ಬೆಳ್ಳೆ-ಕಟ್ಟಿಂಗೇರಿ ಕಾಡಿಗೆ ಬೆಂಕಿ; 6 ಎಕ್ರೆ ಅರಣ್ಯ ನಾಶ
Team Udayavani, Mar 1, 2023, 3:01 PM IST
ಶಿರ್ವ: ಬೆಳ್ಳೆ ಗ್ರಾ.ಪಂ. ವ್ಯಾಪ್ತಿಯ ಕಟ್ಟಿಂಗೇರಿ ನಾಲ್ಕು ಬೀದಿ ಬಳಿ ಮಂಗಳವಾರ ಕಾಡಿಗೆ ಬೆಂಕಿ ಬಿದ್ದು ಸುಮಾರು 5-6 ಎಕ್ರೆ ಅರಣ್ಯ ಪ್ರದೇಶ ಬೆಂಕಿಗಾಹುತಿಯಾಗಿದೆ.
ಅರಣ್ಯ ಪ್ರದೇಶದ ಮರ ಗಿಡಗಂಟಿಗಳು ಸುಟ್ಟು ಕರಕಲಾಗಿ ಹೋಗಿದ್ದು, ಹಗಲು ವೇಳೆ ಪರಿಸರದ ಗ್ರಾಮಸ್ಥರು ಮತ್ತು ನಿಸರ್ಗ ಯುವಕ ಮಂಡಲದ ಸದಸ್ಯರು ಬೆಂಕಿಯನ್ನು ನಂದಿಸಿದ್ದರು. ರಾತ್ರಿ ವೇಳೆ ಪುನಃ ಹತ್ತಿಕೊಂಡ ಬೆಂಕಿ ಎಲ್ಲೆಡೆ ವ್ಯಾಪಿಸಿದ್ದು,ಉಡುಪಿ ಅಗ್ನಿ ಶಾಮಕದಳದ ಸಿಬಂದಿ ಮತ್ತು ನಿಸರ್ಗ ಯುವಕ ಮಂಡಲದ ಅಧ್ಯಕ್ಷ ಸುಕುಮಾರ ಪೂಜಾರಿ ನೇತೃತ್ವದಲ್ಲಿ ಬೆಂಕಿ ನಂದಿಸಲಾಯಿತು.
ಬೆಳ್ಳೆ ಗ್ರಾ.ಪಂ. ಅಧ್ಯಕ್ಷ ಸುಧಾಕರ ಪೂಜಾರಿ,ಸದಸ್ಯ ಬೆಳ್ಳೆ ಗುರುರಾಜ ಭಟ್,ನ್ಯಾಯವಾದಿ ಸಂತೋಷ್ ಕುಮಾರ್ ಮೂಡುಬೆಳ್ಳೆ ,ನಿಸರ್ಗ ಯುವಕ ಮಂಡಲದ ಸದಸ್ಯರು, ಸ್ಥಳೀಯ ಗ್ರಾಮಸ್ಥರು ಬೆಂಕಿ ನಂದಿಸುವಲ್ಲಿ ಸಹಕರಿಸಿದ್ದರು.