ಪುತ್ತೂರಿನಲ್ಲಿ ಕಾಂಗ್ರೆಸ್ ಗೂಂಡಾ ಸಾಮ್ರಾಜ್ಯ ಸ್ಥಾಪನೆಗೆ ಅವಕಾಶ ನೀಡುವುದಿಲ್ಲ: ಡಿವಿಎಸ್
Team Udayavani, May 3, 2023, 4:38 PM IST
ಪುತ್ತೂರು : ಪುತ್ತೂರಿನಲ್ಲಿ ಕಾಂಗ್ರೆಸ್ ಪಕ್ಷದ ಗೂಂಡಾ ಆಳ್ವಿಕೆಯನ್ನು ತಡೆದದ್ದು ಬಿಜೆಪಿ. ಹಾಗಾಗಿ ಇಲ್ಲಿ ಮತ್ತೆ ಕಾಂಗ್ರೆಸ್ ಅನ್ನು ಗೆಲ್ಲಿಸಿ ಗೂಂಡಾ ಸಾಮ್ರಾಜ್ಯ ಸ್ಥಾಪನೆಗೆ ಮತದಾರ ಅವಕಾಶ ಕೊಡುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, 1994ರ ಹಿಂದೆ ಕಾಂಗ್ರೆಸ್ ಅವಧಿಯಲ್ಲಿ ಪುತ್ತೂರಿನ ಸ್ಥಿತಿ ಹೇಗಿತ್ತು ಅನ್ನುವುದು ಜನರಿಗೆ ತಿಳಿದಿದೆ. ಈಗ ಅಂತಹುದೇ ವಾತಾವರಣ ನಿರ್ಮಿಸುವ ಕಾಂಗ್ರೆಸ್ನವರ ಕನಸು ಭಗ್ನವಾದಂತೆ ಕಾಣುತ್ತಿದೆ. ಆದರೆ ತಡೆಯುವ ಶಕ್ತಿ ಬಿಜೆಪಿ ಇದೆ ಎಂದರು.
131 ಸ್ಥಾನ ಖಚಿತ
ರಾಜ್ಯದಲ್ಲಿ ಈ ಬಾರಿ ಬಿಜೆಪಿ ಪಕ್ಷವು 131 ಸ್ಥಾನ ಗಳಿಸಿ ಅಧಿಕಾರ ಪಡೆಯುವುದು ನಿಶ್ಚಿತ. ಈಗಾಗಲೇ ಬೆಂಗಳೂರಿನಲ್ಲಿ ಮೋದಿ ರ್ಯಾಲಿಗೆ 3.5 ಲಕ್ಷ ಜನ ಭಾಗವಹಿಸಿದ್ದಾರೆ. ಮೋದಿ ಮತ್ತೆ ರಾಜ್ಯಕ್ಕೆ ಬರಲಿದ್ದು ಬರೋಬ್ಬರಿ 32 ಕಿ.ಮೀ.ದೂರ ಕ್ರಮಿಸಿ ಪ್ರಚಾರ ನಡೆಸಲಿದ್ದಾರೆ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್, ಜೆಡಿಎಸ್ ಗರಿಷ್ಠ ಅವಧಿಯಲ್ಲಿ ಆಡಳಿತ ನಡೆಸಿದೆ. ಈ ಮೂರು ಪಕ್ಷಗಳ ಆಳ್ವಿಕೆಯ ಅವಧಿಯಲ್ಲಿನ ರಿರ್ಪೋಟ್ ಕಾರ್ಡ್ ಅನ್ನು ಜನರ ಮುಂದಿಡೋಣ. ಯಾವ ಪಕ್ಷದ ಆಡಳಿತದಲ್ಲಿ ಪ್ರಗತಿ ಕಂಡಿದೆ ಅನ್ನುವುದನ್ನು ಜನರೇ ಮೌಲ್ಯಮಾಪನ ಮಾಡಲಿ ಎಂದು ಡಿವಿಎಸ್ ಹೇಳಿದರು.
ಪಕ್ಷೇತರ-ಕಾಂಗ್ರೆಸ್ ಒಳಒಪ್ಪಂದ
ಪುತ್ತೂರು ಕ್ಷೇತ್ರದಲ್ಲಿ ಸ್ವಯಂ ಘೋಷಿತ ಹಿಂದೂ ಮುಖಂಡ ಪಕ್ಷೇತರ ಅಭ್ಯರ್ಥಿ ಅರುಣ್ ಪುತ್ತಿಲ ಹಾಗೂ ಕಾಂಗ್ರೆಸ್ ಪಕ್ಷದ ನಡುವೆ ಒಳ ಒಪ್ಪಂದ ಏರ್ಪಟ್ಟಿದೆ ಎಂದರು.
22 ಸಾವಿರ ಮತಗಳಿಂದ ಗೆಲುವು
ಪುತ್ತೂರು ಮತ್ತು ಸುಳ್ಯದಲ್ಲಿ ಮಹಿಳೆಯರಿಗೆ ಅವಕಾಶ ನೀಡಲಾಗಿದೆ.ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ಸೋಲುವು ಕಡೆಯಲ್ಲಿ ಮಹಿಳೆಯರಿಗೆ ಅವಕಾಶ ನೀಡಿದೆ ಎಂದು ಆರೋಪಿಸಿದ ಅವರು ಪುತ್ತೂರಿನಲ್ಲಿ ಆಶಾ ತಿಮ್ಮಪ್ಪ ಗೌಡ ಅವರು 22 ಸಾವಿರಕ್ಕಿಂತ ಅಧಿಕ ಮತಗಳಿಂದ ಗೆಲ್ಲಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.