ಖಾಸಗಿ ವೈದ್ಯರ ಸಂಪರ್ಕಿಸಿ ಸೇವೆಗೆ ಸೂಚಿಸಿ
ಅಗತ್ಯ ಸೇವೆಯಲ್ಲಿರುವವರ ಹಿತರಕ್ಷಣೆಗೆ ಕಾಳಜಿ ವಹಿಸಿ | ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಆಯುಷ್ ಸಲಹೆ ಪಾಲಿಸಿ
Team Udayavani, Apr 15, 2020, 11:50 AM IST
ಧಾರವಾಡ: ನಗರದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಸಚಿವ ಜಗದೀಶ ಶೆಟ್ಟರ ಮಾತನಾಡಿದರು
ಧಾರವಾಡ: ಐಎಂಎ ವೈದ್ಯರ ಸಭೆ ನಡೆಸಿ ಸಾರ್ವಜನಿಕರಿಗೆ ಓಪಿಡಿ ಸೇವೆ ನೀಡಲು ಕೋರಲಾಗಿದ್ದರೂ ಸಹ ಬಹಳಷ್ಟು ಖಾಸಗಿ ಆಸ್ಪತ್ರೆಗಳು ಸೇವೆ ಆರಂಭಿಸಿಲ್ಲ ಎಂಬ ದೂರುಗಳು ಸಾರ್ವಜನಿಕರಿಂದ ಬರುತ್ತಿರುವ ಹಿನ್ನೆಲೆಯಲ್ಲಿ ಕೆಪಿಎಂಇ ನೋಂದಾಯಿತ ವೈದ್ಯರನ್ನು ಸಂಪರ್ಕಿಸಿ ಸೇವೆ ಪುನರಾರಂಭಿಸಲು ಸೂಚಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶಶೆಟ್ಟರ ಹೇಳಿದರು.
ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಕೊರೊನಾ ನಿಯಂತ್ರಣಕ್ಕಾಗಿ ಲಾಕ್ಡೌನ್ ಜಾರಿ, ವೈದ್ಯಕೀಯ ಚಿಕಿತ್ಸೆ ಕುರಿತಂತೆ ನಡೆದ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ನಿರೀಕ್ಷಿತ ಅಂದಾಜು ಪ್ರಕಾರ ಕೊರೊನಾ ಚಿಕಿತ್ಸೆಗೆ ವೈದ್ಯಕೀಯ ಉಪಕರಣಗಳಿಗೆ ಯಾವುದೇ ಕೊರತೆಯಾಗಬಾರದು. ವೈದ್ಯರು, ನರ್ಸ್, ಸಹಾಯಕ ಸಿಬ್ಬಂದಿ ಸೇರಿದಂತೆ ಪೌರ ಕಾರ್ಮಿಕರು, ಪೊಲೀಸರು ಅಗತ್ಯ ಸೇವೆಯಲ್ಲಿರುವ ಎಲ್ಲ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಹಿತರಕ್ಷಣೆಗೂ ಕಾಳಜಿ ವಹಿಸಬೇಕು ಎಂದರು.
ರೋಗನಿರೋಧಕ ಶಕ್ತಿ ಹೆಚ್ಚಿಸಲು ಪ್ರಧಾನಿಗಳು ಸೂಚಿಸಿರುವ ಆಯುಷ್ ಸಲಹೆಗಳನ್ನು ಸಂಬಂಧಿಸಿದ ಇಲಾಖೆ ಮತ್ತು ಆಯುಷ್ ವೈದ್ಯರು ಅನುಷ್ಠಾನ ಮಾಡಬೇಕೆಂದು ಸಲಹೆ ನೀಡಿದರು. ಪ್ರಧಾನಿ ನರೇಂದ್ರ ಮೋದಿ ಅವರು ಮೇ 3 ರವರೆಗೆ ಲಾಕ್ಡೌನ್ ಮುಂದುವರಿಕೆ ಘೋಷಿಸಿದ್ದು, ದೇಶದ ಜನರ ಆರೋಗ್ಯ ರಕ್ಷಣೆಗೆ ಈ ಕ್ರಮ ಅನಿವಾರ್ಯ.ಜಿಲ್ಲೆಯ ಜನತೆ ತಮ್ಮ ಮನೆಗಳಿಂದ ಹೊರಬರದೇ ಲಾಕ್ಡೌನ್ ಪರಿಣಾಮಕಾರಿ ಅನುಷ್ಠಾನಕ್ಕೆ ಸಹಕರಿಸಬೇಕು. ಜನತೆಗೆ ಅಗತ್ಯ ವಸ್ತುಗಳ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗದಂತೆ ಸಂಬಂಧಿಸಿದ ಇಲಾಖೆಗಳು ಕ್ರಮ ಕೈಗೊಳ್ಳಬೇಕು ಎಂದರು.
ಕೆಎಂಎಫ್ ಮೂಲಕ ಉಚಿತ ಹಾಲು ವಿತರಣೆ ಏ.21ರವರೆಗೆ ವಿಸ್ತರಿಸಲಾಗಿದೆ. ಜನತೆ ಶಿಸ್ತಿನಿಂದ ಸದುಪಯೋಗ ಪಡೆಯಬೇಕು. ಆಹಾರ ಧಾನ್ಯಗಳು, ಆಹಾರದ ಬೇಡಿಕೆ ಇರುವ ಸ್ಥಳಗಳನ್ನು ಆದ್ಯತಾವಾರು ಪಟ್ಟಿ ಮಾಡಿ, ಸಾರ್ವಜನಿಕರಿಂದ ಸಂಗ್ರಹವಾದ ಧಾನ್ಯಗಳನ್ನು ಎಲ್ಲರಿಗೂ ದೊರೆಯುವಂತೆ ನೋಡಿಕೊಳ್ಳಬೇಕು. ಯಾವ ಸ್ಥಳಗಳಲ್ಲಿ ವಿತರಿಸಲಾಗಿದೆ. ಇನ್ನಾವ ಸ್ಥಳಗಳನ್ನು ತಲುಪಬೇಕಿದೆ ಎಂಬ ಮಾಹಿತಿ ಪ್ರತಿದಿನ ಸಿದ್ಧಪಡಿಸಿ ಚುನಾಯಿತ ಪ್ರತಿನಿಧಿಗಳಿಗೂ ಒಂದು ಪ್ರತಿ ನೀಡಿದರೆ ಸೌಲಭ್ಯಗಳು ದೊರೆಯದ ಜನರಿಗೆ ಆಹಾರ ಧಾನ್ಯ ಪೂರೈಸಲು ಸಾಧ್ಯವಾಗುತ್ತದೆ ಎಂದರು.
ನವಲಗುಂದದ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಮಾತನಾಡಿ, ಶಿಶ್ವಿನಹಳ್ಳಿ, ಶಿರೂರ, ಮಂಟೂರ, ನಾಗರಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳ ಪಡಿತರ ಚೀಟಿದಾರರ ಮನೆಗಳಿಗೆ ಆಹಾರ ಧಾನ್ಯ ಪೂರೈಸುವ ವ್ಯವಸ್ಥೆ ಮಾಡಬೇಕು ಎಂದರು. ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, ತಮ್ಮ ಕ್ಷೇತ್ರದ ಅನೇಕ ಕಾರ್ಮಿಕರು ನೆರೆಯ ಮಹಾರಾಷ್ಟ್ರದಲ್ಲಿ ವಲಸೆ ಕಾರಣದಿಂದ ಉಳಿದುಕೊಂಡಿದ್ದು, ಸಾಧ್ಯವಾದರೆ ಅವರನ್ನು ಕರೆತರುವ ಪ್ರಯತ್ನಗಳಾಗಬೇಕು. ಇಲ್ಲದಿದ್ದರೆ ಕನಿಷ್ಟ ಪಕ್ಷ ಅವರಿಗೆ ಊಟ, ವಸತಿ ಸೌಕರ್ಯ ದೊರೆಯುವಂತೆ ಮಾಡಬೇಕು. ಬಿಡ್ನಾಳ, ಗಬ್ಬೂರ, ವೀರಾಪುರ ಓಣಿ ಮೊದಲಾದ ಸ್ಥಳಗಳಿಂದ ಕೃಷಿಕರು ಹೊಲಗಳಿಗೆ ಹೋಗಿ ಬರಲು ಪೊಲೀಸರು ಅವಕಾಶ ನೀಡಬೇಕೆಂದರು.
ಡಿಸಿ ದೀಪಾ ಚೋಳನ್ ಮಾತನಾಡಿ, ಕೋವಿಡ್ ಪಾಸಿಟಿವ್ ವರದಿ ಬಂದಿರುವ ಹುಬ್ಬಳ್ಳಿ ಮುಲ್ಲಾ ಓಣಿಯ ನಿವಾಸಿಗಳ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಕ್ಕೆ ಬಂದಿರುವ ಎಲ್ಲರನ್ನೂ ಗುರುತಿಸಲಾಗಿದೆ. ಪ್ರಥಮ ಸಂಪರ್ಕ ಹೊಂದಿದವರನ್ನು ಸರ್ಕಾರಿ ಕ್ವಾರಂಟೈನ್, ದ್ವಿತೀಯ ಸಂಪರ್ಕ ಹೊಂದಿರುವವರನ್ನು ಅವರ ಮನೆಗಳಲ್ಲೇ ಪ್ರತ್ಯೇಕವಾಗಿ ಇರಿಸಲಾಗಿದೆ. ಪಾಸಿಟಿವ್ ವ್ಯಕ್ತಿಗಳ ಸಂಪರ್ಕಿತರು ಹಾಗೂ ತೀವ್ರ ಉಸಿರಾಟದ ತೊಂದರೆ, ನ್ಯುಮೊನಿಯಾ ಲಕ್ಷಣಗಳಿರುವವರನ್ನು ತಪಾಸಣೆಗೊಳಪಡಿಸಲಾಗುತ್ತಿದೆ ಎಂದರು.
ಹು-ಧಾ ಪೊಲೀಸ್ ಆಯುಕ್ತ ಆರ್. ದೀಲಿಪ್ ಮಾತನಾಡಿ, ಅನಾವಶ್ಯಕವಾಗಿ ಓಡಾಡುವ ಜನರನ್ನು ನಿರ್ಬಂಧಿ ಸಲಾಗುತ್ತಿದೆ ಎಂದರು. ಜಿಪಂ ಸಿಇಒ ಡಾ|ಬಿ.ಸಿ.ಸತೀಶ ಮಾತನಾಡಿ, ಲಾಕ್ಡೌನ್ ಅವಧಿಯಲ್ಲಿ ವೈಯಕ್ತಿಕ ಕಾಮಗಾರಿಗಳನ್ನು ನರೇಗಾ ಯೋಜನೆಯಡಿ ಮುಂದುವರಿಸಲಾಗಿದೆ. ಬಹುತೇಕ ಸಮುದಾಯ ಚಟುವಟಿಕೆಗಳು ತಾತ್ಕಾಲಿಕವಾಗಿ ಸ್ಥಗಿತವಾಗಿವೆ ಎಂದರು.
ಶಾಸಕರಾದ ಸಿ.ಎಂ.ನಿಂಬಣ್ಣವರ, ಅರವಿಂದ ಬೆಲ್ಲದ, ಪ್ರದೀಪ ಶೆಟ್ಟರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್, ಮಹಾನಗರ ಪಾಲಿಕೆ ಆಯುಕ್ತ ಡಾ|ಸುರೇಶ ಇಟ್ನಾಳ, ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಉಪ ಪೊಲೀಸ್ ಆಯುಕ್ತ ಕೃಷ್ಣಕಾಂತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|ಯಶವಂತ ಮದೀನಕರ, ಕಿಮ್ಸ್ನ ಡಾ|ಲಕ್ಷ್ಮೀಕಾಂತ, ಜಿಲ್ಲಾ ಆಯುಷ್ ಅಧಿಕಾರಿ ಡಾ|ಸಂಗಮೇಶ ಕಲಹಾಳ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್
Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ
Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್ ಸಲ್ಲಿಸಿಲ್ಲ
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ