ಬೆಟ್ಲಕ್ಕಿ ಸಮೀಪ ಅಪಾಯಕಾರಿ ಹೊಂಡ: ರಸ್ತೆ ಕುಸಿತ ಭೀತಿ
Team Udayavani, Jul 18, 2022, 1:09 PM IST
ಕೋಟ: ಜಿಲ್ಲೆಯ ಪ್ರಮುಖ ಜಿಲ್ಲಾ ಮುಖ್ಯ ರಸ್ತೆಗಳಲ್ಲಿ ಕೋಟ- ಗೋಳಿಯಂಗಡಿ ರಸ್ತೆಯೂ ಒಂದು. ಈ ಬಾರಿ ಮುಂಗಾರಿನಲ್ಲಿ ಸುರಿದ ಭಾರೀ ಮಳೆಯಿಂದಾಗಿ ಈ ರಸ್ತೆಯಲ್ಲಿ ಕೋಟ ಮೂರುಕೈಯಿಂದ 500ಮೀಟರ್ ದೂರದ ಬೆಟ್ಲಕ್ಕಿ ಹಡೋಲು ಸಮೀಪ ರಸ್ತೆ ಅಪಾಯದಲ್ಲಿದೆ. ಮಳೆಯಿಂದಾಗಿ ಮಣ್ಣು ಮೃದುವಾಗಿ ರಸ್ತೆ ಕುಸಿಯುವ ಭೀತಿ ಒಂದೆಡೆಯಾದರೆ, ರಸ್ತೆಯ ಇಕ್ಕೆಲ ದಲ್ಲಿರುವ ನೀರಿನ ಹೊಂಡ (ಹಡೋಲು) ಅಪಾಯಕಾರಿ ರೀತಿಯಲ್ಲಿ ತುಂಬಿರುವುದು ಮತ್ತೂಂದು ಸಮಸ್ಯೆಯಾಗಿದೆ.
ಸಾೖಬ್ರಕಟ್ಟೆ, ಶಿರೂರುಮೂಕೈì, ಕೊಕ್ಕರ್ಣೆ, ಗೋಳಿಯಂಗಡಿ, ಹೆಬ್ರಿ, ಆಗುಂಬೆ ಮುಂತಾದ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ಈ ರಸ್ತೆ ಪ್ರಮುಖ ಗ್ರಾಮಾಂತರ ಭಾಗದ ನಡುವೆ ಹಾದು ಹೋಗುತ್ತದೆ. ಹೀಗಾಗಿ ಪ್ರತಿ ನಿತ್ಯ ಸಾವಿರಾರು ವಾಹನಗಳು ಇಲ್ಲಿ ಸಂಚರಿಸುತ್ತದೆ.
ಹಡೋಲಿನಿಂದ ಬನ್ನಾಡಿಯ ತನಕ ರಸ್ತೆ ಅತ್ಯಂತ ಕಿರಿದಾಗಿದ್ದು, ಬೆಟ್ಲಕ್ಕಿ ತಿರುವಿನ ತನಕ ಎರಡೂ ಕಡೆಗಳಲ್ಲಿ ಅಪಾಯಕಾರಿ ಆವೆಮಣ್ಣಿನ ಹೊಂಡಗಳಿವೆ. ಪ್ರತಿ ಮಳೆಗಾಲದಲ್ಲಿ ಇದರಲ್ಲಿ ರಸ್ತೆಯ ಮಟ್ಟದ ತನಕ ನೀರು ತುಂಬುತ್ತದೆ. ಈ ಬಾರಿ ಅತೀ ಹೆಚ್ಚಿನ ಪ್ರಮಾಣದಲ್ಲಿ ರಸ್ತೆಗೆ ತಾಗಿಕೊಂಡೇ ನೀರಿದೆ. ಜತೆಗೆ ಭಾರೀ ಪ್ರಮಾಣದ ಮಳೆಯಿಂದಾಗಿ ರಸ್ತೆಯ ಇಕ್ಕೆಲದ ಮಣ್ಣು ಕುಸಿಯುತ್ತಿದ್ದು, ಹಳೆಯ ಕಿರು ಸೇತುವೆಗಳು (ಮೋರಿ) ಅಪಾಯದಲ್ಲಿದೆ.
ಹಿಂದೊಮ್ಮೆ ಲಾರಿ, ಕಾರು ಮುಂತಾದ ವಾಹನಗಳು ಮಳೆಗಾಲದಲ್ಲಿ ಆವೆ ಮಣ್ಣಿನ ಹೊಂಡಕ್ಕೆ ಬಿದ್ದು ಇಬ್ಬರು ಮೃತಪಟ್ಟಿದ್ದರು.. ಹೀಗಾಗಿ ರಸ್ತೆಯನ್ನು ವಿಸ್ತರಣೆಗೊಳಿಸಬೇಕು, ಅಪಾಯಕಾರಿ ಆವೆಮಣ್ಣಿನ ಹೊಂಡವಿರುವಲ್ಲಿ ಎರಡು ಕಡೆ ತಡಬೇಲಿ ನಿರ್ಮಿಸಬೇಕು ಎನ್ನುವ ಬೇಡಿಕೆ ಇತ್ತು. ಆದರೆ ಇದುವರೆಗೆ ಬೇಡಿಕೆ ಫಲ ನೀಡಿಲ್ಲ. ಹೀಗಾಗಿ ಹೆಚ್ಚಿನ ಎಚ್ಚರಿಕೆ ಅಗತ್ಯವಿದ್ದು ಅನಾಹುತಕ್ಕೆ ಮುನ್ನ ಆಡಳಿತ ವ್ಯವಸ್ಥೆ ಎಚ್ಚೆತ್ತುಕೊಳ್ಳಬೇಕಿದೆ.
ಪ್ರಸ್ತಾವನೆ ಸಲ್ಲಿಕೆ: ಈ ಪ್ರದೇಶವನ್ನು ಈಗಾಗಲೇ ಗಮನಿಸಿದ್ದು ರಸ್ತೆಯನ್ನು ಸ್ವಲ್ಪ ಪ್ರಮಾಣದಲ್ಲಿ ಎತ್ತರಗೊಳಿಸುವುದು ಹಾಗೂ ಅಗಲಗೊಳಿಸುವುದು, ಎರಡೂ ಕಡೆ ತಡಬೇಲಿ ಅಳವಡಿಸುವ ಕುರಿತು ಈಗಾಗಲೇ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಮತ್ತೂಮ್ಮೆ ಫಾಲೋ ಅಪ್ ಮಾಡಲಾಗುವುದು.-ಮಂಜುನಾಥ, ಸಹಾಯಕ ಅಭಿಯಂತರರು, ಪಿಡಬ್ಲ್ಯುಡಿ ಉಡುಪಿ