ಅವೈಜ್ಞಾನಿಕ ಕಾಮಗಾರಿಯಿಂದ ಸಂಚಾರಕ್ಕೆ ತೊಡಕು
Team Udayavani, Mar 27, 2022, 12:23 PM IST
ಉಡುಪಿ: ಸುಗಮ ಸಂಚಾರಕ್ಕೆ ನಗರದಲ್ಲಿ ರೂಪಿತ ವಾಗಿರುವ ಅವೈಜ್ಞಾನಿಕ ಕಾಮಗಾರಿಗಳೇ ತೊಡಕಾಗಿ ಪರಿಣಮಿಸಿದೆ.
ಹೊಸ ಕಟ್ಟಡ ನಿರ್ಮಾಣ ಮಾಡುವ ಸಂದರ್ಭದಲ್ಲಿ ಪಾರ್ಕಿಂಗ್ಗೆ ಜಾಗ ನಿಗದಿಪಡಿಸಬೇಕು. ಆದರೆ ಅನುಮತಿ ನೀಡುವ ಸಂದರ್ಭ ಪಾರ್ಕಿಂಗ್ಗೆಂದು ಜಾಗ ತೋರ್ಪಡಿಸಿ ಕ್ರಮೇಣ ಅದನ್ನು ಒತ್ತುವರಿ ಮಾಡುವ ಕೆಲಸ ನಡೆಯುತ್ತಿರುವುದು ಇಷ್ಟೆಲ್ಲ ಟ್ರಾಫಿಕ್ ದಟ್ಟಣೆಗೆ ಕಾರಣವಾಗುತ್ತಿದೆ. ನಗರದ ಅಂಗಡಿ ಮುಂಗಟ್ಟುಗಳ ಎದುರು ಕೂಡ ಅವರ ಸ್ವಂತ ಜಾಗವಾಗಿದ್ದರೆ ಮಾತ್ರ ಸೂಚನಾ ಫಲಕ ಅಳವಡಿಕೆ ಮಾಡಬೇಕು. ವಿನಾ ಕಾರಣ ನೋ ಪಾರ್ಕಿಂಗ್ ಫಲಕ ಅಳವಡಿಕೆ ಮಾಡುವಂತಿಲ್ಲ. ಪ್ರಸ್ತುತ ನಗರದೆಲ್ಲೆಡೆ ರಸ್ತೆ ಬದಿಯಲ್ಲಿರುವ ಬಿಳಿ ಮಾರ್ಕಿಂಗ್ನ ಎಡಬದಿಯಲ್ಲಿ ವಾಹನಗಳನ್ನು ನಿಲುಗಡೆ ಮಾಡಲಾಗುತ್ತಿದೆ.
ಹೆಚ್ಚುವರಿ ಸಿಬ್ಬಂದಿ ನೇಮಕಕ್ಕೆ ಪ್ರಸ್ತಾವನೆ ಪ್ರಸ್ತುತ ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಸಿಬ್ಬಂದಿಗಳ ಕೊರತೆಯೂ ಇದೆ. ಇಬ್ಬರು ಪಿಎಸ್ಐ, 4 ಮಂದಿ ಎಎಸ್ಐ, 11 ಹೆಡ್ ಕಾನ್ಸ್ಟೆಬಲ್ಗಳು, 23 ಮಂದಿ ಕಾನ್ಸ್ಟೆಬಲ್ಗಳಿದ್ದಾರೆ. ಹೆಚ್ಚುವರಿಯಾಗಿ ಇಬ್ಬರು ಎಎಸ್ಐ, ಇಬ್ಬರು ಹೆಡ್ಕಾನ್ಸ್ಟೆಬಲ್, 5 ಮಂದಿ ಕಾನ್ಸ್ಟೆಬಲ್ಗಳನ್ನು ನೇಮಕ ಮಾಡುವಂತೆ ಸಂಚಾರ ಪೊಲೀಸ್ ಠಾಣೆಯಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಸ್ಮಾರ್ಟ್ ಸಿಟಿ ಯೋಜನೆ- ಪರಿಹಾರ
ನಗರದ ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಸ್ಮಾರ್ಟ್ ಸಿಟಿ ಯೋಜನೆ ಮೂಲಕ ಪರಿಹಾರ ಕಂಡುಕೊಳ್ಳಲಾಗುವುದು. ಈಗಾಗಲೇ ಮಣಿಪಾಲದಲ್ಲಿ ಸಿಗ್ನಲ್ ಅಳವಡಿಕೆ ಮಾಡಲಾಗಿದ್ದು, ಯಶಸ್ವಿಯಾಗಿದೆ. ಇದೇ ಮಾದರಿಯಲ್ಲಿ ನಗರದ ಪ್ರಮುಖ ಜಂಕ್ಷನ್ಗಳಲ್ಲಿ ಸಿಗ್ನಲ್ ಅಳವಡಿಕೆ ಮಾಡಲಾಗುವುದು. ಸಂಬಂಧಪಟ್ಟ ಗುತ್ತಿಗೆ ಸಂಸ್ಥೆ ವಿಳಂಬ ಮಾಡುತ್ತಿದ್ದು, ಈ ಬಗ್ಗೆ ಸೂಕ್ತ ವಿವರಣೆ ಕೇಳಿದ್ದೇವೆ. ಇನ್ನೂ ವಿಳಂಬ ಮಾಡಿದರೆ ಗುತ್ತಿಗೆ ಸಂಸ್ಥೆ ಬದಲಾಯಿಸಿ ಇನ್ನೊಂದು ಸಂಸ್ಥೆಗೆ ನೀಡಲಾಗುವುದು. –ಕೆ.ರಘುಪತಿ ಭಟ್, ಶಾಸಕರು
ಇಲಾಖೆಗಳೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ
ಶ್ರೀಕೃಷ್ಣ ಮಠದ ಪರ್ಯಾಯ ಮಹೋತ್ಸವ ಸಂದರ್ಭದಲ್ಲಿ ನಗರದ ರಸ್ತೆಗಳಲ್ಲಿ ಮಾರ್ಕಿಂಗ್ ಮಾಡಲಾಗಿದೆ. ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿದರೂ ಅಡ್ಡಾದಿಡ್ಡಿ ವಾಹನ ನಿಲುಗಡೆಯಾಗುತ್ತಿದೆ. ವಿಶ್ವೇಶ್ವರಯ್ಯ ಮಾರ್ಗದ ಬಳಿ ಮಲ್ಟಿಲೆವೆಲ್ ಪಾರ್ಕಿಂಗ್ ಮಾಡುವ ಯೋಚನೆ ಇದೆ. ಸ್ಮಾರ್ಟ್ ಸಿಟಿ ಯೋಜನೆಯ ಮೂಲಕ ನಗರದ ವಿವಿಧೆಡೆ ಸಿಸಿಕೆಮರಾ ಹಾಗೂ ಸಿಗ್ನಲ್ಲೈಟ್ಗಳನ್ನು ಅಳವಡಿಕೆ ಮಾಡಲಾಗುವುದು. ಸಿಗ್ನಲ್ಗಳನ್ನು ವಿಸ್ತರಿಸುವ ಬಗ್ಗೆ ಸಂಬಂಧಪಟ್ಟ ಇಲಾಖೆಗಳೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು. –ಸುಮಿತ್ರಾ ನಾಯಕ್, ಅಧ್ಯಕ್ಷರು, ಉಡುಪಿ ನಗರಸಭೆ
ನಗರಸಭೆ ಸಹಕಾರ ಅಗತ್ಯ ನಗರದ ಸುಗಮ ಸಂಚಾರ ವ್ಯವಸ್ಥೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ನಗರಸಭೆಯ ಸಹಕಾರವೂ ಮುಖ್ಯವಾಗಿದೆ. ಫುಟ್ಪಾತ್ ತೆರವು, ಸೂಚನಾ ಫಲಕಗಳ ಅಳವಡಿಕೆ, ಮಾರ್ಕಿಂಗ್ ಮಾಡುವ ಬಗ್ಗೆ 2 ಬಾರಿ ನಗರಸಭೆಗೆ ಮನವಿ ಮಾಡಲಾಗಿದೆ. ಟ್ರಾಫಿಕ್ ಠಾಣೆಗೆ ಹೆಚ್ಚುವರಿ ಸಿಬಂದಿ ನೇಮಕದ ಬಗ್ಗೆಯೂ ಪ್ರಸ್ತಾವನೆ ಸಲ್ಲಿಸಲಾಗಿದೆ. ಸುಗಮ ಸಂಚಾರದ ಬಗ್ಗೆ ಸಾರ್ವಜನಿಕರಲ್ಲಿಯೂ ಹೆಚ್ಚು ಜಾಗೃತಿಯಾಗುವ ಅಗತ್ಯವಿದೆ. –ಅಬ್ದುಲ್ ಖಾದರ್, ಉಪ ನಿರೀಕ್ಷಕರು, ನಗರ ಸಂಚಾರ ಠಾಣೆ