ಭೂ ಕಬಳಿಕೆ ಕಾಯಿದೆ ಕಲಂಗೆ ತಿದ್ದುಪಡಿ: ರೈತರು ಇನ್ನು ನಿರಾಳ
Team Udayavani, Aug 25, 2022, 11:00 PM IST
ಬೆಂಗಳೂರು: ಕರ್ನಾಟಕ ಭೂ ಕಬಳಿಕೆ (ನಿಷೇಧ) ಕಾಯಿದೆ 2011ರ ಕಲಂ 2(ಡಿ) ಗೆ ತಿದ್ದುಪಡಿ ತರಲು ನಿರ್ಧಾರ ಮಾಡಿದ್ದು, ಪ್ರಸ್ತಾವಿತ ಕರಡು ತಿದ್ದುಪಡಿಯು, ವಿಧೇಯಕದ ಮೂಲ ಕರಡಿಗೆ ವಿರುದ್ಧವಾಗಿರದೆ, ಗ್ರಾಮೀಣ ಪ್ರದೇಶದ, ರೈತರ ಹಾಗೂ ಇತರರ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸುವುದರಿಂದ ರಕ್ಷಣೆ ದೊರೆಯುತ್ತದೆ ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
ಸಚಿವ ಸಂಪುಟ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಸಣ್ಣ ಹಾಗೂ ಅತಿ ಸಣ್ಣ ರೈತರು ಹಾಗೂ ಜನಸಾಮಾನ್ಯರು, ಬಗರ್ ಹುಕುಂ ಸಾಗುವಳಿ ಸಂಬಂಧ, ಅರಣ್ಯ ಅಥವಾ ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಂಡಿದ್ದರೆ ಅವರು ಬೆಂಗಳೂರಿನಲ್ಲಿ ಸ್ಥಾಪಿತವಾದ ವಿಶೇಷ ನ್ಯಾಯಾಲಯಕ್ಕೆ ಬರಬೇಕಿತ್ತು. ಇದನ್ನು ತಪ್ಪಿಸಲು ನಗರ ಪ್ರದೇಶದ ಭೂ ಕಬಳಿಕೆಗಳನ್ನು ಮಾತ್ರ ವಿಶೇಷ ನ್ಯಾಯಾಲಯದ ವ್ಯಾಪ್ತಿಗೆ ಒಳಪಡಿಸಿ ರೈತರ ಭೂ ಒತ್ತುವರಿ ಪ್ರಕರಣಗಳನ್ನು ಸ್ಥಳೀಯವಾಗಿ ಎಸಿ ವ್ಯಾಪ್ತಿಯಲ್ಲಿ ಪರಿಹರಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು. ರಾಜ್ಯ ಸರ್ಕಾರದ ಈ ನಿರ್ಧಾರವನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ಸ್ವಾಗತಿಸಿದ್ದಾರೆ.
ಪ್ರಮುಖ ನಿರ್ಧಾರಗಳು
* ಕೊಂಕಣ ರೈಲ್ವೆ ಅಭಿವೃದ್ಧಿಗೆ 73.54 ಕೋಟಿ ನೀಡಲು ತೀರ್ಮಾನ.
* ಕೇಂದ್ರದ ನೀತಿ ಆಯೊಗದ ಮಾದರಿಯಲ್ಲಿ ಕರ್ನಾಟಕದ ಯೋಜನಾ ಆಯೊಗ ಪರಿವರ್ತಿಸಲು ಘಟನೋತ್ತರ ಅನುಮೋದನೆ
* ಹಾವೇರಿ ಜಿಲ್ಲೆ ಮಾದನಾಯಕನಹಳ್ಳಿ ರಸ್ತೆ ದುರಸ್ತಿಗೆ 14.60 ಕೋಟಿ ರೂ.ಅದೆ ರಸ್ತೆಗೆ 12.04. ಕೋಟಿ ಮಂಜೂರು.
* ವಿಜಯಪುರದಲ್ಲಿ ಡುಪ್ಲೆಕ್ಸ್ ನ್ಯಾಯಾಲಯ ನಿರ್ಮಾಟಕ್ಕೆ 12 ಕೋಟಿ.
* ಯಾದಗಿರಿ ಜಿಲ್ಲೆಯಲ್ಲಿ ಸಾಯಿ ಸಿದ್ದಾಶ್ರಮಕ್ಕೆ ಧಾರ್ಮಿಕ ಉದ್ದೇಶಕ್ಕೆ ಜಮೀನು ಮಂಜೂರು.
* ಶ್ರೀನಿವಾಸ ಎಜುಕೇಶನ್ ಸಂಸ್ಥೆಗೆ ಶೈಕ್ಷಣಿಕ ಉದ್ದೇಶಕ್ಕೆ 3 ಎಕರೆ ಮಂಜೂರು. ಶೇ.25 ದರದಲ್ಲಿ ನೀಡಲು ತೀರ್ಮಾನ
* ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಇಂಚಿಗೆರೆ 41 ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ 58 ಕೊಟಿ ರೂ.
* ಕಾರ್ಕಳ, ಹೆಬ್ರಿ ತಾಲೂಕು ಜಲ ಜೀವನದ ಮಿಷನ್ 1050 ಕೋಟಿ
* ಬೆಳಗಾವಿ ಜಿಲ್ಲೆಯಲ್ಲಿ 190 ಜಲ ಜೀವನ್ ಮಿಷನ್
* ಶಿವಮೊಗ್ಗ ಜಿಲ್ಲೆಗೆ 48 ಕೋಟಿ ಜಲ ಜೀವನ್ ಮಿಷನ್
* ಸೇಡಂ ತಾಲೂಕಿನಲ್ಲಿ ಎಸ್ಸಿ/ಎಸ್ಟಿ ಮಕ್ಕಳಿಗೆ ಮೆಕ್ಯಾನಿಕ್ ತರಬೇತಿ ಕೇಂದ್ರ ಸ್ಥಾಪಿಸಲು ಸಂಸ್ಥೆ ತೆರೆಯಲು 15 ಕೊಟಿ ಮಂಜೂರು.
* ವಿದ್ಯಾನಿಧಿ ಯೋಜನೆ ಭೂ ರಹಿತ ಕಾರ್ಮಿಕರ ಮಕ್ಕಳಿಗೆ ವಿಸ್ತರಣೆ
* ಕೆಪಿಎಸ್ಸಿಯಲ್ಲಿ ಡಿ ಗ್ರುಪ್ ನೌಕರರಿಗೆ ವೈವಾ (ಸಂದರ್ಶನ) ಇಲ್ಲ.
* ಕಪ್ಪತ್ತಗುಡ್ಡ, ಶರಾವತಿ, ಭೀಮಗಢ, ಸಿಂಗಳಿಕ ವನ್ಯಜೀವಿಧಾಮ ಘೋಷಣೆ. ಒಂದು ಕಿ.ಮೀ. ವ್ಯಾಪ್ತಿಯನ್ನು ಮಾತ್ರ ಬಫರ್ ಝೋನ್ ಎಂದು ಪರಿಗಣಿಸಲು ನಿರ್ಧಾರ.
* ಪೊಲೀಸ್ ಇಲಾಖೆಯಲ್ಲಿ ವಾಹನ ಖರಿದಿಗೆ 19 ಕೋಟಿ ನೀಡಲಾಗಿದೆ.
* ಸಮಗ್ರ ಮಕ್ಕಳ ಅಭಿವೃದ್ಧಿ ಯೋಜನೆ ಅಡಿಯಲ್ಲಿ ರಾಜ್ಯ ಸರ್ಕಾರದಿಂದಲೇ ರಾಜ್ಯಾದ್ಯಂತ 4244 ಅಂಗನವಾಡಿ ಆರಂಭಿಸಲು ತೀರ್ಮಾನ.
* ಸ್ವಾತಂತ್ರ್ಯೋ ತ್ಸವದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ 84 ಜನ ಖೈದಿಗಳ ಬಿಡುಗಡೆ ಮಾಡಲು ಕೇಂದ್ರಕ್ಕೆ ಅನುಮತಿ ಕೊರಿಲಾಗಿತ್ತು. ಮೂವರಿಗೆ ಅನುಮತಿಗೆ ಇರಲಿಲ್ಲ. ಈಗ ಅವರಿಗೂ ಬಿಡುಗಡೆ ಮಾಡಲು ಅನುಮತಿ ದೊರೆತಿದೆ.
* ಸೈನಿಕರ ಕುಟುಂಬದವರಿಗೆ ಅನುಕಂಪದ ಆಧಾರದಲ್ಲಿ ನೌಕರಿ ಕೊಡಲು ತೀರ್ಮಾನ. ರಾಜ್ಯದಲ್ಲಿ ಮೃತ ಸೈನಿಕರ 400 ಕುಟುಂಬಗಳಿವೆ. ಅವುಗಳಲ್ಲಿ 200 ಕುಟುಂಬಗಳು ಉದ್ಯೋಗ ಪಡೆಯಲು ಅರ್ಹರಿದ್ದಾರೆ.