ಅಮಾಸೆಬೈಲು ಗ್ರಾ.ಪಂ.: ದೇವಸ್ಥಾನ ರಸ್ತೆ ದುರಸ್ತಿಗಾಗಿ ಆಗ್ರಹ
Team Udayavani, Jul 15, 2022, 1:14 PM IST
ಸಿದ್ದಾಪುರ: ಅಮಾಸೆಬೈಲು ಗ್ರಾ.ಪಂ.ನ ಜಡ್ಡಿನಗದ್ದೆ ಮೂಲಕ ಕೆಲ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಿಂದ ಬಡಾಬೆಟ್ಟು ಕೆಳಕೋಡು ಮಣ್ಣಿನ ರಸ್ತೆಯು ಮಳೆಯಿಂದಾಗಿ ಕೆಸರುಮಯವಾಗಿದೆ. ಈ ರಸ್ತೆಯು ಸುಮಾರು 25 ಮನೆಗಳಿಗೆ ಸಂಪರ್ಕಿಸುವ ರಸ್ತೆಯಾಗಿದೆ. ಈ ಪ್ರದೇಶವು ಒಂದು ಕಾಲದಲ್ಲಿ ನಕ್ಸಲ್ ಪೀಡಿತ ಪ್ರದೇಶವಾಗಿತ್ತು. ಈ ಪ್ರದೇಶಗಳಲ್ಲಿ ಮೊಬೈಲ್ ನೆಟ್ವರ್ಕ್ ಸೇರಿದಂತೆ ಯಾವುದೆ ಸಂಪರ್ಕ ವ್ಯವಸ್ಥೆಗಳು ಇಲ್ಲ. ಇಲ್ಲಿನವರು ಹೊರ ಪ್ರಪಂಚಕ್ಕೆ ಸಂಪರ್ಕ ಬೆಳೆಸಬೇಕೆಂದರೆ, ರಸ್ತೆ ಮಾರ್ಗವೇ ಸಂಪರ್ಕ ಮಾರ್ಗವಾಗಿದೆ.
ಈ ಪ್ರದೇಶಗಲ್ಲಿ ಏನಾದರೂ ಅನಾಹುತಗಳು ಸಂಭವಿಸಿದರೆ, ಅವರನ್ನು ಹೊತ್ತುಕೊಂಡೇ ಸಾಗುವಂತ ಪರಿಸ್ಥಿತಿ ಇದೆ. ಪಶ್ಚಿಮಘಟ್ಟದ ತಪ್ಪಲಿನಲ್ಲಿ ಈ ಪ್ರದೇಶ ಇರುದರಿಂದ ಸುತ್ತಲೂ ಕಾಡುಗಳಿಂದ ಆವೃತವಾಗಿದೆ. ಇಲ್ಲಿ ನಿತ್ಯ ಸಂಚರಿಸುವರಿಗೆ, ಶಾಲಾ ಮಕ್ಕಳಿಗೆ, ಕೂಲಿ ಕಾರ್ಮಿಕರಿಗೆ, ಪಾದಚಾರಿಗಳಿಗೆ ಮತ್ತು ವಾಹನ ಸವಾರರ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ಇದರ ಬಗ್ಗೆ ಅಮಾಸೆಬೈಲು ಗ್ರಾ.ಪಂ. ಗಮನ ಹರಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ರಸ್ತೆ ದುರಸ್ಥಿಯ ಬಗ್ಗೆ ಗ್ರಾ.ಪಂ. ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಕೆಲ ಸ್ಪಂದಿಸಿದ್ದು, ಗ್ರಾ.ಪಂ.ನಿಂದ ತುರ್ತು ಕಾಮಗಾರಿಗಾಗಿ 4 ಸಾವಿರ ರೂ. ನೀಡಬಹುದಾಗಿದೆ. ಸಣ್ಣ ಮೊತ್ತದಿಂದ ರಸ್ತೆ ಕಾಮಗಾರಿ ಅಸಾಧ್ಯವಾದ್ದರಿಂದ ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಲ್ಲಿ ಮನವಿ ಮಾಡಿಕೊಂಡಿದ್ದೇವೆ. ಅನುದಾನ ನೀಡುವ ಬಗ್ಗೆ ಭರವಸೆ ನೀಡಿದ್ದಾರೆ ಎಂದು ಹೇಳಿದರು.