ಶಿವಸೇನೆ-ಎಂಎನ್ಎಸ್ ಪೋಸ್ಟರ್ ವಾರ್; ರಾಜ್ ಠಾಕ್ರೆ ಅಯೋಧ್ಯೆ ಭೇಟಿ ವಿಚಾರದಲ್ಲಿ ಜಟಾಪಟಿ
Team Udayavani, May 9, 2022, 12:46 AM IST
ಮುಂಬಯಿ: “ಧ್ವನಿವರ್ಧಕ ವಿವಾದ’ದ ಬಳಿಕ ಈಗ ಶಿವಸೇನೆ ಮತ್ತು ಎಂಎನ್ಎಸ್ “ಅಯೋಧ್ಯೆ ಭೇಟಿ’ಗೆ ಸಂಬಂಧಿಸಿ ಪೋಸ್ಟರ್ ವಾರ್ ಶುರುವಿಟ್ಟುಕೊಂಡಿವೆ.
ಜೂ. 5ರಂದು ತಾವು ಅಯೋಧ್ಯೆಗೆ ಭೇಟಿ ನೀಡುವುದಾಗಿ ಇತ್ತೀಚೆಗಷ್ಟೇ ಎಂಎನ್ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಘೋಷಿಸಿದ್ದರು. ಅದಕ್ಕೆ ಪ್ರತಿಯಾಗಿ ಈಗ ಮಹಾರಾಷ್ಟ್ರ ಪ್ರವಾಸೋದ್ಯಮ ಸಚಿವ ಆದಿತ್ಯ ಠಾಕ್ರೆ ಸುದ್ದಿಗೋಷ್ಠಿ ನಡೆಸಿ, ಮುಂದಿನ ತಿಂಗಳು ತಾವೂ ಪಕ್ಷದ ಕಾರ್ಯಕರ್ತರೊಂದಿಗೆ ಅಯೋಧ್ಯೆ ತಲುಪುವುದಾಗಿ ಹೇಳಿದ್ದಾರೆ.
ಇನ್ನೊಂದೆಡೆ ಎಂಎನ್ಎಸ್ “ರಾಜ್ ತಿಲಕಕ್ಕೆ ನಡೆಸಿ ತಯಾರಿ, ಬರುತ್ತಿದ್ದಾರೆ ಭಗವಧಾರಿ’ ಎಂದು ಬರೆದಿರುವ ದೊಡ್ಡ ಪೋಸ್ಟರ್ವೊಂದನ್ನು ಅಯೋಧ್ಯೆ ನಗರದಲ್ಲಿ ಅಳವಡಿಸಿದೆ. ಇದಕ್ಕೆ ಸಡ್ಡು ಹೊಡೆದಿರುವ ಶಿವಸೇನೆ, “ಅಸಲಿಗಳು ಬರುತ್ತಿದ್ದಾರೆ. ನಕಲಿಗಳ ಬಗ್ಗೆ ಎಚ್ಚರವಿರಲಿ’ ಎಂದು ಬರೆದಿರುವ ಪೋಸ್ಟರ್ ಅನ್ನು ಹಾಕಿದೆ. ಆ ಪೋಸ್ಟರ್ನಲ್ಲಿ ಆದಿತ್ಯ ಠಾಕ್ರೆ, ಉದ್ಧವ್ ಠಾಕ್ರೆ, ದಿ| ಬಾಳಾ ಠಾಕ್ರೆಯವರ ಫೋಟೋಗಳನ್ನೂ ಮುದ್ರಿಸಲಾಗಿದೆ.
ನಕಲಿಗಳಿಗೆ ಶ್ರೀರಾಮ ಆಶೀರ್ವದಿಸಲ್ಲ: ಇದೇ ವೇಳೆ ರಾಜ್ ಠಾಕ್ರೆ ವಿರುದ್ಧ ವಾಗ್ಧಾಳಿ ಮುಂದುವರಿಸಿರುವ ಶಿವಸೇನೆ ಸಂಸದ ಸಂಜಯ್ ರಾವತ್, “ನಕಲಿ ಭಕ್ತಿಯೊಂದಿಗೆ, ರಾಜಕೀಯ ಕಾರಣಗಳಿಗಾಗಿ ಅಯೋಧ್ಯೆಗೆ ಬರುವವರನ್ನು ಶ್ರೀರಾಮ ಎಂದಿಗೂ ಆಶೀರ್ವದಿಸುವುದಿಲ್ಲ’ ಎಂದಿದ್ದಾರೆ.
ನಾನೂ ಠಾಕ್ರೆ, ನೀವೂ ಠಾಕ್ರೆ!
ನೀರಿನ ಸಮಸ್ಯೆ ಕುರಿತು ಆಲಿಸಲು ಠಾಣೆ ಜಿಲ್ಲೆಯ ಸಹಾಪುರದ ಗ್ರಾಮವೊಂದಕ್ಕೆ ರವಿವಾರ ಭೇಟಿ ನೀಡಿದ ಸಚಿವ ಆದಿತ್ಯ ಠಾಕ್ರೆಗೆ ಅಚ್ಚರಿ ಕಾದಿತ್ತು. ಆ ಗ್ರಾಮದಲ್ಲಿ ಬಹುತೇಕ ಎಲ್ಲರೂ ತಮ್ಮ ಹೆಸರಿನೊಂದಿಗೆ “ಠಾಕ್ರೆ’ ಸರ್ನೆಮ್ ಸೇರಿಸಿಕೊಂಡಿದ್ದರು. ಇದರಿಂದ ಖುಷಿಪಟ್ಟ ಆದಿತ್ಯ ಠಾಕ್ರೆ, “ನಾನೂ ಠಾಕ್ರೆ, ನೀವೂ ಠಾಕ್ರೆ. ಎಲ್ಲರೂ ಸೇರಿ ಸಮಸ್ಯೆಗಳನ್ನು ಬಗೆಹರಿಸೋಣ. ಇದು ಠಾಕ್ರೆಗೆ ಠಾಕ್ರೆ ನೀಡುವ ಆಶ್ವಾಸನೆ’ ಎಂದು ಹೇಳುತ್ತಿದ್ದಂತೆ ಎಲ್ಲರೂ ಹರ್ಷೋದ್ಗಾರ ಮಾಡಿದರು.