ಕಲಬುರಗಿ: 2 ಕೋಟಿ ರೂ. ಲಾಭದಲ್ಲಿ ಕೆಎಂಎಫ್
ಹೆಚ್ಚಿಸಲಾದ ದರವು ಫೆಬ್ರುವರಿ 1ರಿಂದ ಮೇ 31ರವರೆಗೆ ಅಂದರೆ ನಾಲ್ಕು ತಿಂಗಳು ಚಾಲ್ತಿಯಲ್ಲಿರುತ್ತದೆ
Team Udayavani, Jan 26, 2021, 4:17 PM IST
ಕಲಬುರಗಿ: ರೈತರಿಂದ ಪಡೆಯುವ ಪ್ರತಿ ಲೀಟರ್ ಹಸುವಿನ ಹಾಲಿಗೆ 2 ರೂ. ಹಾಗೂ ಎಮ್ಮೆ ಹಾಲಿಗೆ 3 ರೂ.ಯನ್ನು ಕಲಬುರಗಿ-ಬೀದರ ಹಾಗೂ ಯಾದಗಿರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಹೆಚ್ಚಿಸಿದೆ. ಒಕ್ಕೂಟದ ಇತಿಹಾಸದಲ್ಲೇ ಮೊದಲ ಬಾರಿಗೆ ರೈತರಿಂದ ಖರೀದಿಸುವ ಹಾಲಿಗೆ ದರ ಹೆಚ್ಚಳ ಮಾಡಲಾಗಿದ್ದು, ಈ ಮುಂಚೆ ಸರ್ಕಾರ ಹೆಚ್ಚಿಸಿದಾಗ ಮಾತ್ರ ದರ ಹೆಚ್ಚಳ ಮಾಡಲಾಗುತ್ತಿತ್ತು.
ಒಕ್ಕೂಟ ಈಗ 2 ಕೋಟಿ ರೂ. ಲಾಭ ಹೊಂದಿ ಮುನ್ನೆಡೆಯುತ್ತಿರುವುದರಿಂದ ಹಾಲು ದರ ಹೆಚ್ಚಳದ ಮೂಲಕ ಲಾಂಭಾಂಶ ರೈತರಿಗೆ ನೀಡಲಾಗುತ್ತಿದೆ
ಎಂದು ಒಕ್ಕೂಟದ ಅಧ್ಯಕ್ಷ ರಾಮಚಂದ್ರ ಕೆ. ಪಾಟೀಲ್ (ಆರ್.ಕೆ.ಪಾಟೀಲ್) ಸೋಮವಾರ ಒಕ್ಕೂಟದಲ್ಲಿ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಾಜ್ಯದಲ್ಲೇ ದಕ್ಷಿಣ ಕನ್ನಡ ಬಿಟ್ಟರೆ ರೈತರಿಂದ ಖರೀದಿಸಲಾಗುವ ಹಾಲಿನ ದರ ಅತಿ ಹೆಚ್ಚಳವಾಗಿರುವುದು ತಮ್ಮ ಒಕ್ಕೂಟದಲ್ಲೇ. ತಾವು ಅಧ್ಯಕ್ಷರಾದ ಮೇಲೆ ಪಾರದರ್ಶಕ ಆಡಳಿತಕ್ಕೆ ಒತ್ತು ನೀಡಿದ ಪರಿಣಾಮ ಒಕ್ಕೂಟ ಲಾಭ ಹೊಂದಿರುವುದರಿಂದ ರೈತರ ಹಾಲಿನ ದರ ಹೆಚ್ಚಳ ಮಾಡುವ ಐತಿಹಾಸಿಕ ತೀರ್ಮಾನ ತೆಗೆದುಕೊಳ್ಳಲಾಗಿದೆ. ಹೆಚ್ಚಿಸಲಾದ ದರವು ಫೆಬ್ರುವರಿ 1ರಿಂದ ಮೇ 31ರವರೆಗೆ ಅಂದರೆ ನಾಲ್ಕು ತಿಂಗಳು ಚಾಲ್ತಿಯಲ್ಲಿರುತ್ತದೆ ಎಂದು ವಿವರಿಸಿದರು.
ಪ್ರಸ್ತೂತ ಒಕ್ಕೂಟದಲ್ಲಿ ಪ್ರತಿನಿತ್ಯ 51 ಸಾವಿರ ಲೀಟರ್ ಹಾಲು ಶೇಖರಣೆಯಾಗುತ್ತಿದ್ದು, ಮುಂದಿನ 5 ತಿಂಗಳು ಬೇಸಿಗೆ ಕಾಲವಾಗಿರುವುದರಿಂದ
ಮೇವಿನ ಕೊರತೆ ನೀಗಿಸಿಕೊಂಡು ಹಾಲು ಉತ್ಪಾದನಾ ವೆಚ್ಚ ಕಡಿಮೆ ಮಾಡುವ ದೃಷ್ಟಿಯಿಂದ ಪ್ರತಿ ಟನ್ಗೆ 1,000 ಸಾವಿರ ರೂ. ಪಶು ಆಹಾರ
ದರ ಕಡಿಮೆ ಸಹ ಮಾಡಲಾಗಿದೆಯಲ್ಲದೇ ಪ್ರತಿ ಕೆಜಿಗೆ 10 ರೂ.ನಂತೆ ಖನಿಜ ಮಿಶ್ರಣ ದರ ಕಡಿಮೆ ಮಾಡಿ ಒಕ್ಕೂಟದಿಂದ ಹೆಚ್ಚುವರಿ ರಿಯಾಯಿತಿ
ನೀಡಲಾಗಿದೆ. ಪ್ರಮುಖವಾಗಿ ಮೇವಿನ ಬಿತ್ತನೆ ಕಡ್ಡಿಗಳನ್ನು ಉಚಿತವಾಗಿ ನೀಡಲು ಸಹ ತೀರ್ಮಾನಿಸಲಾಗಿದೆ. ಹೊಸದಾಗಿ 28 ಹಾಲು ಉತ್ಪಾದಕರ ಸಂಘಗಳನ್ನು ರಚಿಸಲಾಗಿದೆ ಎಂದು ಆರ್.ಕೆ. ಪಾಟೀಲ್ ತಿಳಿಸಿದರು.
ಗ್ರಾಹಕರಿಗೆ ಗುಣಮಟ್ಟದ ಹಾಲು ದೊರಕಲು ಹಾಗೂ ಹೆಚ್ಚು-ಹೆಚ್ಚು ನಂದಿನಿ ಉತ್ಪನ್ನಗಳನ್ನು ಸಿಗುವಂತಾಗಲು ಆಧುನಿಕ ವಿನ್ಯಾಸದ ನಂದಿನಿ
ಪಾರ್ಲರಗಳನ್ನು ಕರ್ನಾಟಕ ಹಾಲು ಮಹಾಮಂಡಳಿ ಅನುದಾನದಲ್ಲಿ ಇದುವರೆಗೂ 15 ಪಾರ್ಲರ್ ಗಳನ್ನು 75 ಲಕ್ಷ ರೂ. ವೆಚ್ಚದಲ್ಲಿ ನಿರ್ಮಸಲಾಗಿದೆ.
ಪಾರ್ಲರ್ಗಳಲ್ಲಿ ನಂದಿನಿ ಉತ್ಪನ್ನಗಳನ್ನೇ ಮಾರುವಂತೆ ಸ್ಪಷ್ಠ ನಿರ್ದೇಶನ ನೀಡಲಾಗಿದೆ ಎಂದು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಪ್ರಕಾಶ ಇದೇ ಸಂದರ್ಭದಲ್ಲಿ ತಿಳಿಸಿದರು. ಒಕ್ಕೂಟದ ನಿರ್ದೇಶಕರುಗಳಾದ ಮಲ್ಲಿಕಾರ್ಜುನ ಬಿರಾದಾರ, ಶ್ರೀಕಾಂತ ದಾನಿ, ಈರಣ್ಣ ಝಳಕಿ, ದಿವಾಕರ
ಜಾಹಗೀರದಾರ, ಭೀಮರಾವ ಭರ್ತಿ, ವಿಠಲರೆಡ್ಡಿ ಉಪಸ್ಥಿತರಿದ್ದರು.
ತಾವು ಅಧ್ಯಕ್ಷರಾದ ನಂತರ ಅನಗತ್ಯ ಸೋರಿಕೆ ಕಡಿವಾಣ ಹಾಕಿರುವುದು ಜತೆಗೆ ಪಾರದರ್ಶಕ ಆಡಳಿತದ ಪರಿಣಾಮ ಒಕ್ಕೂಟ ಲಾಭ ಹೊಂದಿದ್ದು, ಹೀಗಾಗಿ ಆಡಳಿತ ಒಕ್ಕೂಟದ 25 ವರ್ಷ ಇತಿಹಾಸದಲ್ಲಿ ರೈತರಿಂದ ಖರೀದಿಸಲಾಗುವ ಹಾಲಿನ ದರ ಹೆಚ್ಚಿಸಿಲ್ಲ. ಸರ್ಕಾರವೇ ಹೆಚ್ಚಿಸಿದಾಗ ಮಾತ್ರ ದರ ಹೆಚ್ಚಿಸಲಾಗಿದೆ. ಈಗ ತಮ್ಮ ಅವಧಿಯಲ್ಲಿ ರೈತರಿಗೆ ಸಹಾಯ ಕಲ್ಪಿಸುತ್ತಿರುವುದು ಖುಷಿ ತರುತ್ತಿದೆ.
ಆರ್.ಕೆ.ಪಾಟೀಲ್,
ಅಧ್ಯಕ್ಷರು, ಕಲಬುರಗಿ-ಬೀದರ್ ಹಾಗೂ
ಯಾದಗಿರಿ ಹಾಲು ಉತ್ಪಾದಕರ ಒಕ್ಕೂಟ