ಸಂತೆಕಟ್ಟೆಯಲ್ಲಿ ಮುಗಿಯದ ಟ್ರಾಫಿಕ್ ಸಂತೆ
Team Udayavani, Mar 24, 2022, 2:06 PM IST
ಉಡುಪಿ : ಅವೈಜ್ಞಾನಿಕ ಯೋಜನೆಗಳು ಯಾವ ರೀತಿ ತೊಡಕುಂಟು ಮಾಡುತ್ತವೆ ಎನ್ನುವುದಕ್ಕೆ ಸಂತೆಕಟ್ಟೆ ಜಂಕ್ಷನ್ ಉತ್ತಮ ಉದಾಹರಣೆಯಾಗಿದೆ.
ದಟ್ಟಣೆಯಿಂದಲೇ ಇದು ಸಂತೆಕಟ್ಟೆ ಜಂಕ್ಷನ್ ಎಂದು ಅರಿವಾಗುತ್ತದೆ. ಹೆದ್ದಾರಿ, ಕಲ್ಯಾಣಪುರಕ್ಕೆ ಹೋಗುವ ರಸ್ತೆ, ನೇಜಾರು ರಸ್ತೆ, ಸಂತೆಮಾರುಕಟ್ಟೆ, ಮಲ್ಪೆ -ಕೊಡವೂರು ರಸ್ತೆ, ಗೋಪಾಲಪುರ ರಸ್ತೆ ಹೀಗೆ ಅತ್ತಿಂದಿತ್ತ…ಇತ್ತಿಂದತ್ತ ತೆರಳುವುದೇ ಸಮಸ್ಯೆಯಾಗಿ ಪರಿಣಮಿಸುತ್ತಿದೆ.
ಬೆಳಗ್ಗೆ ಹಾಗೂ ಸಂಜೆಯ ಬಳಿಕ ದಟ್ಟಣೆ ಹೆಚ್ಚಾಗಿ ಕಂಡು ಬರುತ್ತಿದೆ. ಪಾದಚಾರಿಗಳು, ವಿದ್ಯಾರ್ಥಿಗಳು, ವಾಹನಗಳ ಸರದಿ ಸಾಲು ದಟ್ಟಣೆಯಿಂದ ತ್ರಾಸದಾಯಕವಾಗುತ್ತಿದೆ.
ಸೂಕ್ತ ಬಸ್ ಬೇ ಕೊರತೆ
ಈ ಭಾಗದಲ್ಲಿ ಸೂಕ್ತ ಬಸ್ ಬೇ ಇಲ್ಲದ ಕಾರಣ ಬ್ರಹ್ಮಾವರ, ಕೆಮ್ಮಣ್ಣು ಭಾಗಗಳಿಗೆ ತೆರಳುವ ಬಸ್ ಗಳು ಸರ್ವಿಸ್ ರಸ್ತೆಯಲ್ಲಿ ನಿಲುಗಡೆಯಾಗುತ್ತಿವೆ. ಇತ್ತ ಕೊಡವೂರು ಹಾಗೂ ಗೋಪಾಲಪುರಕ್ಕೆ ತೆರಳುವವರು ಈ ಭಾಗದಲ್ಲಿ ವಿರುದ್ದ ದಿಕ್ಕಿನಲ್ಲಿ ಆಗಮಿಸುವಾಗ ಎರಡೂ ಭಾಗದಲ್ಲಿ ದಟ್ಟಣೆ ಉಂಟಾಗುತ್ತಿದೆ.
ರವಿವಾರವೂ ತಪ್ಪದ ಟ್ರಾಫಿಕ್
ಶಾಲಾ-ಕಾಲೇಜುಗಳಿಗೆ ರಜೆ ಇದ್ದರೂ ರವಿವಾರ ಸಂತೆಕಟ್ಟೆಯಲ್ಲಿ ಸಂತೆ ನಡೆಯುವ ಕಾರಣ ಟ್ರಾಫಿಕ್ ದಟ್ಟಣೆಗೆ ಏನೂ ಕೊರೆತೆಯಿಲ್ಲದಂತಾಗಿದೆ. ಕಲ್ಯಾಣಪುರಕ್ಕೆ ತೆರಳುವ ರಸ್ತೆಯ ಎರಡೂ ಬದಿಗಳಲ್ಲಿ ವಾಹನ ನಿಲುಗಡೆ ಮಾಡಲಾಗುತ್ತಿದೆ. ಅದೇ ರೀತಿ ಹಿಂದೆ ನಡೆಯುತ್ತಿದ್ದ ಸಂತೆ ಪ್ರದೇಶದಲ್ಲಿಯೂ ಟ್ರಾಫಿಕ್ ದಟ್ಟಣೆ ನಿರಂತರವಾಗಿದೆ. ಸರ್ವಿಸ್ ರಸ್ತೆಯಲ್ಲಿ ಉಂಟಾಗುವ ಟ್ರಾಫಿಕ್ ದಟ್ಟಣೆ ಹೆದ್ದಾರಿ ಯಲ್ಲಿ ಸಾಗುವ ವಾಹನಗಳಿಗೆ ತೊಂದರೆ ಯನ್ನು ಉಂಟುಮಾಡುತ್ತಿವೆ.
ದಿನನಿತ್ಯ ಕಿರಿಕಿರಿ
ಟ್ರಾಫಿಕ್ನಿಂದ ಬಸ್ಗಳ ಸಮಯದ ವೇಳಾಪಟ್ಟಿಯಲ್ಲಿ ತೊಂದರೆಯಾಗುತ್ತಿದ್ದು, ವಿನಾ ಕಾರಣ ಟೈಮಿಂಗ್ಸ್ ವಿಚಾರದಲ್ಲಿ ಬಸ್ ನಿರ್ವಾಹಕರ ನಡುವೆ ಕಿರಿಕಿರಿ ನಡೆಯುತ್ತಿದೆ. ಸಣ್ಣ-ಪುಟ್ಟ ಅಪಘಾತಗಳೂ ಇಲ್ಲಿ ನಿರಂತರ ಎಂಬಂತೆ ನಡೆಯುತ್ತಿವೆ. ಬಸ್ ತಂಗುದಾಣದಲ್ಲಿ ಬಸ್ ನಿಲ್ಲಿಸಿದರೂ ಟ್ರಾಫಿಕ್ ದಟ್ಟಣೆಗೆ ಕಾರಣವಾಗುತ್ತಿರುವುದು ವಿಪರ್ಯಾಸವಾಗಿದೆ.
ಹೆಚ್ಚುವರಿ ಟ್ರಾಫಿಕ್ ಪೊಲೀಸ್ ಅಗತ್ಯ
ಟ್ರಾಫಿಕ್ ದಟ್ಟಣೆ ನಿಯಂತ್ರಿಸಲು ಇಲ್ಲಿ ಟ್ರಾಫಿಕ್ ಪೊಲೀಸರು ದಿನನಿತ್ಯ ಸರ್ಕಸ್ ಮಡುತ್ತಿದ್ದಾರೆ. 3ರಿಂದ 4 ಮಂದಿ ಸಿಬ್ಬಂದಿ ಗಳಿದ್ದರೂ ನಿರ್ವಹಣೆ ಕಷ್ಟಕರವಾಗು ತ್ತಿದೆ. ಅವೈಜ್ಞಾನಿಕ ರೀತಿಯಲ್ಲಿ ಈ ಸರ್ಕಲ್ ರೂಪಿಸಿರು ವುದರಿಂದಾಗಿ ಸಿಗ್ನಲ್ ಅಳವಡಿಸಿದರೂ ಯಾವುದೇ ಪ್ರಯೋಜನವಿಲ್ಲದ ಸ್ಥಿತಿ ಇಲ್ಲಿನ ಮೇಲ್ಸೇತುವೆ ಒಂದೇ ಪರಿಹಾರ ಸಂತೆಕಟ್ಟೆ ಭಾಗದಲ್ಲಿ ಮೇಲ್ಸೇತುವೆ ನಿರ್ಮಾಣಕ್ಕೆ ಈಗಾಗಲೇ ಪ್ರಸ್ತಾವನೆ ಕಳುಹಿಸಲಾಗಿದೆ. ಇದನ್ನು ಕೂಡ ಸೂಕ್ತ ರೀತಿಯಲ್ಲಿ ಮಾಡಿ, ಬಸ್ ಬೇ ಕೂಡ ನಿರ್ಮಿಸುವ ಅಗತ್ಯವಿದೆ. ಸಿಗ್ನಲ್ ಲೈಟ್ಗಳನ್ನು ಅಳವಡಿಸಿದರೂ ಸೂಕ್ತ ಎಡಕ್ಕೆ ಮುಕ್ತಸಂಚಾರ (ಫ್ರೀ ಲೆಫ್ಟ್) ಗೆ ಅನುಕೂಲ ಮಾಡಬೇಕಿದೆ. ಈ ರೀತಿ ಮಾಡಿದರಷ್ಟೇ ಟ್ರಾಫಿಕ್ ಸಮಸ್ಯೆಗೆ ಮುಕ್ತಿ ಸಿಗಲು ಸಾಧ್ಯವಿದೆ.