P.B.Acharya; ಈಶಾನ್ಯ ರಾಜ್ಯಗಳ ಮಾಜಿ ಗವರ್ನರ್, ಉಡುಪಿಯ ಪಿ. ಬಿ. ಆಚಾರ್ಯ ನಿಧನ
Team Udayavani, Nov 10, 2023, 1:38 PM IST
ಉಡುಪಿ: ಈಶಾನ್ಯಾ ರಾಜ್ಯಗಳ ಮಾಜಿ ಗವರ್ನರ್, ಉಡುಪಿಯ ಪದ್ಮನಾಭ ಬಾಲಕೃಷ್ಣ ಆಚಾರ್ಯ (ಪಿ.ಬಿ. ಆಚಾರ್ಯ) ಇಂದು (ನ.10) ಮುಂಬಯಿ ನಿವಾಸದಲ್ಲಿ ನಿಧನ ಹೊಂದಿದರು. ಪತ್ನಿ ಸವಿತಾ ಆಚಾರ್ಯ, ಮೂವರು ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದಾರೆ. ಮಣಿಪುರ, ನಾಗಲ್ಯಾಂಡ್, ಅರುಣಾಚಲ ಪ್ರದೇಶದ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದರು.
ಉಡುಪಿಯಲ್ಲಿ ಬಾಲಕೃಷ್ಣ, ರಾಧಾ ಆಚಾರ್ಯ ದಂಪತಿ ಪುತ್ರನಾಗಿ 1931ರ ಅ.8ರಂದು ಜನಿಸಿದ್ದರು. ಉಡುಪಿಯ ಕ್ರಿಶ್ಚಿಯನ್ ಹೈಸ್ಕೂಲ್ನಲ್ಲಿ ಮೆಟ್ರಿಕ್ಯುಲೇಷನ್ ಶಿಕ್ಷಣ ಮುಗಿಸಿದ ಅವರು ಎಂಜಿಎಂ ಕಾಲೇಜು ಆರಂಭದ ಪದವಿ ಪ್ರಥಮ ಬ್ಯಾಚ್ನ ವಿದ್ಯಾರ್ಥಿಯಾಗಿದ್ದರು.
ಅನಂತರ ಮುಂಬಯಿ ತೆರಳಿದ ಅವರು ಶಿಕ್ಷಣ, ಉದ್ಯೋಗ ಒಟ್ಟಾಗಿ ನಿರ್ವಹಿಸುತ್ತಾ, ಅಖಿಲ ಭಾರತ ವಿದ್ಯಾರ್ಥಿ ಪರಿಷತ್ತಿನ ರಾಷ್ಟ್ರೀಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಮುಂಬಯಿ ವಿವಿಯಲ್ಲಿ ಎಲ್ಎಲ್ಬಿ ಪದವಿ ಪಡೆದಿದ್ದ ಅವರು ಮುಂಬಯಿ ವಿವಿಯ ಸೆನೆಟ್ ಸದಸ್ಯರಾಗಿದ್ದರು. ಸಂಘ ಪರಿವಾರದ ಸಂಘಟನೆಗಳಲ್ಲಿ ಹಲವು ವರ್ಷ ಸಕ್ರಿಯರಾಗಿದ್ದ ಅವರು ಈಶಾನ್ಯ ರಾಜ್ಯಗಳ ಅಭಿವೃದ್ಧಿ ಮತ್ತು ಶೈಕ್ಷಣಿಕ ವಿಚಾರದಲ್ಲಿ ಆಳವಾದ ಜ್ಞಾನ ಹೊಂದಿದ್ದರು. ಉಡುಪಿಯೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಅವರು ರಾಜ್ಯಪಾಲರಾಗಿದ್ದ ವೇಳೆಯೂ ಉಡುಪಿಗೆ ಆಗಾಗ ಭೇಟಿ ನೀಡುತ್ತಿದ್ದರು.