Hunsur: ಲೈಂಗಿಕ ಕಿರುಕುಳ ಆರೋಪ- ಮುಖ್ಯ ಶಿಕ್ಷಕ ಸಸ್ಪೆಂಡ್
Team Udayavani, Dec 21, 2023, 4:41 PM IST
ಹುಣಸೂರು: ಶಾಲೆಯ ಹೆಣ್ಣು ಮಕ್ಕಳೊಂದಿಗೆ ಅನುಚಿತವಾಗಿ ವರ್ತಿಸಿದ್ದ ಪ್ರಭಾರ ಮುಖ್ಯ ಶಿಕ್ಷಕ ಎಸ್.ಕೃಷ್ಣಮೂರ್ತಿಯನ್ನು ಡಿಡಿಪಿಐ ಎಚ್.ಕೆ.ಪಾಂಡುರವರು ಸೇವೆಯಿಂದ ಅಮಾನತು ಮಾಡಿ ಆದೇಶಿಸಿದ್ದಾರೆ.
ಶಾಲೆಯಲ್ಲಿ ಹಲವಾರು ದಿನಗಳಿಂದ ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿರುವ ಕುರಿತು ಗ್ರಾಮಸ್ಥರು, ಚುನಾಯಿತ ಪ್ರತಿನಿಗಳು, ಎಸ್.ಡಿ.ಎಂ.ಸಿ.ಯವರು ದೂರು ನೀಡಿರುವುದರ ಬಗ್ಗೆ ಮಂಗಳವಾರ ಶಾಲೆಗೆ ತೆರಳಿದ್ದ ಬಿಇಓ ರೇವಣ್ಣ ನೇತೃತ್ವದ ಮಹಿಳಾ ಆಧಿಕಾರಿಗಳ ತಂಡವು ವಿಚಾರಣೆ ನಡೆಸಿದ್ದು, ಮೇಲ್ನೋಟಕ್ಕೆ ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ಬಿಇಓರ ವರದಿಯನ್ನಾಧರಿಸಿ ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಸೇವೆಯಿಂದ ಅಮಾನತುಗೊಳಿಸಲಾಗಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ಡಿಡಿಪಿಐ ಪಾಂಡು ತಿಳಿಸಿದ್ದಾರೆ.
ಸಿಡಿಪಿಓ ಭೇಟಿ:
ಬುಧವಾರದಂದು ಶಾಲೆಗೆ ಸಿಡಿಪಿಓ ರಶ್ಮಿಯವರು ಭೇಟಿ ಇತ್ತು ಮಾಹಿತಿ ಸಂಗ್ರಹಿಸಿ, ವರದಿ ನೀಡಿದ್ದಾರೆ.
ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಾಪತ್ತೆಯಾಗಿರುವ ಆರೋಪಿ ಪತ್ತೆಗೆ ಕ್ರಮವಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.