ಹುಣಸೂರು: ಹರೀನಹಳ್ಳಿಯಲ್ಲಿ ತುಂಬಿದ ಕೆರೆಯಲ್ಲಿ ಸಂಭ್ರಮದ ತೆಪ್ಪೋತ್ಸವ
Team Udayavani, Sep 4, 2022, 10:58 AM IST
ಹುಣಸೂರು: ಹದಿನೈದು ವರ್ಷಗಳ ನಂತರ ತುಂಬಿದ ಕೆರೆಯಲ್ಲಿ ಗ್ರಾಮಸ್ಥರು ತೆಪ್ಪೋತ್ಸವ ನಡೆಸಿ, ಬಾಗೀನ ಅರ್ಪಿಸಿ ಸಂಭ್ರಮಿಸಿದರು.
ಹುಣಸೂರು ತಾಲೂಕಿನ ಹನಗೋಡು ಹೋಬಳಿಯ ಹರೀನಹಳ್ಳಿಯ ದೊಡ್ಡ ಕೆರೆಯಲ್ಲಿ ಮಾದಹಳ್ಳಿ ಉಕ್ಕಿನಕಂತೆ ಮಠದ ಶ್ರೀ ಸಾಂಬಸದಾಶಿವ ಸ್ವಾಮಿಜಿಗಳ ಸಾನಿಧ್ಯದಲ್ಲಿ, ಗ್ರಾಮದ ಯಜಮಾನ ಮಹದೇವಪ್ಪರ ನೇತೃತ್ವದಲ್ಲಿ, ಕರ್ಣಕುಪ್ಪೆ ಗ್ರಾ.ಪಂ.ನ ಸಹಯೋಗದಲ್ಲಿ ಅಲಂಕೃತ ತೆಪ್ಪದಲ್ಲಿ ಗ್ರಾಮದೇವತೆ ಮುತ್ತುರಾಯಸ್ವಾಮಿಯ ಉತ್ಸವ ಮೂರ್ತಿಯನ್ನಿಟ್ಟು ತೆಪ್ಪೋತ್ಸವ ನಡೆಸಿದರು. ಗ್ರಾಮದ ಮಹಿಳೆಯರು ತುಂಬಿದ ಕೆರೆಯಲ್ಲಿ ಗಂಗೆ ಪೂಜೆ ನಡೆಸಿ ಬಾಗೀನ ಅರ್ಪಿಸಿದರು.
ಹದಿನಾರು ಎಕರೆ ವಿಸ್ತೀರ್ಣದ ಈ ದೊಡ್ಡ ಕೆರೆ ತುಂಬಿರುವುದರಿಂದ ಸುಮಾರು 100 ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ನೀರುಣಿಸಲಿದೆ. ಅಲ್ಲದೆ ಸುತ್ತಲಿನ ಕೊಳವೆಬಾವಿಗಳಲ್ಲಿ ಅಂತರ್ಜಲ ವೃದ್ದಿಸಲಿದ್ದು, ಈ ಬಾಗದ ನೀರಿನ ಸಮಸ್ಯೆ ನೀಗಿಸಿದೆ ಎಂದು ತಾಲೂಕು ಗ್ರಾಮ ಪಂಚಾಯ್ತಿ ಸದಸ್ಯರ ಒಕ್ಕೂಟದ ಅಧ್ಯಕ್ಷ ಹರೀನಹಳ್ಳಿಕುಮಾರಸ್ವಾಮಿ ಸೇರಿದಂತೆ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದರು.
ಈ ವೇಳೆ ಗ್ರಾ.ಪಂ. ಸದಸ್ಯರಾದ ರಾಣಿ ರವಿಕುಮಾರ್, ಪುಟ್ಟಮ್ಮಮಲ್ಲಿಕಾರ್ಜುನ, ಹೆಮ್ಮಿಗೆ ಪಾಪಣ್ಣ, ಕುಮಾರಸ್ವಾಮಿ, ಪಿಡಿಓ ರಾಮಣ್ಣ, ಭಾಗ್ಯಮಹೇಶ್, ಅರ್ಚಕ ನಟೇಶಾರಾಧ್ಯ, ಮುಖಂಡರಾದ ಪ್ರಭಾಕರಾರಾಧ್ಯ, ಕಣಗಾಲುರಾಘವೇಂದ್ರ ಸೇರಿದಂತೆ ಗ್ರಾಮಸ್ಥರು ಸಂಭ್ರಮದಿಂದ ತೆಪ್ಪೋತ್ಸವವನ್ನು ಕಣ್ತುಂಬಿಕೊಂಡರು.