ಕಡು ಬೇಸಗೆಯಲ್ಲೂ ಕೆರೆಯಲ್ಲಿ ನೀರಿನ ಚಿಲುಮೆ
ಕೊಯ್ಯೂರು ಮಲೆಬೆಟ್ಟು ವನದುರ್ಗಾ ದೇವಸ್ಥಾನ
Team Udayavani, May 25, 2019, 6:00 AM IST
ಕೆರೆಯಲ್ಲಿ ಪ್ರಸಕ್ತ ತುಂಬಿರುವ ನೀರು.
ಬೆಳ್ತಂಗಡಿ: ಸುಡು ಬೇಸಗೆಯಲ್ಲೂ ಐತಿಹಾಸಿಕ ಕೊಯ್ಯೂರು ಮಲೆಬೆಟ್ಟು ವನದುರ್ಗಾ ದೇವಸ್ಥಾನ ಕೆರೆಯಲ್ಲಿ ಗಂಗೆ ನಳನಳಿಸುತ್ತಿದ್ದಾಳೆ. ಸುಮಾರು 800 ವರ್ಷಗಳ ಹಿಂದಿನ ಪುರಾತನ ವನದ ಮಡಿಲಲ್ಲಿರುವ ವನದುರ್ಗಾ ದೇವಸ್ಥಾನದ ಸುತ್ತಮುತ್ತ ನೀರಿನ ಅಭಾವ ಸೃಷ್ಟಿಯಾದರೂ ದೇವರ ಸಾನ್ನಿಧ್ಯದಲ್ಲಿ ನೀರಿಗೆ ಕೊರತೆಯಾಗಿಲ್ಲ ಎನ್ನುತ್ತಾರೆ ದೇವಸ್ಥಾನದ ಅರ್ಚಕರು.
ಬೆಟ್ಟದ ನೀರು
ವನದುರ್ಗಾ ದೇವಸ್ಥಾನದ ಬಲಭಾಗ ದಲ್ಲಿರುವ ಕಾಡಿನ ಬಂಡೆಕಲ್ಲಿನ ಸೆಲೆಯಿಂದ ದೇವಸ್ಥಾನದ ಬಳಕೆಗೆ ನಿತ್ಯನಿರಂತರ ನೀರಿನ ಹರಿವಿರುತ್ತದೆ. ಮಾರ್ಚ್, ಎಪ್ರಿಲ್, ಮೇ ತಿಂಗಳ ಕೊನೆಯವರೆಗೂ ಬೆಟ್ಟದ ನೀರು ಲಭಿಸುತ್ತದೆ.
ಕೆರೆ ನೀರು ಪರಿಶುದ್ಧ
2008ರಲ್ಲಿ ದೇಗುಲ ಜೀರ್ಣೋ ದ್ಧಾರಗೊಂಡು ಪುನಃಪ್ರತಿಷ್ಠೆ ಸಂದರ್ಭ ದೇಗುಲ ಮುಂಭಾಗ 30 ಅಡಿಯ ಕೆರೆಯನ್ನು ನಿರ್ಮಿಸಲಾಗಿತ್ತು. ಅಂದಿ ನಿಂದ ಇಂದಿನವರೆಗೂ ನೀರಿನ ಅಭಾವ ಸೃಷ್ಟಿಯಾಗಿರಲಿಲ್ಲ. ಆದರೆ ಈ ಬಾರಿ ಬೇಸಗೆಯಲ್ಲಿ ಕೆರೆ ನೀರು ಆವಿಯಾಗಿರುವುದು ಸ್ಥಳೀಯರಿಗೆ ಸ್ವಲ್ಪಮಟ್ಟಿಗೆ ಆತಂಕ ಸೃಷ್ಟಿಯಾಗಿತ್ತು.
10 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿ
ಕೊಳವೆ ಬಾವಿ ಕೊರೆದರೆ ಅಂದಾಜು ರೂ. ಒಂದೂವರೆ ಲಕ್ಷದಲ್ಲಿ ಎಲ್ಲ ಕೆಲಸ ಪೂರ್ಣಗೊಳ್ಳುತ್ತಿತ್ತು. ಆದರೆ ದೇವ ಸ್ಥಾನ ವ್ಯವಸ್ಥಾಪನ ಸಮಿತಿ ಊರ ಭಕ್ತರ ಜತೆಗೂಡಿ ನೀರಿನ ಸಂಸ್ಕರಣೆ, ಶುದ್ಧ ನೀರು ಪಡೆಯುವ ದೃಷ್ಟಿಯಿಂದ ಸುಮಾರು 10 ಲಕ್ಷ ರೂ. ವೆಚ್ಚದಲ್ಲಿ ಕೆರೆ ಅಭಿವೃದ್ಧಿಪಡಿಸುವ ನಿರ್ಧಾರ ಮಾಡಿತ್ತು. ಹಿಟಾಚಿ ಸಹಾಯದಿಂದ ಕಳೆದ ಎಪ್ರಿಲ್ನಲ್ಲಿ ಕೆರೆಯ ಹೂಳೆತ್ತಿ 35 ಅಡಿ ಆಳ ಮಾಡಲಾಗಿದೆ. ಕೆಸರು ತೆಗೆದ 12 ದಿನಗಳಲ್ಲೇ 3 ಅಡಿ ನೀರು ಕೆರೆಯಲ್ಲಿ ತುಂಬಿದೆ. 20 ಅಡಿ ಚೌಕಾಕಾರದ ಕೆರೆ ಸುತ್ತ ಕಲ್ಲು ಕಟ್ಟುವ ಕೆಲಸ ಮುಂದುವರಿದಿದ್ದು, ಮಳೆಗಾಲಕ್ಕೂ ಮುನ್ನ ಕೆರೆ ಅಭಿವೃದ್ಧಿ ಕೆಲಸ ಪೂರ್ಣಗೊಳ್ಳಲಿದೆ. ಈಗಾಗಲೇ 5 ಮಂದಿ ಕೆಲಸಗಾರರು ನಿರಂತರ ಕೆಲಸದಲ್ಲಿ ತೊಡಗಿದ್ದಾರೆ.