ಉಡುಪಿ ಎಂಜಿಎಂ ಕಾಲೇಜು; ಉಚಿತ ಆನ್ಲೈನ್ ಕ್ಲಾಸ್ ಪೋರ್ಟಲ್ ಉದ್ಘಾಟನೆ
ಮಣಿಪಾಲ್ ಟೆಕ್ನಾಲಜೀಸ್ ಲಿಮಿಟೆಡ್ ಸಹಯೋಗ
Team Udayavani, Jul 21, 2020, 8:38 AM IST
ಉಡುಪಿ: ಎಂಜಿಎಂ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಮಣಿಪಾಲ್ ಟೆಕ್ನಾಲಜೀಸ್ ಲಿ. (ಎಂಟಿಎಲ್) ಸಹಯೋಗದಲ್ಲಿ ಆರಂಭಿಸಿದ ಉಚಿತ ಆನ್ಲೈನ್ ಕ್ಲಾಸ್ ಪೋರ್ಟಲನ್ನು ಪ್ರಾಂಶುಪಾಲ ಡಾ| ಎಂ.ಜಿ. ವಿಜಯ್ ಸೋಮವಾರ ಉದ್ಘಾಟಿಸಿದರು.
ಶಿಕ್ಷಣ ಪದ್ಧತಿಯ ಶೈಲಿ ಬದಲಾಗುತ್ತಲೇ ಇದೆ. ಈಗ ಕೋವಿಡ್ ಕಾರಣದಿಂದ ಆನ್ಲೈನ್ ತರಗತಿ ಆರಂಭಗೊಂಡಿದೆ. ಮಾರ್ಚ್ನಿಂದ ಜೂ. 15ರ ವರೆಗೆ ನಾವು ಪದವಿ ತರಗತಿಗಳಿಗೆ ಆನ್ಲೈನ್ ತರಗತಿ ನಡೆಸಿದ್ದೆವು. ಹೊಸ ಯೋಜನೆಯು ಮಣಿಪಾಲ್ ಟೆಕ್ನಾಲಜೀಸ್ ಲಿ. ಸಹಯೋಗದಲ್ಲಿ ವಿಶಿಷ್ಟವಾಗಿ ಸಂಯೋಜನೆ
ಗೊಂಡಿದೆ. ತರಗತಿ ಕೊಠಡಿಯಲ್ಲಿ ಶಿಕ್ಷಕರು ಪಾಠ ಮಾಡುವ ಬಹುತೇಕ ಪರಿಣಾಮಗಳನ್ನು ಈ ಆನ್ಲೈನ್ ಕ್ಲಾಸ್ ಪೋರ್ಟಲ್ನಲ್ಲಿ ಅಳವಡಿಸಲಾಗಿದೆ. ವಿದ್ಯಾರ್ಥಿಗಳು ಸಂಶಯವಿದ್ದರೆ ಮತ್ತೆ ಮತ್ತೆ ಕೇಳಲು ಅವಕಾಶವಿದೆ. ಇಂಟರ್ನೆಟ್ ಸಿಗುವ ಯಾವುದೇ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳಿಗೂ ಪಾಠವನ್ನು ಕೇಳುವಂತೆ ತಂತ್ರಜ್ಞಾನವನ್ನು ರೂಪಿಸಲಾಗಿದೆ ಎಂದು ಡಾ| ವಿಜಯ್ ತಿಳಿಸಿದರು.
ಸೂಚನೆ ಬಳಿಕ ಯೋಜನೆ
ಪದವಿಪೂರ್ವ ಶಿಕ್ಷಣ ಮಂಡಳಿಯಿಂದ ಆನ್ಲೈನ್ ತರಗತಿ ಮಾಡಬಹುದು ಎಂದು ಸೂಚನೆ ಬಂದಿದೆ. ಸೂಚನೆ ಬಂದಾಕ್ಷಣವೇ ಪಿಯುಸಿ ವಿದ್ಯಾರ್ಥಿಗಳಿಗೆಲ್ಲ ಅನುಕೂಲವಾಗುವಂತೆ ಯೋಜನೆ ಆರಂಭಿಸಿದ್ದೇವೆ. ಎಂಜಿಎಂ ಕಾಲೇಜು ಟ್ರಸ್ಟ್ನ ಮುಖ್ಯಸ್ಥರಾದ ಟಿ. ಸತೀಶ್ ಯು. ಪೈಯವರ ಮುತುವರ್ಜಿಯಿಂದ ಪೋರ್ಟಲ್ ಆರಂಭಿಸಿದ್ದು ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು. ಇದಕ್ಕೆ ಪ್ರತ್ಯೇಕ ಶುಲ್ಕ ವಿಧಿಸುವುದಿಲ್ಲ ಎಂದು ಹೇಳಿದರು.
ಪ್ರತ್ಯಕ್ಷ ಪಾಠಕ್ಕೆ ಪರ್ಯಾಯವಲ್ಲ ಇದರಲ್ಲಿ ವಿದ್ಯಾರ್ಥಿಗಳಿಗೂ ಜವಾಬ್ದಾರಿ ಇದೆ. ಮನೆಯಲ್ಲಿ ಕುಳಿತು ಪಾಠವನ್ನೇ ಕೇಳದಂತೆ ಆಗಬಾರದು. ಇದರ ಸದುಪಯೋಗವಾದಾಗ ವಿದ್ಯಾರ್ಥಿಗಳು, ಶಿಕ್ಷಕರಿಗೆ ಸಾರ್ಥಕ್ಯ ಉಂಟಾಗುತ್ತದೆ. ಇದೇ ವೇಳೆ ಇದು ಪ್ರತ್ಯಕ್ಷ ತರಗತಿಗಳಿಗೆ ಪರ್ಯಾಯ ಎಂದು ಭಾವಿಸಬಾರದು. ಅನಿವಾರ್ಯವಾಗಿ ಇದನ್ನು ಒಪ್ಪಿಕೊಳ್ಳಬೇಕಾಗಿದೆ ಎಂದು ಪ್ರಾಂಶುಪಾಲರು ತಿಳಿಸಿದರು. ವಿದ್ಯಾರ್ಥಿಗಳ ಹಿತದೃಷ್ಟಿ ಟಿ. ಸತೀಶ್ ಪೈ ಅವರ ಮನೆಯಲ್ಲಿ ಎಂಟಿಎಲ್ನವರ ಮಾರ್ಗದರ್ಶನದಲ್ಲಿ ಪ್ರಾತ್ಯಕ್ಷಿಕೆ ನೀಡಿ ಅನುಷ್ಠಾನಗೊಳಿಸಲಾಗಿದೆ. ಮಕ್ಕಳ ಹಿತದೃಷ್ಟಿಯಿಂದ ಯೋಜನೆ ರೂಪುಗೊಂಡಿದೆ ಎಂದು ಪ.ಪೂ. ಕಾಲೇಜಿನ ಪ್ರಾಂಶುಪಾಲೆ ಮಾಲತಿ ದೇವಿ ಹೇಳಿದರು.
ಎಲ್ಲರಿಗೆ ಕೈಗೆಟಕುವ ಯೋಜನೆ
ಗ್ರಾಮೀಣ ವಿದ್ಯಾರ್ಥಿಗಳಿಗೂ ಲಭ್ಯವಾಗುವಂತೆ ಪೋರ್ಟಲ್ನ್ನು ಅಭಿವೃದ್ಧಿ ಪಡಿಸಲಾಗಿದೆ. ಇಂಟರ್ ನೆಟ್ ಕೂಡ ವೆಚ್ಚದಾಯಕವಾಗು ವುದಿಲ್ಲ. ಎಲ್ಲ ವರ್ಗದ ವಿದ್ಯಾರ್ಥಿ ಗಳಿಗೆ ಅನುಕೂಲವಾಗಬೇಕೆಂಬುದು ಟಿ. ಸತೀಶ್ ಪೈ ಅವರ ಉದ್ದೇಶ ಎಂದು ಎಂಟಿಎಲ್ ಕಾರ್ಪೊರೆಟ್ ಸಪೋರ್ಟ್ ಹಿರಿಯ ವ್ಯವಸ್ಥಾಪಕ ರಾಜೇಶ್ ತಿಳಿಸಿದರು.
ಇಂಗ್ಲಿಷ್ ವಿಭಾಗ ಮುಖ್ಯಸ್ಥ ಡಾ| ದೇವಿದಾಸ ನಾಯಕ್ ಸ್ವಾಗತಿಸಿ ಕಂಪ್ಯೂಟರ್ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ| ವಿಶ್ವನಾಥ ಪೈ ನಿರ್ವಹಿಸಿ ವಂದಿಸಿದರು. ಎಂಟಿಎಲ್ ಬಿಸಿನೆಸ್ ಮ್ಯಾನೇಜರ್ ಅಭಿಜಿತ್, ಪ್ರಾಜೆಕ್ಟ್ಮ್ಯಾನೇಜರ್ ಅಶ್ವಿನ್ ಇದ್ದರು.
ಸಿಂಪ್ಲಿಫೈಡ್- ಆ್ಯಂಪ್ಲಿಫೈಡ್
ಬೋಧನೆ ಸರಳಗೊಳ್ಳಬೇಕು (ಸಿಂಪ್ಲಿಫೈಡ್), ಕಲಿಕೆ ವಿಸ್ತರಣೆಗೊಳ್ಳಬೇಕು (ಆ್ಯಂಪ್ಲಿಫೈಡ್) ಮತ್ತು ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವಿನ ಭಾವನಾತ್ಮಕ ಸಂಬಂಧ ಗಟ್ಟಿಗೊಳ್ಳಬೇಕು ಎಂಬ ನೀತಿಯನುಸಾರ ತಂತ್ರ ಜ್ಞಾನವನ್ನು ರೂಪಿಸಲಾಗಿದೆ ಎಂದು ಎಂಟಿಎಲ್ ಉಪಾಧ್ಯಕ್ಷ ಗುರು ಪ್ರಸಾದ್ ಕಾಮತ್ ವಿವರಿಸಿದರು.
ಮತ್ತೆ ಮತ್ತೆ ಕೇಳುವ ಅವಕಾಶ
ಒಂದು ವೇಳೆ ಪಾಠ ಅರ್ಥವಾಗದೆ ಇದ್ದರೆ ವೀಡಿಯೋವನ್ನು ಎಷ್ಟು ಬಾರಿ ಬೇಕಾದರೂ ಕೇಳಿಕೊಳ್ಳಬಹುದು. ಪಾಠಗಳನ್ನು ತರಗತಿ ಕೊಠಡಿಯಲ್ಲಿ ಮಾಡುವಂತೆ ಒಂದಾದ ಮೇಲೆ ಇನ್ನೊಂದರಂತೆ ಪಾಠದ ವೀಡಿಯೋವನ್ನು ಅಳವಡಿಸಲಾಗುತ್ತದೆ. ಎಲ್ಲೆಲ್ಲ ವಾಟ್ಸ್ಆ್ಯಪ್ ನೋಡಬಹುದೋ ಅಲ್ಲೆಲ್ಲ ಆನ್ಲೈನ್ ಪೋರ್ಟಲ್ ಲಭ್ಯವಾಗುತ್ತದೆ ಎಂದು ಗುರುಪ್ರಸಾದ್ ಕಾಮತ್ ಅವರು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ
Kapu Assembly constituency: ನಕಲಿ ಮತದಾನ;ಆರೋಪ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ