ಆರಾಮವಾಗಿದ್ದೇನೆ ಅಜ್ಜ.. ಕೋಲಾರದಿಂದ ಅಜ್ಜನೊಂದಿಗೆ ಮಾತನಾಡಿದ ಅನುಭವ್
Team Udayavani, Dec 19, 2020, 10:04 AM IST
ಬೆಳ್ತಂಗಡಿ: “ನಾನಿಲ್ಲಿ ಆರಾಮವಾಗಿದ್ದೇನೆ.. ಬೆಳಿಗ್ಗೆ ತಿಂಡಿ ತಿಂದೆ..” ಇದು ಗುರವಾರ ಸಂಜೆ ಅಪಹರಣಕ್ಕೊಳಗಾಗಿ ಇದೀಗ ಕೋಲಾರದಲ್ಲಿ ಪೊಲೀಸ್ ರಕ್ಷಣೆಯಲ್ಲಿರುವ ಉಜಿರೆಯ ಬಾಲಕ ಅನುಭವ್ ಮಾತುಗಳು.
ಕೋಲಾರದಲ್ಲಿ ಪೊಲೀಸರ ರಕ್ಷಣೆಯಲ್ಲಿರುವ ಎಂಟು ವರ್ಷದ ಬಾಲಕ ಅನುಭವ್ ಉಜಿರೆಯಲ್ಲಿರುವ ಅಜ್ಜ ಎ.ಕೆ. ಶಿವನ್ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದರು. ಕಳೆದೆರಡು ದಿನಗಳಿಂದ ಮಗು ಕಾಣದೆ ಒದ್ದಾಡಿದ್ದ ಮನೆಯವರಿಗೆ ಮಗುವಿನೊಂದಿಗೆ ಮಾತನಾಡಿದ ಬಳಿಕ ಇದೀಗ ಸಮಾಧಾನವಾಗಿದೆ.
ಇದನ್ನೂ ಓದಿ:ಉಜಿರೆ ಟು ಕೋಲಾರ: ಬಾಲಕ ಅನುಭವ್ ಅಪಹರಣಕಾರರ ಬಂಧನ ಹೇಗಾಯ್ತು?
ಉಜಿರೆ ಉದ್ಯಮಿ ರಥಬೀದಿ ನಿವಾಸಿ ಎ.ಕೆ.ಶಿವನ್ ಎಂಬುವರ ಮೊಮ್ಮಗ ಅನುಭವ್ (8) ನನ್ನು ಗುರುವಾರ ಸಂಜೆ ಮನೆ ಮುಂಭಾಗದಿಂದ ದುಷ್ಕರ್ಮಿಗಳು ಕಾರಿನಲ್ಲಿ ಅಪಹರಣ ಮಾಡಿದ್ದರು. ಪೊಲೀಸರ ನಿರಂತರ ತನಿಖೆಯ ಬಳಿಕ ಇಂದು ನಸುಕಿನ ಜಾವ ಕೋಲಾರದ ಮಾಸ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಾಲಕನನ್ನು ರಕ್ಷಿಸಿ, ಏಳು ಮಂದಿ ಆರೋಪಿಗಳನ್ನು ಸೆರೆಹಿಡಿಯಲಾಗಿದೆ.
ಒಮ್ಮೆ ತಪ್ಪಿಸಿಕೊಂಡಿದ್ದ!
ನಾನು ಮಕ್ಕಳೊಂದಿಗೆ ಸಂಜೆ ವಾಕಿಂಗ್ ಮುಗಿಸಿ ಮನೆಗೆ ಬಂದೆ. ಈ ವೇಳೆ ಗೇಟ್ ಬಳಿ ಕಾರು ನಿಂತಿತ್ತು. ಇಬ್ಬರು ಕಾರಿನ ಹೊರಗೆ ನಿಂತಿದ್ದರು. ನಾನು ಮಗುವಿನ ಹತ್ತು ಹೆಜ್ಜೆ ಮುಂದೆ ಇದ್ದೆ. ಮಗು ಅವರ ಬಳಿ ಬರುತ್ತಿದ್ದಂತೆ ಅವರಲ್ಲಿ ಒಬ್ಬ ಮಗುವನ್ನು ಹಿಡಿದ, ಆದರೆ ಮಗು ಕೊಸರಾಡಿ ತಪ್ಪಿಸಿಕೊಂಡಿತು, ಅದರೆ ಕೂಡಲೇ ಮತ್ತೊಬ್ಬ ಹಿಡಿದು ಕಾರು ಒಳಗೆ ಹೋದ, ನಾನು ಹತ್ತಿರ ಓಡುವಷ್ಟರಲ್ಲಿ ಅವರು ಕಾರು ಚಲಾಯಿಸಿಕೊಂಡು ಹೋದರು” ಎನ್ನುತ್ತಾರೆ ಬಾಲಕ ಅನುಭವ್ ನ ಅಜ್ಜ ಶಿವನ್.
ಇದನ್ನೂ ಓದಿ: ಅನುಭವ್ ಅಪಹರಣದ ಹಿಂದೆ ಹಲವು ಆಯಾಮ:ಪರಿಚಿತರಿಂದಲೇ ಅಪಹರಣ ಶಂಕೆ! ಏನಿದು ಬಿಟ್ ಕಾಯಿನ್ ರಹಸ್ಯ?
ಕಾರಿನಲ್ಲಿ ನಾಲ್ಕು ಮಂದಿ ಇದ್ದರು. ಇಬ್ಬರು ಕಾರಿನ ಒಳಗೆ ಕುಳಿತಿದ್ದರು. ಇಬ್ಬರು ಹೊರಗೆ ಇದ್ದರು. ಇದವರೆಗೆ ಅವರನ್ನು ನೋಡಿದ ನೆನಪಿಲ್ಲ ಎಂದು ಅವರು ಹೇಳಿದರು.
ಆರೋಪಿಗಳಾದ ಮಂಡ್ಯ ಜಿಲ್ಲೆಯ ಹನುಮಂತ (21), ರಂಜಿತ್ (22), ಮೈಸೂರಿನ ಗಂಗಾಧರ (25), ಬೆಂಗಳೂರು ಎಲೆಕ್ಟ್ರಾನಿಕ್ ಸಿಟಿಯ ಕೋಮಲ್ (23), ಮಾಲೂರು ತಾಲೂಕಿನ ಮಂಜುನಾಥ್ (24) ಮತ್ತು ಮಹೇಶ್ ಕುಮಾರ್ (26) ರನ್ನು ಬಂಧಿಸಲಾಗಿದೆ.