ರಸಗೊಬ್ಬರಕ್ಕೆ ಹೊಂದಾಣಿಕೆ ಸಹಾಯಧನ ಅಗತ್ಯ: ಸಂಪತ್ ಆಗ್ರಹ
Team Udayavani, Apr 27, 2022, 5:00 AM IST
ಮಂಗಳೂರು: ರಸಗೊಬ್ಬರಗಳ ಬೆಲೆಯಲ್ಲಿ ವಿಪರೀತ ಏರಿಕೆಯಾಗಿದ್ದು ರೈತರಿಗೆ ಕಷ್ಟವಾಗು ತ್ತಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರದ ಕೃಷಿ ಹಾಗೂ ತೋಟಗಾರಿಕೆ ಸಚಿವಾಲಯಗಳು ರಸಗೊಬ್ಬರಕ್ಕೆ ಹೊಂದಾಣಿಕೆ ಸಹಾಯಧನ ಘೋಷಿಸಬೇಕು ಎಂದು ದ.ಕ. ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಸಂಪತ್ ಸಾಮ್ರಾಜ್ಯ ಆಗ್ರಹಿಸಿದ್ದಾರೆ.
ದ.ಕ. ಕೃಷಿ ವಿಜ್ಞಾನ ಕೇಂದ್ರ, ಕೃಷಿ ತಂತ್ರಜ್ಞಾನ ನಿರ್ವಹಣ ಸಮಿತಿ, ಕೃಷಿ ಇಲಾಖೆ ಆಶ್ರಯದಲ್ಲಿ ನಗರದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಮಂಗಳವಾರ ಆಯೋಜಿಸಿದ್ದ ರೈತ- ವಿಜ್ಞಾನಿ ಸಂವಾದ, ವಸ್ತುಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತ ನಾಡಿದರು.
ಪ್ರಸ್ತುತ ಕನಿಷ್ಠ ಬೆಂಬಲ ಬೆಲೆಯನ್ನು ಬೆಳೆ ಕೊçಲಿನ ಬಳಿಕ ಘೋಷಿಸಲಾಗುತ್ತಿದೆ. ಬದಲು ನಾಟಿಯ ಸಂದರ್ಭದಲ್ಲೇ ಘೋಷಿಸಬೇಕು, ಕೊçಲು ಪ್ರಾರಂಭಕ್ಕೆ ಮೊದಲೇ ಖರೀದಿ ಕೇಂದ್ರಗಳನ್ನು ನಿಗದಿಪಡಿಸಬೇಕು. ಇದರಿಂದ ರೈತರ ಬೆಳೆಗಳಿಗೆ ಬೆಲೆ ಸ್ಥಿರತೆ ಲಭಿಸುತ್ತದೆ ಎಂದರು.
ಕೃಷಿಯ ಆಕರ್ಷಣೆ
ರಾಜ್ಯ ರೈತ ಸಂಘದ ಮುಂದಾಳು ಮನೋಹರ ಶೆಟ್ಟಿ ಮಾತನಾಡಿ, ಸ್ವಾಭಿ ಮಾನಿ, ಸ್ವಾವಲಂಬಿ ಬದುಕು ನೀಡುವ ಕೃಷಿ ಕ್ಷೇತ್ರದತ್ತ ಪ್ರಸ್ತುತ ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿತ ರಾಗು ವುದು ಸ್ವಾಗತಾರ್ಹ ಬೆಳವಣಿಗೆ. ಸರಕಾರದ ವಿವಿಧ ಯೋಜನೆಗಳ ಪ್ರಯೋಜನವನ್ನು ಕೃಷಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಡೆದುಕೊಳ್ಳಬೇಕು. ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಯಲ್ಲಿ ಸಿಬಂದಿ ಕೊರತೆಯನ್ನು ನೀಗಿಸಲು ಸರಕಾರ ಕ್ರಮ ಕೈಗೊಳ್ಳಬೇಕು ಎಂದರು.
ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಎಂ.ಸಿ. ಸೀತಾ ಮಾತನಾಡಿ, ಸರಕಾರದ ವಿವಿಧ ಯೋಜನೆಗಳನ್ನು ರೈತರಿಗೆ ತಲುಪಿಸುವ ನಿಟ್ಟಿನಲ್ಲಿ ಆಂದೋಲನದಂತೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದರು. ನಬಾರ್ಡ್ನ ಎಜಿಎಂ ಸಂಗೀತಾ ಕರ್ತಾ ಅವರು ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ ಬಗ್ಗೆ ವಿವರಿಸಿದರು.
ಸಮ್ಮಾನ
ಮೀನು ಮೌಲ್ಯವರ್ಧಿತ ಉತ್ಪನ್ನ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿರುವ ರೈತ ಮಹಿಳೆ, ಸಮಗ್ರ ಸಂಜೀವಿನಿ ಸ್ವಸಹಾಯ ಸಂಘದ ಸಾವಿತ್ರಿ ಅವರನ್ನು ಸಮ್ಮಾನಿಸಲಾಯಿತು.
ಹಿರಿಯ ವಿಜ್ಞಾನಿ ಹಾಗೂ ಕೆವಿಕೆ ಮುಖ್ಯಸ್ಥ ಡಾ| ಟಿ.ಜೆ. ರಮೇಶ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಪೊ ರೇಟರ್ ಭರತ್ರಾಜ್, ತೋಟ ಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಪ್ರವೀಣ್, ಕೃಷಿ ವಿಜ್ಞಾನಿ ವಸಂತ ಶೆಟ್ಟಿ ಅತಿಥಿಯಾಗಿದ್ದರು. ಮೀನುಕಾರಿಕೆ ವಿಜ್ಞಾನಿ ಡಾ| ಚೇತನ್ ಸ್ವಾಗತಿಸಿದರು.
ಕಿಸಾನ್ ಕ್ರೆಡಿಟ್ ಕಾರ್ಡ್ ಆಂದೋಲನ
ಜಿಲ್ಲೆಯಲ್ಲಿ ಎ. 24ರಿಂದ ಕಿಸಾನ್ ಕ್ರೆಡಿಟ್ ಕಾರ್ಡ್ ಅಭಿಯಾನ ನಡೆಯುತ್ತಿದ್ದು ಮೇ 1ರ ವರೆಗೆ ಮುಂದುವರಿಯಲಿದೆ. ಪಿಎಂ ಕಿಸಾನ್ ಯೋಜನೆಯಲ್ಲಿ ಜಿಲ್ಲೆಯಲ್ಲಿ 1,63,057 ಮಂದಿ ಒಳಗೊಂಡಿದ್ದು 97,000 ಮಂದಿಗೆ ಕಾರ್ಡ್ ಆಗಲು ಬಾಕಿ ಇದೆ. ಜಮೀನಿನ ಆರ್ಟಿಸಿ, ಆಧಾರ್ಕಾರ್ಡ್, ಭಾವಚಿತ್ರಗಳೊಂದಿಗೆ ಬ್ಯಾಂಕಿಗೆ, ಕೃಷಿ ಇಲಾಖೆಗೆ ತೆರಳಿ ಕಿಸಾನ್ ಕ್ರೆಡಿಟ್ ಕಾರ್ಡ್ ಕಾರ್ಯ ಮಾಡಬಹುದಾಗಿದೆ ಎಂದು ನಬಾರ್ಡ್ ಎಜಿಎಂ ಸಂಗೀತಾ ಕರ್ತಾ ಹೇಳಿದರು.