ಅರ್ಧಕ್ಕೆ ನಿಂತ ಅಂಬಾಗಿಲು-ಪೆರಂಪಳ್ಳಿ ರಸ್ತೆ ಕಾಮಗಾರಿ! ಧೂಳುಮಯ ರಸ್ತೆಯಲ್ಲಿ ಸಂಚಾರ ಸವಾಲು
Team Udayavani, Feb 14, 2022, 1:34 PM IST
ಉಡುಪಿ : ಅಂಬಾಗಿಲು- ಪೆರಂಪಳ್ಳಿ ಮೂಲಕ ಮಣಿಪಾಲ ಸಂಪರ್ಕಿಸುವ ಚತುಷ್ಪಥ ರಸ್ತೆ ಕಾಮಗಾರಿ ಕೆಲವು ದಿನಗಳಿಂದ ಅರ್ಧಕ್ಕೆ ನಿಂತಿದೆ. ಹಳೆಯ ಇಕ್ಕಟ್ಟಾದ ರಸ್ತೆ ವಿಸ್ತರಣೆಗೊಳಿಸಿ ಭೂಸ್ವಾಧೀನ ಪ್ರಕ್ರಿಯೆ ಮೂಲಕ ವ್ಯವಸ್ಥಿತ ರಸ್ತೆ ರೂಪಿಸುವ ಯೋಜನೆ ಇದಾಗಿದೆ. ಪೆರಂಪಳ್ಳಿ ಮೇಲ್ಸೇತುವೆಯಿಂದ ಮೂಡು ಪೆರಂಪಳ್ಳಿ ಚರ್ಚ್ವರೆಗೆ ಉತ್ತಮ ರಸ್ತೆ ನಿರ್ಮಾಣ ಗೊಂಡಿದೆ.
ಆದರೆ ಅಂಬಾಗಿಲಿನಿಂದ ರೈಲ್ವೇ ಮೇಲ್ಸೇತುವೆ ವರೆಗಿನ ರಸ್ತೆ ಪರಿಸ್ಥಿತಿ ತೀವ್ರ ಹದಗೆಟ್ಟಿದೆ. ಆರಂಭದಲ್ಲಿ ವೇಗವಾಗಿ ಸಾಗಿದ್ದ ಕಾಮಗಾರಿ ಹಲವು ದಿನಗಳಿಂದ ಕೆಲಸ ನಡೆಯದೆ ಪ್ರಸ್ತುತ ಜಲ್ಲಿ, ಮಣ್ಣಿನ ರಸ್ತೆಯಾಗಿ ರೂಪುಗೊಂಡಿದೆ.
ಜನರ ಪರದಾಟ
ವಿಪರೀತ ಧೂಳು, ಕೆಸರು, ಕಲ್ಲುಗಳ ಕಣದಿಂದ ದ್ವಿಚಕ್ರ ವಾಹನ ಸವಾರರು ಪ್ರತಿನಿತ್ಯ ಸಂಕಷ್ಟಪಡುತ್ತಿದ್ದಾರೆ. ಧೂಳು ಏಳದಂತೆ ನೀರು ಸಿಂಪಡಿಸಲಾಗುತ್ತಿದೆ. ಅದು ಕೆಲವೆಡೆ
ಕೆಸರಾಗುತ್ತದೆ. ಇದರಿಂದ ಕೆಲವು ಮಹಿಳೆ ಯರು ನಿಯಂತ್ರಣ ತಪ್ಪಿ ಜಾರಿ ಬಿದ್ದಿದ್ದಾರೆ. ರಸ್ತೆ ಬದಿ ಅಂಗಡಿ, ಮುಂಗಟ್ಟು, ಹೊಟೇಲ್ ವ್ಯಾಪಾರಿಗಳು, ಸ್ಥಳೀಯರು ಇದರಿಂದ ತತ್ತರಿಸಿ ಹೋಗಿದ್ದಾರೆ. ಶೀಘ್ರ ರಸ್ತೆ ನಿರ್ಮಿಸುವಂತೆ ಸಂಬಂಧಪಟ್ಟ ಇಲಾಖೆ, ಅಧಿಕಾರಿ ಗಳನ್ನು ನಾಗರಿಕರು ಆಗ್ರಹಿಸಿದ್ದಾರೆ.
ಗುತ್ತಿಗೆದಾರರಿಂದ ವಿಳಂಬ
23 ಕೋ. ರೂ. ವೆಚ್ಚದಲ್ಲಿ ಚತುಷ್ಪಥ ರಸ್ತೆ ನಿರ್ಮಾಣ.,ಟಿಡಿಆರ್ ಪ್ರಕ್ರಿಯೆ ಮೂಲಕ ಭೂಸ್ವಾಧೀನ, ಒಟ್ಟು 3.9 ಕಿ.ಮೀ. ರಸ್ತೆಯಲ್ಲಿ ಉಳಿದ 1.5 ಕಿ.ಮೀ. ರಸ್ತೆ ಕಾಮಗಾರಿ ಬಾಕಿ ಇದೆ. 2020ರಲ್ಲಿ ಶಾಸಕ ಕೆ. ರಘುಪತಿ ಭಟ್ ಕಾಮಗಾರಿ ಶಂಕುಸ್ಥಾಪನೆ ನೆರವೇರಿಸಿ ದ್ದರು. ಮೂವರು ಗುತ್ತಿಗೆದಾರರಿಗೆ ಕಾಮಗಾರಿ ನೀಡಲಾಗಿತ್ತು. ರೈಲ್ವೇ ಮೇಲ್ಸೇತುವೆಯಿಂದ ಮಣಿಪಾಲ ಕಡೆಗೆ ಸಾಗುವ ರಸ್ತೆ ನಿರ್ಮಾಣ ಇಬ್ಬರು ಗುತ್ತಿಗೆದಾರರಿಗೆ ವಹಿಸಲಾಗಿದ್ದು, ಈ ಭಾಗ ಸಂಪೂರ್ಣ ಮುಗಿಯುತ್ತ ಬಂದಿದೆ. ಆದರೆ ಅಂಬಾಗಿಲಿನಿಂದ ರೈಲ್ವೇ ಮೇಲ್ಸೇತುವೆ ವರೆಗೆ ಮಾತ್ರ ಕೆಲಸವನ್ನು ಹಲವು ದಿನ ಗಳಿಂದ ಅರ್ಧಕ್ಕೆ ನಿಲ್ಲಿಸಲಾಗಿದೆ. ಗುತ್ತಿಗೆದಾರರು ಬೇರೊಂದು ಕಡೆ ಕಾಮಗಾರಿ ವಹಿಸಿ ಕೊಂಡಿದ್ದು, ವಿಳಂಬಕ್ಕೆ ಕಾರಣ ಎಂದು ಸಾರ್ವಜನಿಕರು, ಸ್ಥಳಿಯ ಜನಪ್ರತಿನಿಧಿಗಳು ತಿಳಿಸಿದ್ದಾರೆ.
ಜನರಿಗೆ ಸಮಸ್ಯೆ
ಅಂಬಾಗಿಲು- ಪೆರಂಪಳ್ಳಿ ರಸ್ತೆ ಕಾಮಗಾರಿ ಸಂಬಂಧಿಸಿ ಗುತ್ತಿಗೆದಾರರು ವಿಳಂಬ ಮಾಡುತ್ತಿರು ವುದರಿಂದ ಜನರಿಗೆ ಕಿರಿಕಿರಿಯಾಗುತ್ತಿದೆ. ಧೂಳಿನಿಂದ ವಾಹನ ಸವಾರರು, ಸ್ಥಳೀಯರು ಹೈರಾಣಾಗಿದ್ದಾರೆ. ಶೀಘ್ರ ಕಾಮಗಾರಿ ಮುಗಿಸುವಂತೆ ಶಾಸಕರ ಮೂಲಕ ಸೂಚನೆ ನೀಡಿದ್ದೇವೆ.
-ಗಿರಿಧರ ಆಚಾರ್ಯ, ಕರಂಬಳ್ಳಿ ವಾರ್ಡ್ , ನಗರಸಭಾ ಸದಸ್ಯ.
ಗುತ್ತಿಗೆದಾರನಿಗೆ ನೋಟಿಸ್
ಅಂಬಾಗಿಲಿನಿಂದ ರೈಲ್ವೇ ಮೇಲ್ಸೇತುವೆ ವರೆಗೆ 1.5 ಕಿ.ಮೀ ರಸ್ತೆ ಕಾಮಗಾರಿ ಬಾಕಿ ಇದ್ದು, ಗುತ್ತಿಗೆದಾರರಿಗೆ ಕೆಲಸ ಪೂರ್ಣಗೊಳಿ ಸಲು ನೋಟಿಸ್ ಜಾರಿ ಮಾಡಿದ್ದೇವೆ. ಶೇ.80ರಷ್ಟು ಕೆಲಸವಾಗಿದೆ. ಹಂತಿಮ ಹಂತದ ಡಾಮರು ಕೆಲಸ ಮಾತ್ರ ಬಾಕಿ ಇದ್ದು, ಶೀಘ್ರ ಕಾಮಗಾರಿ ಮುಗಿಸಲು ಕ್ರಮ ಕೈಗೊಳ್ಳಲಾಗುವುದು.
-ಜಗದೀಶ್ ಭಟ್, ಎಇಇ, ಲೋಕೊಪಯೋಗಿ ಇಲಾಖೆ, ಉಡುಪಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ
Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ
Kapu Assembly constituency: ನಕಲಿ ಮತದಾನ;ಆರೋಪ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ