ಅಧಿಕಾರಿಗಳ ಜತೆ ಆರಗ ಜ್ಞಾನೇಂದ್ರ ಸಭೆ
ಸಮಗ್ರ ಮಾಹಿತಿ ನೀಡಿದ ಪೊಲೀಸ್ ಆಯುಕ್ತ ಲಾಭೂರಾಮ
Team Udayavani, Apr 18, 2022, 9:32 AM IST
ಹುಬ್ಬಳ್ಳಿ: ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ ನಡೆದ ಕಲ್ಲು ತೂರಾಟ, ದಾಂಧಲೆಗೆ ಸಂಬಂಧಿಸಿದಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ರವಿವಾರ ಸಂಜೆ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಒಂದು ಗಂಟೆಗೂ ಹೆಚ್ಚು ಕಾಲ ಸಭೆ ನಡೆಸಿದರು. ಗಲಭೆ ಕುರಿತು ಮಹಾನಗರ ಪೊಲೀಸ್ ಆಯುಕ್ತ ಲಾಭೂರಾಮ ಅವರಿಂದ ಮಾಹಿತಿ ಪಡೆದರು.
ನಂತರ ಕೆಲ ಸಂಘಟನೆಗಳ ಪ್ರಮುಖರು ಗೃಹ ಸಚಿವರನ್ನು ಭೇಟಿಯಾಗಿ ಪೊಲೀಸ್ ಠಾಣೆ, ದೇವಸ್ಥಾನ, ಆಸ್ಪತ್ರೆ, ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿ ಭಯ ವಾತಾವರಣ ಸೃಷ್ಟಿಸಿದವರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಪೊಲೀಸರು ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುತ್ತಿದ್ದಾರೆ. ಈಗಾಗಲೇ ಗಲಭೆಯಲ್ಲಿ ಪಾಲ್ಗೊಂಡಿದ್ದವರನ್ನು ಗುರುತಿಸಿ ಬಂಧಿಸಲಾಗುತ್ತಿದೆ. ನಗರದಲ್ಲಿ ಶಾಂತಿ ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಎಲ್ಲರೂ ಶಾಂತಿ ಕಾಪಾಡುವಂತೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ.
ಸಭೆ ನಂತರ ಸುದ್ದಿಗಾರರಗೊಂದಿಗೆ ಮಾತನಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಮುಂದೆ ಇಂತಹ ಘಟನೆಗಳು ನಡೆಯದಂತೆ ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ. ಕಲ್ಲು ತೂರಾಟ ಮಾಡಿದವರನ್ನು ಬಿಡುವ ಪ್ರಶ್ನೆಯೇ ಇಲ್ಲ. ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಪ್ರತಾಪರೆಡ್ಡಿ ನೇತೃತ್ವದಲ್ಲಿ ಈ ಪ್ರಕರಣದ ತನಿಖೆ ನಡೆಯಲಿದೆ. ಪ್ರಕರಣದಲ್ಲಿ ಪಾಲ್ಗೊಂಡಿದ್ದವರು ಯಾವ ಮತೀಯ ಸಂಘಟನೆಗಳೊಂದಿಗೆ ಗುರುತಿಸಿಕೊಂಡಿದ್ದಾರೆ. ಗಲಭೆ ಹಿನ್ನೆಲೆ ಏನು ಎನ್ನುವ ಸಂಪೂರ್ಣ ತನಿಖೆಯಾಗಲಿದೆ. ಯಾರು ಕಾನೂನನ್ನು ಕೈಗೆತ್ತಿಕೊಳ್ಳುತ್ತಾರೆ ಅವರನ್ನು ಬಿಡುವ ಪ್ರಶ್ನೆಯೇ ಇಲ್ಲ ಎಂದರು.
ಗಲಭೆಯನ್ನು ಕಡಿಮೆ ಸಮಯದಲ್ಲಿ ನಿಯಂತ್ರಿಸುವಲ್ಲಿ ಹುಬ್ಬಳ್ಳಿ ಪೊಲೀಸರು ಶ್ರಮಿಸಿದ್ದಾರೆ. ಕೊಂಚ ಹಿಂದೇಟು ಹಾಕಿದ್ದರೆ ಬೆಂಗಳೂರಿನ ಡಿಜೆ ಹಳ್ಳಿ, ಕೆಜೆ ಹಳ್ಳಿಯಲ್ಲಿ ನಡೆದ ಗಲಭೆ ರೂಪಕ್ಕೆ ತಿರುಗುತ್ತಿತ್ತು. ಘಟನೆಯಲ್ಲಿ ಪೊಲೀಸರಿಗೆ ಪೆಟ್ಟಾಗಿವೆ. ವಾಹನಗಳು ಜಖಂಗೊಂಡಿವೆ. ಅವಹೇಳನಕಾರಿ ಪೋಸ್ಟ್ ಮಾಡಿದ್ದರ ಬಗ್ಗೆ ಒಂದಿಷ್ಟು ಜನರು ಠಾಣೆಗೆ ಬಂದು ದೂರು ಕೊಟ್ಟು ಹೋದ ನಂತರ ಸಾವಿರಾರು ಸಂಖ್ಯೆಯಲ್ಲಿ ಜನರು ಬಂದು ಈ ಗಲಭೆ ಮಾಡಿದ್ದಾರೆ. ಎಲ್ಲಾ ರೀತಿಯಿಂದಲೂ ಹಲ್ಲೆ ಮಾಡುವ ಪ್ರಯತ್ನಗಳು ನಡೆದಿವೆ. ಕಡಿಮೆ ಸಂಖ್ಯೆಯಲ್ಲಿ ಪೊಲೀಸರು ಇದ್ದರೂ ಇದನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹುಬ್ಬಳ್ಳಿ ಪೊಲೀಸರನ್ನು ಅಭಿನಂದಿಸುವುದಾಗಿ ತಿಳಿಸಿದರು.
ಕೇಂದ್ರ ಸಂಸದೀಯ ವ್ಯವಹಾರ, ಕಲ್ಲಿದ್ದಲು ಹಾಗೂ ಗಣಿ ಸಚಿವ ಪ್ರಹ್ಲಾದ ಜೋಶಿ, ಉಸ್ತುವಾರಿ ಸಚಿವ ಹಾಲಪ್ಪ ಆಚಾರ, ಮಾಜಿ ಸಿಎಂ ಜಗದೀಶ ಶೆಟ್ಟರ, ಶಾಸಕ ಅರವಿಂದ ಬೆಲ್ಲದ, ಜಿಲ್ಲಾಧಿಕಾರಿ ನಿತೇಶ ಪಾಟೀಲ, ಪಾಲಿಕೆ ಆಯುಕ್ತ ಡಾ|ಬಿ. ಗೋಪಾಲಕೃಷ್ಣ, ಎಸ್ಪಿ ಕೃಷ್ಣಕಾಂತ ಸೇರಿದಂತೆ ಹಿರಿಯ ಅಧಿಕಾರಿಗಳಿದ್ದರು.
ಕಾನೂನು ಕೈಗೆತ್ತಿಕೊಳ್ಳುತ್ತೇವೆ ಎಂಬುವವರ ಅಲೋಚನೆ ಇಲ್ಲಿ ನಡೆಯುವುದಿಲ್ಲ: ಗೃಹ ಸಚಿವ
ಹುಬ್ಬಳ್ಳಿ: ಕಲ್ಲು ತೂರಾಟ, ದಾಂಧಲೆ ಮೂಲಕ ಕಾನೂನು ಕೈಗೆತ್ತಿಕೊಳ್ಳುವ ಪ್ರಯತ್ನ ಮಾಡಿದವರು ಯಾರೇ ಆಗಿದ್ದರೂ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.
ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ಹಾಗೂ ಗಲಭೆಯಲ್ಲಿ ಕಲ್ಲು ತೂರಾಟಕ್ಕೊಳಗಾದ ದಿಡ್ಡಿ ಓಣಿ ಹನುಮಂತ ದೇವಸ್ಥಾನಕ್ಕೆ ಭೇಟಿ ಕೊಟ್ಟ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಯುವಕನೊಬ್ಬ ವಾಟ್ಸ್ಆ್ಯಪ್ನಲ್ಲಿ ಸ್ಟೇಟಸ್ ಇರಿಸಿದ್ದಕ್ಕೆ ಪೊಲೀಸರು ಅವನನ್ನು ಕೂಡಲೇ ಬಂಧಿಸಿದ್ದರು. ಆದರೂ ನೂರಾರು ಜನರು ಸೇರಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ್ದಲ್ಲದೆ ಯುವಕನನ್ನು ಒಪ್ಪಿಸಿ ಎಂದು ಪೊಲೀಸರ ಮೇಲೆಯೇ ಕಲ್ಲು ತೂರಾಟ ನಡೆಸಿ, ಪೊಲೀಸ್ ವಾಹನಗಳನ್ನು ಜಖಂ ಮಾಡಿ ಓಣಿಗಳಲ್ಲಿ ಕಲ್ಲು ತೂರಾಟ ಮಾಡಿ ಅರಾಜಕತೆ ಉಂಟು ಮಾಡಿದ್ದಾರೆ.
ಈ ಘಟನೆಯನ್ನು ಸರಕಾರ ತೀವ್ರವಾಗಿ ಖಂಡಿಸುತ್ತದೆ. ಇಂತಹವುದನ್ನು ಸಹಿಸಲಾಗದು. ಕಾನೂನು ಕೈಗೆತ್ತಿಕೊಳ್ಳುತ್ತೇನೆ ಎಂಬುವವರ ಆಲೋಚನೆ ಇಲ್ಲಿ ನಡೆಯುವುದಿಲ್ಲ. ಕಾನೂನು ಮತ್ತು ಸಂವಿಧಾನ ಯಾರು ಉಲ್ಲಂಘನೆ ಮಾಡುತ್ತಾರೋ ಅವರು ಈ ದೇಶದ ನಾಗರಿಕರಲ್ಲ. ಆ ಕಾರಣಕ್ಕಾಗಿ ಸರಿಯಾದ ಕ್ರಮ ಕೈಗೊಳ್ಳಲು ಪೊಲೀಸರಿಗೆ ಸೂಚಿಸಿದ್ದೇನೆ. ಈಗಾಗಲೇ ಕೆಲ ಕಿಡಿಗೇಡಿಗಳನ್ನು ಬಂಧಿಸಲಾಗಿದೆ. ಈ ಕುರಿತು ತನಿಖೆ ನಡೆದಿದೆ. ಅವರು ಯಾರೇ ಆಗಲಿ ಕಠಿಣ ಶಿಕ್ಷೆ ನೀಡಲಾಗುವುದು ಎಂದರು.
ಈ ಘಟನೆಯಲ್ಲಿ ಯಾವ ಸಂಘಟನೆಗಳಿವೆ ಎಂಬುದನ್ನೆಲ್ಲ ಹೊರಗೆ ತರುತ್ತೇವೆ. ಎಲ್ಲರೂ ಶಾಂತಿ-ಸುವ್ಯವಸ್ಥೆ ಕಾಪಾಡಬೇಕು. ಈ ರೀತಿಯ ಘಟನೆಗಳಾದಾಗ ಸರಕಾರ ಹಾಗೂ ಪೊಲೀಸರಿದ್ದಾರೆ. ಗಲಭೆಗೆ ಸಂಬಂಧಿಸಿ ಪೊಲೀಸರು ಯಾವ ರೀತಿ ಕಾನೂನು ಕ್ರಮ ಕೈಗೊಳ್ಳುತ್ತಾರೋ ಅವರಿಗೆ ಬಿಟ್ಟದ್ದು. ಶನಿವಾರ ಹಳೇಹುಬ್ಬಳ್ಳಿಯಲ್ಲಿ ಏಕಾಏಕಿ ಗಲಭೆ ನಡೆದಿದೆ. ಹೀಗಾಗಿ ಗುಪ್ತಚರ ಇಲಾಖೆಯ ವೈಫಲ್ಯ ಎನ್ನುವಂತಿಲ್ಲ. ಇದು ಪೂರ್ವಯೋಜಿತ ಗಲಾಟೆಯೋ ಎಂಬುದರ ಬಗ್ಗೆ ತನಿಖೆ ನಂತರವೇ ಅತಿಳಿಯುತ್ತದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Elections: ರಾಜ್ಯಕ್ಕೆ ಮೋದಿ ಆಗಮನ: ಇಂದು ನಾಲ್ಕು ಕಡೆ ಪ್ರಚಾರ
Neha Case: ಬೇಜವಾಬ್ದಾರಿ ಹೇಳಿಕೆಗಳು ತನಿಖೆ ದಾರಿ ತಪ್ಪಿಸುತ್ತವೆ: ಜ್ಯೋತಿ ಪ್ರಕಾಶ್ ಮಿರ್ಜಿ
Hubli; ಖರ್ಗೆ ಬ್ಲಾಕ್ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ
ಪ್ರಹ್ಲಾದ ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ ಹುಟ್ಟಿಕೊಂಡವರು: ದಿಂಗಾಲೇಶ್ವರ ಸ್ವಾಮೀಜಿ
BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್
MUST WATCH
ಹೊಸ ಸೇರ್ಪಡೆ
ಕುತ್ತಿಗೆಗೇ ಬಂತು… ಕುತ್ತಿಗೆ ಸ್ಪ್ರಿಂಗ್ ಇದ್ದಂತೆ…
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ
Lok Sabha elections: ಲೋಕ ಸಮರ; ಮತದಾನದಲ್ಲಿ ಪುರುಷರೇ ಮೇಲುಗೈ
Congress Protest; ಕೇಳಿದ್ದು 18,172 ಕೋಟಿ ರೂ. ಕೊಟ್ಟಿದ್ದು 3,400 ಕೋಟಿ ರೂ. ಮಾತ್ರ
Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ