ಪೊಲೀಸ್ ಕರ್ತವ್ಯಕ್ಕೆ ಅಡ್ಡಿ ಪ್ರಕರಣ: ಆರೋಪಿಗಳು ಖುಲಾಸೆ
Team Udayavani, Aug 1, 2023, 11:21 PM IST
ಬಂಟ್ವಾಳ: ಕಳೆದ 7 ವರ್ಷಗಳ ಹಿಂದೆ ಕಲ್ಲಡ್ಕದಲ್ಲಿ ನಡೆದ ಸಮಾವೇಶವೊಂದರ ಭಾಷಣದ ವೇಳೆ ಪೊಲೀಸ್ ಕರ್ತವ್ಯಕ್ಕೆ ಅಡ್ಡಿ ಪಡಿಸಿ ಗಲಭೆ ಹಚ್ಚಿಸಲು ಯತ್ನಿಸಿದ್ದಾರೆ ಎಂದು ಆರೋಪ ಎದುರಿಸುತ್ತಿದ್ದ ಎಲ್ಲ ಆರೋಪಿಗಳನ್ನು ಮಂಗಳೂರಿನ 1ನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಖುಲಾಸೆಗೊಳಿಸಿ ಆದೇಶ ನೀಡಿದೆ.
2014ರ ಮಾರ್ಚ್ 8ರಂದು ಕಲ್ಲಡ್ಕದಲ್ಲಿ ಕಾಂಗ್ರೆಸ್ ಸಾಮರಸ್ಯ ಸಮಾವೇಶ ಆಯೋಜನೆಗೊಂಡಿದ್ದು, ಅದರ ಭಾಷಣವನ್ನು ವಿರೋಧಿಸಿ ಸುಮಾರು 30-40 ಮಂದಿ ಆರೋಪಿಗಳು ಬಂದೋಬಸ್ತ್ ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬಂದಿಯ ಕರ್ತವ್ಯಕ್ಕೆ ಅಡ್ಡಿಪಡಿಸಿ ಹಲ್ಲೆಯ ಜತೆಗೆ ಕೊಲೆ ಮಾಡಲು ಯತ್ನಿಸಿದ್ದು, ಸಾರ್ವಜನಿಕರಿಗೆ ಸೊತ್ತುಗಳಿಗೆ ಬೆಂಕಿ ಹಚ್ಚಿ ಜನರಿಗೆ ತೊಂದರೆ ನೀಡಿದ್ದರು ಎಂದು ಆರೋಪಿಸಲಾಗಿತ್ತು.
ಘಟನೆಗೆ ಸಂಬಂಧಿಸಿ ಕೃಷ್ಣಪ್ಪ ಆಚಾರ್ಯ ಹಾಗೂ ಇತರ 28 ಮಂದಿಯ ವಿರುದ್ಧ ಬಂಟ್ವಾಳ ನಗರ ಪೊಲೀಸರು ಸುಮೊಟೊ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಆದರೆ ದೂರುದಾರರು ನ್ಯಾಯಾಲಯಕ್ಕೆ ಸಾಕ್ಷ್ಯಾಧಾರಗಳನ್ನು ಒದಗಿಸಲು ವಿಫಲರಾದ ಹಿನ್ನೆಲೆಯಲ್ಲಿ ನ್ಯಾಯಾಲಯವು ಆರೋಪಿಗಳನ್ನು ಖುಲಾಸೆಗೊಳಿಸಿದೆ. ಆರೋಪಿಗಳ ಪರ ಹಿರಿಯ ನ್ಯಾಯವಾದಿ ಕೆ. ಶಂಭು ಶರ್ಮ ಅವರು ವಾದಿಸಿದ್ದರು.