ಪ್ರಜಾತಂತ್ರ ಹಬ್ಬದಲ್ಲಿ ಪ್ರತಿಯೊಬ್ಬರೂ ಭಾಗಿಯಾಗಿ: ಉಡುಪಿ ಜಿಲ್ಲಾಧಿಕಾರಿ ಡಾ| ವಿದ್ಯಾಕುಮಾರಿ
Team Udayavani, Mar 30, 2024, 12:02 PM IST
ಬೈಂದೂರು: ಚುನಾವಣೆ ಎನ್ನುವುದು ಪ್ರಜಾಪ್ರಭುತ್ವದ ಹಬ್ಬ. ಕಡ್ಡಾಯವಾಗಿ ಪ್ರತಿಯೊಬ್ಬರೂ ಈ ಹಬ್ಬದಲ್ಲಿ ಭಾಗವಹಿಸಬೇಕು. ಚುನಾವಣೆ ಪ್ರಜಾತಂತ್ರದ ಅಡಿಪಾಯ. ಮುಖ್ಯವಾಗಿ ಯುವ ಸಮುದಾಯ ಉತ್ಸಾಹದಿಂದ ತೊಡಗಿಸಿಕೊಳ್ಳಬೇಕಿದ್ದು, ಮತದಾನದ ಮೂಲಕ ಪ್ರತೀ ನಾಗರಿಕ ತನ್ನ ಜವಾಬ್ದಾರಿ ನಿರ್ವಹಿಸಬೇಕು ಎಂದು ಉಡುಪಿ ಜಿಲ್ಲಾಧಿಕಾರಿ ಡಾ| ವಿದ್ಯಾಕುಮಾರಿ. ಕೆ. ಹೇಳಿದರು.
ಜಿಲ್ಲಾಡಳಿತ ಹಾಗೂ ಸ್ವೀಪ್ ಸಮಿತಿ ನೇತೃತ್ವದಲ್ಲಿ ಬೈಂದೂರು ತಾಲೂಕಿನ ಶಿರೂರು ಅಳ್ವೆಗದ್ದೆ ಮೀನುಗಾರಿಕಾ ಲಂಗರು ಪ್ರದೇಶದಲ್ಲಿ ಆಯೋಜಿಸಲಾಗಿದ್ದ ಮತದಾನ ಜಾಗೃತಿಯನ್ನು ಅವರು ಉದ್ಘಾಟಿಸಿ, ಚುನಾವಣ ದಿನವೆಂದರೆ ರಜಾ ದಿನವಲ್ಲ. ನಮ್ಮ ಹಕ್ಕನ್ನು ಚಲಾಯಿಸಿ ಶೇ. 100 ಮತದಾನದ ಗುರಿ ತಲುಪಬೇಕು ಎಂದರು.
ಜಿ. ಪಂ. ಸಿಇಒ ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷ ಪ್ರತೀಕ್ ಬಾಯಲ್, ಅಪರ ಜಿಲ್ಲಾಧಿಕಾರಿ ಮಮತಾ ಕುಮಾರಿ, ಸಹಾಯಕ ಆಯುಕ್ತೆ ರಶ್ಮಿ ಎಸ್.ಆರ್., ಕರಾವಳಿ ಕಾವಲು ಪಡೆಯ ಎಸ್.ಪಿ.ಮಿಥುನ್, ಸಹಾಯಕ ಚುನಾವಣಾಧಿಕಾರಿ ಮಂಜುನಾಥ್, ಬೈಂದೂರು ತಹಶೀಲ್ದಾರ್ ಪ್ರದೀಪ್, ಡಯಟ್ ಪ್ರಾಂಶುಪಾಲರಾದ ಗೋವಿಂದ ಮಡಿವಾಳ ಉಪಸ್ಥಿತರಿದ್ದರು.
ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಆನಂದ ಎಸ್. ಬಡಕುಂದಿ ಸ್ವಾಗತಿಸಿದರು. ಶಿರೂರು ಗ್ರಾಮ ಪಂಚಾಯತ್ ಪಿಡಿಒ ರಾಜೇಂದ್ರ ವಂದಿಸಿದರು. ತಾ.ಪಂ. ಸಿಬಂದಿ ರೂಪಾ ಕಾರ್ಯಕ್ರಮ ನಿರ್ವಹಿಸಿದರು.
ರಂಗೋಲಿ ಬಿಡಿಸಿದ ಜಿಲ್ಲಾಧಿಕಾರಿ
ಮತದಾನ ಜಾಗೃತಿಗೆ ಸಂಬಂಧಿಸಿ ಶಿರೂರಿನ ಮಹಿಳೆಯರು ಬಂದರು ಪ್ರದೇಶದಲ್ಲಿ ವಿವಿಧ ರಂಗೋಲಿಗಳನ್ನು ಬಿಡಿಸಿದರು. ಜಿಲ್ಲಾಧಿಕಾರಿಗಳು ರಂಗೋಲಿ ಹಾಕುವ ಮೂಲಕ ಚಾಲನೆ ನೀಡಿದ ರಲ್ಲದೇ ಜಾಥಾ ಉದ್ಘಾಟಿಸಿದರು. ಆ ಬಳಿಕ ಜಿಲ್ಲಾಧಿಕಾರಿಗಳು ಸೇರಿದಂತೆ ವಿವಿಧ ಇಲಾಖಾ ಅಧಿಕಾರಿಗಳು ನಾಯ್ಕನಕಲ್ಲು ಸ್ಕೂಬಾ ಡೈವಿಂಗ್ ಪ್ರದೇಶಕ್ಕೆ ತೆರಳಿ ವಿನೂತನವಾಗಿ ಮತದಾನ ಜಾಗೃತಿ ಅಭಿಯಾನದಲ್ಲಿ ಪಾಲ್ಗೊಂಡರು. ಸಮುದ್ರದ ಮಧ್ಯೆಯೇ ಜಿಲ್ಲಾಧಿ ಕಾರಿಗಳು ಪ್ರತಿಜ್ಞಾ ವಿಧಿ ಬೋಧಿಸಿದರು. ಜಿ. ಪಂ. ಸಿಇಒ ಮತ್ತಿತರರು ಸ್ಕೂಬಾ ಡೈವಿಂಗ್ ಮೂಲಕ ತೆರಳಿ ಮತದಾನ ಜಾಗೃತಿ ಮೂಡಿಸಿದರು.