ಮೈಸೂರು ರೈಲು ನಿಲ್ದಾಣ ಖಾಸಗಿ ಪಾಲಾದಲೂ ಅಚ್ಚರಿಯಿಲ್ಲ
ಎನ್ಇಪಿ ಬಲಪಂಥೀಯ ವ್ಯವಸ್ಥೆ ಬಿಗಿಗೊಳಿಸುವ ನೀತಿ
Team Udayavani, Oct 4, 2021, 2:21 PM IST
ಮೈಸೂರು: ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಹಿಂದುತ್ವದ ರಾಜಕಾರಣ ಮತ್ತು ಬಲಪಂಥೀಯ ವ್ಯವಸ್ಥೆ ಬಿಗಿಗೊಳಿಸುವ ನೀತಿಯಾಗಿದೆ ಎಂದು ಚಿಂತಕ ನಾ.ದಿವಾಕರ ಅಭಿಪ್ರಾಯಪಟ್ಟರು. ದಲಿತ ಸಂಘರ್ಷ ಸಮಿತಿ 67ನೇ ವಾರ್ಷಿಕ ದೀಕ್ಷಾ ದಿನದ ಅಂಗವಾಗಿ ನಗರದ ಎಂಜಿ ನಿಯರ್ ಗಳ ಸಂಸ್ಥೆಯಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಶಿಕ್ಷಣ ನೀತಿ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
ಅಚ್ಚರಿಪಡಬೇಕಿಲ್ಲ: ಇವತ್ತಿನ ಭಾರತ ಎಲ್ಲವನ್ನೂ ಕಳೆದುಕೊಳ್ಳುತ್ತಿದೆ. ಸ್ವಾಯತ್ತ ಸಂಸ್ಥೆಗಳು ಹಾಗೂ ಸಾರ್ವಜನಿಕ ಸಂಸ್ಥೆಗಳನ್ನೂ ನಾವು ಕಳೆದುಕೊಳ್ಳುತ್ತಿದ್ದೇವೆ. ಮುಂದೊಂದು ದಿನ ಮೈಸೂರು ರೈಲು ನಿಲ್ದಾಣವೂ ಖಾಸಗಿ ಅವರಿಗೆ ಮಾರಾಟವಾದರೆ ಅಚ್ಚರಿ ಪಡಬೇಕಿಲ್ಲ ಎಂದು ಎಚ್ಚರಿಸಿದರು.
ಜಲಜೀವನ್ಮಿಷನ್ ಮೂಲಕ ನೀರನ್ನೂ ಖಾಸಗೀಕರಣಗೊಳಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ನಮ್ಮೂರಿನ ಕೆರೆ ನೀರನ್ನು ಮುಟ್ಟುವುದಕ್ಕೂ ನಾವು ಖಾಸಗಿಯವರ ಅನುಮತಿ ಕೇಳಬೇಕಾಗುವ ಪರಿಸ್ಥಿತಿ ಬರಬಹುದು ಎಂದರು.
ಇದನ್ನೂ ಓದಿ:-ಲಖೀಂಪುರ ಹಿಂಸಾಚಾರದಲ್ಲಿ ಮೃತಪಟ್ಟ ರೈತರಿಗೆ 45 ಲಕ್ಷ, ಸರಕಾರಿ ಉದ್ಯೋಗ
ತರಾತುರಿಯಲ್ಲಿ ಜಾರಿ: ಹೈಕೋರ್ಟ್ ವಕೀಲ ಎಚ್.ಮೋಹನ್ಕುಮಾರ್ ಮಾತನಾಡಿ, ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ನೆರೆಯ ಕೇರಳ ಹಾಗೂ ತಮಿಳುನಾಡು ರಾಜ್ಯಗಳು ತಿರಸ್ಕರಿಸುತ್ತಿದ್ದರೂ ನಮ್ಮ ರಾಜ್ಯದಲ್ಲಿ ತರಾತುರಿಯಲ್ಲಿ ಜಾರಿಗೊಳಿಸಲಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಚರ್ಚಿಸದೇ ಅನುಮೋದನೆ: ಪ್ರಪಂಚದಲ್ಲಿ ಅದ್ಭುತವಾದ ಸಂಸದೀಯ ಪ್ರಜಾತಾಂತ್ರಿಕ ವ್ಯವಸ್ಥೆ ಭಾರತದಲ್ಲಿದೆ. ಈ ಪ್ರಜಾತಂತ್ರ ವ್ಯವಸ್ಥೆ ಚೆನ್ನಾಗಿ ನಡೆಯಬೇಕಾದರೆ ಪ್ರಬಲವಾದ ವಿರೋಧ ಪಕ್ಷವಿರಬೇಕು. ಆದರೆ, ಇಂದು ವಿರೋಧ ಪಕ್ಷವೇ ಇಲ್ಲವಾಗಿದೆ. ಹೀಗಾಗಿ ಸಂಸತ್ನಲ್ಲಿ ಚರ್ಚಿಸದೇ ಕಾಯ್ದೆ, ಮಸೂದೆ, ಯೋಜನೆಗಳಿಗೆ ಅನುಮೋದನೆ ದೊರೆಯುತ್ತಿದೆ ಎಂದರು. ದಲಿತ ಸಂಘರ್ಷ ಸಮಿತಿ ಸಂಚಾಲಕ ಚೋರನಹಳ್ಳಿ ಶಿವಣ್ಣ, ಚಿಂತಕ ಡಾ.ಹರೀಶ್ ಕುಮಾರ್, ರಾಜ್ಯ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜು, ಲೇಖಕ ಸಣ್ಣಯ್ಯ ಲಕ್ಕೂರು, ಕೆ.ವಿ.ದೇವೇಂದ್ರ, ನಟರಾಜ ಹಾರೋಹಳ್ಳಿ, ದಲಿತ ಸಂಘರ್ಷ ಸಮಿತಿ ಸಂಘಟನಾ ಸಂಚಾಲಕ ಯಡದೊರೆ ಮಹಾದೇವಯ್ಯ, ಶಿವಮೂರ್ತಿ ಶಂಕರಪುರ, ಕಲ್ಲಹಳ್ಳಿ ರಮೇಶ್, ಆನಂದ ರಂಗಸಮುದ್ರ ಮತ್ತಿರರರು ಹಾಜರಿದ್ದರು.