ಫಲಿತಾಂಶ ಬಳಿಕ ಕಾಂಗ್ರೆಸ್3 ಭಾಗ: ಕಾರಜೋಳ
Team Udayavani, May 3, 2019, 6:02 AM IST
ವಿಜಯಪುರ: ಸಮರ್ಥ ನಾಯಕತ್ವದ ಕೊರತೆ ಎದುರಿಸುತ್ತಿರುವ ಕಾಂಗ್ರೆಸ್ ಪಕ್ಷ ಲೋಕಸಭೆ ಫಲಿತಾಂಶದ ನಂತರ ಮೂರು ಭಾಗವಾಗಲಿದೆ. ಕೆಲವರು ಬಿಜೆಪಿ ಸೇರಿದರೆ ಮತ್ತೆ ಕೆಲವರು ಬೇರೆಡೆ ಹೋಗುತ್ತಾರೆ. ಕೆಲವರು ಮಾತ್ರ ಕಾಂಗ್ರೆಸ್ ಪಕ್ಷದಲ್ಲಿ ಉಳಿಯುತ್ತಾರೆ. ಇನ್ನು ಫಲಿತಾಂಶಕ್ಕೆ ಮುನ್ನವೇ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಪತನವಾಗಲಿದೆ ಎಂದು ವಿಧಾನಸಭೆ ವಿಪಕ್ಷದ ಉಪ ನಾಯಕ ಗೋವಿಂದ ಕಾರಜೋಳ ಭವಿಷ್ಯ ನುಡಿದಿದ್ದಾರೆ.
ಗುರುವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿಗೆ ದೇಶದ ಸಾಮಾನ್ಯ ಜನರ ಸಮಸ್ಯೆಗಳ ಅರಿವಿಲ್ಲ. ಬಡತನ ಏನು ಎಂಬುದು ಗೊತ್ತಿಲ್ಲ. ನಾಯಕತ್ವದ ಕೊರತೆಯಿಂದಾಗಿ ರಾಹುಲ್ ಗಾಂಧಿ ಭ್ರಮೆಯಲ್ಲಿದ್ದಾರೆ. ರಾಜ್ಯದ ಸಮ್ಮಿಶ್ರ ಸರ್ಕಾರ ಲೋಕಸಭೆ ಚುನಾವಣೆ ಫಲಿತಾಂಶಕ್ಕೆ ಮೊದಲೇ ಪತನಗೊಳ್ಳುವ ಸ್ಥಿತಿ ಇರುವಾಗ ‘ಆಪರೇಶನ್’ ಮಾಡುವ ಅಗತ್ಯವಿಲ್ಲ. ಮೈತ್ರಿ ಸರ್ಕಾರದಲ್ಲಿ ಭ್ರಷ್ಟಾಚಾರ ತಾರಕಕ್ಕೇರಿದ್ದು, ಸರ್ಕಾರ ರಾಜ್ಯದ ಬೊಕ್ಕಸ ಲೂಟಿ ಹೊಡೆಯುತ್ತಿದೆ. ಸಿಎಂ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಮಿತ್ರ ಪಕ್ಷಗಳಲ್ಲಿ ಪರಸ್ಪರ ಅಪನಂಬಿಕೆಗಳು ಹೆಚ್ಚಿದ್ದು, ಒಬ್ಬರಿಗೊಬ್ಬರು ಬೆನ್ನಿಗೆ ಚೂರಿ ಹಾಕುವ ಕೆಲಸದಲ್ಲಿ ಮಗ್ನರಾಗಿದ್ದಾರೆ ಎಂದರು.