Crime News ಗಂಗೊಳ್ಳಿ ಅಪರಾಧ ಸುದ್ದಿಗಳು
Team Udayavani, Dec 24, 2023, 12:31 AM IST
ಬೈಕ್ ಢಿಕ್ಕಿ; ಗಾಯ
ಗಂಗೊಳ್ಳಿ: ಮರವಂತೆ ಬೀಚ್ ಬಳಿಯ ಹೆದ್ದಾರಿಯಲ್ಲಿ ಡಿ. 22ರಂದು ಪಾದಚಾರಿ ಸುಬ್ಬಯ್ಯ ಅವರಿಗೆ ಬೈಕ್ ಢಿಕ್ಕಿಯಾಗಿದ್ದು, ಅವರು ಗಾಯಗೊಂಡಿದ್ದಾರೆ. ಬೈಕ್ ಸವಾರ ಗಣಪತಿ ಸಹ ಗಾಯಗೊಂಡಿದ್ದು, ಅವರನ್ನು ಹಾಗೂ ಸುಬ್ಬಯ್ಯರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಿಳೆ ಆತ್ಮಹತ್ಯೆ
ಗಂಗೊಳ್ಳಿ: ಇಲ್ಲಿನ ಗುಡ್ಡಿಕೇರಿ ನಿವಾಸಿ ಸಾಕು (36) ಅವರು ತನ್ನ ಪುತ್ರ ಕಳೆದ 3 ವರ್ಷದಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು, ಇದರಿಂದ ಮನನೊಂದು ಜೀವನದಲ್ಲಿ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಡಿ. 22ರಂದು ಸಂಭವಿಸಿದೆ. ಸಹೋದರಿ ಶಾಂತಿ ಕೃಷ್ಣ ಅವರು ನೀಡಿದ ದೂರಿನಂತೆ ಗಂಗೊಳ್ಳಿಯಲ್ಲಿ ಪ್ರಕರಣ ದಾಖಲಾಗಿದೆ.
ಮೀನುಗಾರ ಸಾವು
ಗಂಗೊಳ್ಳಿ: ಮರವಂತೆಯ ಅರಬ್ಬಿ ಸಮುದ್ರದಲ್ಲಿ ದೋಣಿಯಲ್ಲಿ ಮೀನುಗಾರಿಕೆ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಆಯ ತಪ್ಪಿ ಸಮುದ್ರಕ್ಕೆ ಬಿದ್ದ ಮರವಂತೆಯ ನಿವಾಸಿ ಶಂಕರ (62) ಸಾವನ್ನಪ್ಪಿದ ಘಟನೆ ಡಿ. 23ರಂದು ಸಂಭವಿಸಿದೆ.
ಆಯ ತಪ್ಪಿ ಸಮುದ್ರಕ್ಕೆ ಬಿದ್ದ ಶಂಕರ ಅವರನ್ನು ಮೇಲಕ್ಕೆತ್ತಿ ಆ್ಯಂಬುಲೆನ್ಸ್ ಮೂಲಕ ಕುಂದಾಪುರ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಪರೀ ಕ್ಷಿಸಿದ ವೈದ್ಯಾಧಿಕಾರಿಗಳು ಅದಾಗಲೇ ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ. ಪುತ್ರ ನಾಗೇಶ್ ಅವರು ನೀಡಿದ ದೂರಿನಂತೆ ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.