ಕುಂದಾಪುರ: ಕೋವಿಡ್ ಲಸಿಕೆಗಾಗಿ ಸರದಿ ಸಾಲು
Team Udayavani, Aug 3, 2021, 3:40 AM IST
ಕುಂದಾಪುರ: ಕೆಲವು ದಿನಗಳ ಅನಂತರ ಬಂದ ಲಸಿಕೆಗಾಗಿ ಸೋಮವಾರ ಇಲ್ಲಿನ ಕಲಾಮಂದಿರ ಸಮೀಪದ ರಸ್ತೆಯಲ್ಲಿ ಉದ್ದನೆಯ ಸರದಿ ಸಾಲು ಕಂಡು ಬಂತು.
ಕಳೆದ ವಾರ ಲಸಿಕೆ ಸರಬರಾಜು ಇರಲಿಲ್ಲ. ಜುಲೈ ಅಂತ್ಯವರೆಗೂ ನಿರ್ದಿಷ್ಟ ವರ್ಗದವರಿಗೆ ಮಾತ್ರ ಲಸಿಕೆ ನೀಡಲಾಗುತ್ತಿತ್ತು. ಕೊರೊನಾ ಮುಂಚೂಣಿ ಕಾರ್ಯಕರ್ತರು, ಚಾಲಕರು, ಅಂಗವಿಕಲರು ಹೀಗೆ ಬೇರೆ ಬೇರೆ ವರ್ಗಗಳನ್ನು ಮಾಡಿ ಅವರಿಗಷ್ಟೇ ಲಸಿಕೆ ನೀಡಲಾಗುತ್ತಿತ್ತು. ಆ.2ರಿಂದ 18 ವಯೋಮಾನ ಕಳೆದ ಎಲ್ಲರಿಗೂ ಲಸಿಕೆ ನೀಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಲಸಿಕೆ ಬರುತ್ತದೆ ಎಂದು ಮಾಹಿತಿ ಇದ್ದೇ ಸೋಮವಾರ ಮುಂಜಾನೆ 6 ಗಂಟೆಯಿಂದಲೇ ಲಸಿಕೆ ಕೇಂದ್ರ ಜೂನಿಯರ್ ಕಾಲೇಜಿನ ಕಲಾಮಂದಿರ ಬಳಿ ಜನರ ಸಾಲು ಆರಂಭ ವಾಗಿತ್ತು. 10 ಗಂಟೆ ವೇಳೆಗೆ ಮೈದಾನದ ಒಳಗಿಂದ ಕಾಲೇಜಿನ ಮುಖ್ಯದ್ವಾರದ ಮೂಲಕ ರಸ್ತೆಗೆ ಬಂದು ಕಲಾಮಂದಿರ ಗೇಟಿನ ಮೂಲಕ ಪ್ರವೇಶಕ್ಕೆ ಸಿದ್ಧವಾಗಿತ್ತು. ಸಾವಿರದಷ್ಟು ಮಂದಿ ಸಾಲಿನಲ್ಲಿ ಇದ್ದರು ಎಂದು ಅಂದಾಜಿಸಲಾಗಿದೆ. ಪೊಲೀಸರು ಜನಸಂದಣಿಯ ನಿಯಂತ್ರಣ ಕಾರ್ಯ ಮಾಡುತ್ತಿದ್ದರು.
ಕೊವಿಶೀಲ್ಡ್ ಹಾಗೂ ಕೊವ್ಯಾಕ್ಸಿನ್ ಲಸಿಕೆ ಎರಡೂ ಬಂದಿತ್ತು. 18ರ ವಯೋಮಾನ ದಾಟಿದ ಎಲ್ಲರಿಗೂ ಯಾವುದೇ ನಿರ್ಬಂಧ ಗಳಿಲ್ಲದೆ ಲಸಿಕೆ ನೀಡಲಾಗುತ್ತಿತ್ತು. ಆದ್ದರಿಂದ ಜನರ ಒತ್ತಡ ಹೆಚ್ಚಿತ್ತು. 850ರಷ್ಟು ಮಂದಿಗೆ ನೀಡುವಷ್ಟು ಲಸಿಕೆ ಬಂದಿತ್ತು. ಇಂತಹ ಪರಿಸ್ಥಿತಿ ತಾಲೂಕಿನ ಎಲ್ಲ ಕಡೆಯೂ ಇತ್ತು. ಎಲ್ಲ ಕಡೆಗೂ ಸೋಮವಾರ ಲಸಿಕೆ ಲಭ್ಯವಿದ್ದ ಕಾರಣ ಲಸಿಕೆಗಾಗಿ ಆಗಮಿಸಿದ ಜನರ ಸಂಖ್ಯೆ ದೊಡ್ಡದಿತ್ತು.
600 ಮಂದಿಗೆ ಕೊವಿಶೀಲ್ಡ್ ಹಾಗೂ 250 ಮಂದಿಗೆ ಆಗುವಷ್ಟು ಕೊವ್ಯಾಕ್ಸಿನ್ ಬಂದಿತ್ತು. ಮೊದಲು ಬಂದವರಿಗೆ ಹಾಗೂ ಪುರಸಭೆ ವ್ಯಾಪ್ತಿಯವರಿಗೆ ಆದ್ಯತೆ ನೀಡಲಾಗುತ್ತಿದ್ದು ಆಗಮಿಸಿದ ಬಹುತೇಕ ಮಂದಿಗೆ ಲಸಿಕೆ ದೊರೆಯಲಿದೆ. -ದಿನಕರ ಶೆಟ್ಟಿ, ಲಸಿಕೆ ಕೇಂದ್ರದ ನೋಡಲ್ ಅಧಿಕಾರಿ