ಸುಬ್ರಹ್ಮಣ್ಯ: ಕುಸಿತ ಭೀತಿಯಲ್ಲಿ ಹೆದ್ದಾರಿ ಬದಿಯ ಬರೆ
ಮುಂದಿನ ಮಳೆಗಾಲ ಇನ್ನಷ್ಟು ಅಪಾಯಕಾರಿ;ಎಚ್ಚೆತ್ತುಕೊಳ್ಳಬೇಕಿದೆ ಇಲಾಖೆಗಳು
Team Udayavani, Sep 16, 2022, 11:31 AM IST
ಸುಳ್ಯ: ಸುಬ್ರಹ್ಮಣ್ಯ- ಗುತ್ತಿಗಾರು ಸಂಪರ್ಕ ಹೆದ್ದಾರಿಯ ಬದಿ ಹಲವೆಡೆ ಧರೆ ಹಾಗೂ ಮರಗಳು ಕುಸಿತ ಭೀತಿಯಲ್ಲಿದ್ದು, ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಸಂಚರಿಸಬೇಕಾದ ವಾತವರಣ ನಿರ್ಮಾಗೊಂಡಿದೆ.
ಸುಬ್ರಹ್ಮಣ್ಯ-ಗುತ್ತಿಗಾರು-ಸೋಣಂಗೇರಿ ಹೆದ್ದಾರಿಯ ಕಲ್ಲಾಜೆ, ಮರಕತ ಬಳಿ ಯಿಂದ ನಡುಗಲ್ಲುವರೆಗೆ ಸುಮಾರು ಕಿ.ಮೀ.ನಷ್ಟು ಹೆದ್ದಾರಿ ಬದಿ ಅಪಾಯ ಕಾರಿ ಯಾಗಿ ಪರಿಣಮಿಸಿದೆ. ಹೆದ್ದಾರಿ ಬದಿಯಲ್ಲಿ ಧರೆ ಕುಸಿತಗೊಂಡಿದ್ದು, ಮರಗಳು ಅಲ್ಲಲ್ಲಿ ಸಿಲುಕಿಕೊಂಡಿವೆ.
ಏನಾಗಿದೆ?
ಆಗಸ್ಟ್ ತಿಂಗಳ ಮೊದಲ ವಾರ ಸುರಿದ ಭಾರೀ ಮಳೆ ಸಂದರ್ಭದಲ್ಲಿ ಸುಳ್ಯ ತಾಲೂಕಿನ ಹಲವೆಡೆ ಭೂ ಕುಸಿತದ ದುರಂತಗಳು ಸಂಭವಿಸಿದ್ದವು. ಇಲ್ಲಿನ ಹೆದ್ದಾರಿ ಕಲ್ಲಾಜೆ ಬಳಿಯಿಂದ ನಡುಗಲ್ಲುವರೆಗೆ ಹೆದ್ದಾರಿ ಬದಿಯ ಹಲವೆಡೆ ಧರೆಗಳು ಹೆದ್ದಾರಿಗೆ ಕುಸಿತಗೊಂಡಿದ್ದವು. ರಸ್ತೆಯೂ ಬಂದ್ ಆಗಿತ್ತು.
ಅಪಾಯಕಾರಿ
ಕುಸಿತಗೊಂಡ ಧರೆಗಳು ಇನ್ನೂ ಕುಸಿತದ ಭೀತಿಯಲ್ಲಿದೆ. ಮರಗಳು ಕೆಲವೆಡೆ ಧರೆಯಲ್ಲೇ ಸಿಲುಕಿಕೊಂಡು ಆಗಲೋ- ಈಗಲೋ ಹೆದ್ದಾರಿಗೆ ಬೀಳಲಿದೆ ಎಂಬ ಆತಂಕ ಸೃಷ್ಟಿಸಿದೆ. ಕುಸಿತ ಭೀತಿಯ ಧರೆ, ಮರಗಳ ತೆರವಿಗೆ ಜಿಲ್ಲಾಧಿಕಾರಿ, ಜಿಲ್ಲಾ ಉಸ್ತುವಾರಿ ಸಚಿವರು ಸೂಚಿಸಿದ್ದರೂ ಪರಿಹಾರ ಕಾರ್ಯ ನಡೆಸಿಲ್ಲ ಎಂಬ ದೂರು ಕೇಳಿ ಬಂದಿದೆ.
ಮುಂದಿನ ಮಳೆಗಾಲದ ಆತಂಕ
ಮುಂದಿನ ಮಳೆಗಾಲದಲ್ಲಿ ಧರೆ ನೀರಿನ ಅಂಶದಿಂದ ಕುಸಿತ ಮುಂದುವರಿದಲ್ಲಿ ಹೆದ್ದಾರಿಯೇ ಬಂದ್ ಆಗುವ ಭೀತಿ ಯನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ. ಧರೆ ಕುಸಿತ ತಡೆಗೆ ಅಪಾಯಕಾರಿ ಭಾಗಗಳಲ್ಲಿ ತಡೆಗೋಡೆಯಂತಹ ಕಾಮಗಾರಿ ಅನಿವಾರ್ಯ ಎನ್ನುತ್ತಾರೆ ವಾಹನ ಸವಾರರು. ಕೂಡಲೇ ಅಪಾಯಕಾರಿ ಸ್ಥಿತಿಯಲ್ಲಿರುವ ಭಾಗದಲ್ಲಿ ಪರಿಹಾರ ಕಾರ್ಯವನ್ನು ಸಂಬಂಧಿಸಿದ ಇಲಾಖೆ ನಡೆಸಲಿ ಎಂದು ಸಾರ್ವಜನಿರು ಆಗ್ರಹಿಸಿದ್ದಾರೆ.
ವರದಿ ಸಲ್ಲಿಕೆ: ಅಪಾಯಕಾರಿ ಸ್ಥಿತಿಯಲ್ಲಿರುವ ಮರಗಳ ಬಗ್ಗೆ ವರದಿಯನ್ನು ಅರಣ್ಯ ಇಲಾಖೆಗೆ ನೀಡಿದ್ದೇವೆ. ಮುಂದಕ್ಕೆ ಅವರು ಕ್ರಮ ಕೈಗೊಳ್ಳಬೇಕಿದೆ. ಮಳೆ ಪೂರ್ಣವಾಗಿ ನಿಲ್ಲದ ಕಾರಣ ಮಣ್ಣು ಇನ್ನೂ ಸಡಿಲ ಸ್ಥಿತಿಯಲ್ಲಿದೆ. ಆದ್ದರಿಂದ ಧರೆ ಕುಸಿತವನ್ನು ಈಗ ತೆರವು ಮಾಡಲು ಸಾಧ್ಯವಿಲ್ಲ. ಮಳೆ ನಿಂತ ಕೂಡಲೇ ಪೂರಕ ಕ್ರಮ ಕೈಗೊಳ್ಳಲಾಗುವುದು. –ಪರಮೇಶ್ವರ, ಎಂಜಿನಿಯರ್, ಲೋಕೋಪಯೋಗಿ ಇಲಾಖೆ ಸುಳ್ಯ