1 ಲಕ್ಷ ರೂ ಲಂಚ ಸ್ವೀಕಾರ : ಎಸಿಬಿ ಬಲೆಗೆ ಬಿದ್ದ ಪಟ್ಟಣ ಪಂಚಾಯತ್ ಕಂಪ್ಯೂಟರ್ ಆಪರೇಟರ್
Team Udayavani, Sep 25, 2020, 6:09 PM IST
ಕೊಪ್ಪಳ: ಜಿಲ್ಲೆಯ ಕುಕನೂರು ಪಟ್ಟಣ ಪಂಚಾಯಿತಿಯ ಕಂಪ್ಯೂಟರ್ ಆಪರೇಟರ್ ಕುಮಾರಸ್ವಾಮಿ ಹಿರೇಮಠ ಅವರು ಗುತ್ತಿಗೆದಾರನಿಂದ 1 ಲಕ್ಷ ರೂ. ಲಂಚ ಸ್ವೀಕರಿಸುತ್ತಿರುವ ವೇಳೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಆತನನ್ನು ಬಂಧಿಸಿದ್ದಾರೆ.
ಕುಕನೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಶೌಚಾಲಯ ನಿರ್ಮಾಣಕ್ಕಾಗಿ ಕೆಲಸದ ಬಿಲ್ ಮಾಡಿ ಕೊಡಲು ಪಪಂ ಕಂಪ್ಯೂಟರ್ ಆಪರೇಟರ್ ಕುಮಾರಸ್ವಾಮಿ ಅವರು ಗುತ್ತಿಗೆದಾರ ಅಬ್ದುಲ್ ಖಾದರ್ ಖಾಜಿಯಿಂದ 1 ಲಕ್ಷ ರೂಪಾಯಿ ಹಣದ ಬೇಡಿಕೆಯನ್ನಿಟ್ಟಿದ್ದರು.
ಈ ಕುರಿತು ಗುತ್ತಿಗೆದಾರನು ಎಸಿಬಿಗೆ ದೂರು ನೀಡಿದ್ದನು. ಕೊಪ್ಪಳ ಎಸಿಬಿ ಅಧಿಕಾರಿಗಳ ತಂಡವು ಪೂರ್ವ ತಯಾರಿ ನಡೆಸಿಕೊಂಡು ಎಸಿಬಿ ಇನ್ಸಪೆಕ್ಟರ್ ಬಾಲನಗೌಡ ಎಸ್. ಎಂ ಅವರ ನೇತೃತ್ವದಲ್ಲಿ ಕುಮಾರಸ್ವಾಮಿ 1 ಲಕ್ಷ ಲಂಚ ಸ್ವೀಕರಿಸುತ್ತಿದ್ದ ವೇಳೆ ದಾಳಿ ನಡೆಸಿ ಬಂಧಿಸಿದ್ದಾರೆ. ಎಸಿಬಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಆರಂಭಿಸಿ ಅಧಿಕಾರಿ ಕುಮಾರಸ್ವಾಮಿ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.