು ನೀಡುವ ಮುಗೇರು ಎಸ್ಟೇಟ್ನಲ್ಲಿ ಈ ಬಾರಿ ಆ ಕಾರ್ಯಕ್ಕೆ ಕನಕಮಜಲು ಯುವಕ ಮಂಡಲ ಜತೆ ಸೇರಿ ವಿದ್ಯಾರ್ಥಿಗಳು ಸಹಯೋಗ ನೀಡಿದರು. ಎನ್ನೆಸ್ಸೆಸ್ನ 39 ವಿದ್ಯಾರ್ಥಿಗಳು ಕಟ್ಟ ನಿರ್ಮಾಣದ ಕೆಲಸದಲ್ಲಿ ಭಾಗಿಯಾದರು. ನುರಿತ ಕೆಲ ಕೆಲಸಗಾರರ ಸಹಕಾರ ಪಡೆದು ಬೆಳಗ್ಗಿನಿಂದ ಸಂಜೆ ತನಕ ಈ ಕಾರ್ಯದಲ್ಲಿ ಕೈಜೋಡಿಸಿದರು. ಸಣ್ಣ ತೋಡಿಗೆ ಮರಳು ತುಂಬಿದ ಚೀಲ ಬಳಸಿ ಕಟ್ಟ ನಿರ್ಮಿಸಲಾಯಿತು. ಒಂದು ದಿನದಲ್ಲಿ ಎರಡು ಕಟ್ಟ ನಿರ್ಮಿಸಿ ನೀರು ಕೆಳಭಾಗಕ್ಕೆ ಹರಿಯದಂತೆ ತಡೆ ಒಡ್ಡು ನಿರ್ಮಿಸಲಾಯಿತು. ಈ ಮೂಲಕ ಮುಂದಿನ ಕೆಲವು ಸಮಯ ಇಲ್ಲಿ ನೀರು ನಿಂತು ಅಂತರ್ಜಲ ಸಂರಕ್ಷಣೆ ಸಾಧ್ಯವಾಗಲಿದೆ.
ಕನಸು ಬಿತ್ತಿದ ಯುವಕ ಮಂಡಲ
ಕನಕಮಜಲು ಯುವಕ ಮಂಡಲ ನೀರಿನ ಸಂರಕ್ಷಣೆಯ ನಿಟ್ಟಿನಲ್ಲಿ ಕಳೆದ 15 ವರ್ಷಗಳಿಂದ ಗ್ರಾಮದಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ನಡೆಸುತ್ತಿದೆ. 2004-05ರಲ್ಲಿ ಜಲ ತಜ್ಞ ಶ್ರೀಪಡ್ರೆ ಅವರು ಮಾಹಿತಿ ನೀಡುವ ಮೂಲಕ ಈ ಕಾರ್ಯಕ್ಕೆ ಚಾಲನೆ ಸಿಕ್ಕಿತ್ತು. ಗ್ರಾಮದ ಬೇರೆ ಬೇರೆ ಭಾಗದಲ್ಲಿ ಪ್ರಾಯೋಗಿಕ ನೆಲೆಯಲ್ಲಿ ಆಸಕ್ತರ ಸಹಕಾರದೊಂದಿಗೆ ವರ್ಷಂಪ್ರತಿ ಒಂದು ಅಥವಾ ಎರಡು ಮಣ್ಣಿನ ಅಥವಾ ಮರಳು ಕಟ್ಟ ನಿರ್ಮಾಣಕ್ಕೆ ಕೈ ಜೋಡಿಸಿ ಇಡೀ ಗ್ರಾಮದಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ.
ಜಲಸಂರಕ್ಷಣೆಯ ಅನಿವಾರ್ಯತೆ ಗರಿಷ್ಠ ಪ್ರಮಾಣದಲ್ಲಿರುವ ಕಾಲಘಟ್ಟವಿದು. ಹಾಗಾಗಿ ಪ್ರತಿ ವರ್ಷ ನೀರಿನ ಸಂರಕ್ಷಣೆಗೆ ಪೂರಕವಾಗಿ ಯುವಕ ಮಂಡಲ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ಮುಂದಕ್ಕೆ ಜನರು ಸ್ವಯಂಪ್ರೇರಿತ ನೆಲೆಯಲ್ಲಿ ನೀರಿನ ಸಂರಕ್ಷಣೆಗೆ ಒತ್ತು ನೀಡಲು ಇದು ಸಹಕಾರಿ ಎಂಬ ನಿರೀಕ್ಷೆಯಿಂದ ಯುವಕ ಮಂಡಲದ ಜಾಗೃತಿ ಕಾರ್ಯದ ಆಶಯ.
ಯುವಕರಿಗೆ ಪ್ರೇರಣೆ
ಯುವಕ ಮಂಡಲವು ಮುಗೇರು ಎಸ್ಟೇಟ್ ಸಹಕಾರದಲ್ಲಿ ಎನ್ನೆಸ್ಸೆಸ್ ವಿದ್ಯಾರ್ಥಿಗಳ ಜತೆಗೂಡಿ ನೀರಿನ ಕಟ್ಟ ನಿರ್ಮಿಸಿ ಜಲ ಸಂರಕ್ಷಣೆಗೆ ಪ್ರೋತ್ಸಾಹ ನೀಡಿದೆ. ಯುವ ಸಮುದಾಯವನ್ನು ಪ್ರೇರೇಪಿಸುವ ಪ್ರಯತ್ನ ಎನ್ನುತ್ತಾರೆ ಕನಕಮಜಲು ಯುವಕ ಮಂಡಲದ ಮಾಜಿ ಅಧ್ಯಕ್ಷ, ಅರೆಭಾಷೆ ಅಕಾಡೆಮಿ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ.
ಒಳ್ಳೆಯ ಅನುಭವ
ವಿದ್ಯಾರ್ಥಿಗಳನ್ನು ನೀರಿನ ಸಂರಕ್ಷಣೆಯ ಪಾಠಕ್ಕೆ ಒಡ್ಡಿಕೊಳ್ಳುತ್ತಿರುವುದು ಇದು ಎರಡನೇ ವರ್ಷ. ಕಳೆದ ಬಾರಿಯೂ ಕನಕಮಜಲಿನ ಯುವಕ ಮಂಡಲದ ಸಹಕಾರ ಪಡೆದು ಇಂತಹ ನೀರಿನ ಕಟ್ಟ ನಿರ್ಮಾಣದಲ್ಲಿ ಪಾಲ್ಗೊಂಡಿದ್ದೇವೆ. ಎನ್ನೆಸ್ಸೆಸ್ ವಿದ್ಯಾರ್ಥಿಗಳಿಗೆ ಇದೊಂದು ಒಳ್ಳೆಯ ಅನುಭವ.
– ಧನರಾಜ್, ಎನ್ನೆಸ್ಸೆಸ್ ಕಾರ್ಯಕ್ರಮ ಸಂಯೋಜಕ, ಸುಳ್ಯ ಸ.ಪ್ರ.ದ. ಕಾಲೇಜು
- ಕಿರಣ್ ಪ್ರಸಾದ್ ಕುಂಡಡ್ಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap;ಅರಂತೋಡು: ಕಾರು – ಬೈಕ್ ಢಿಕ್ಕಿ: ಸವಾರ ಸಾವು
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು
Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು