Myanmar: ಸಂಧಾನ ನೆಪದಲ್ಲಿ ಮ್ಯಾನ್ಮಾರ್ ಮೇಲೆ ಚೀನ ಬಿಗಿ ಹಿಡಿತ
ಮ್ಯಾನ್ಮಾರ್ ಸೇನೆ- ಗೆರಿಲ್ಲಾಗಳ ನಡುವೆ ಕದನ ವಿರಾಮ
Team Udayavani, Jan 13, 2024, 12:44 AM IST
ಬೀಜಿಂಗ್: ಭಾರತಕ್ಕೆ ಹೊಂದಿಕೊಂಡು ಇರುವ ಮ್ಯಾನ್ಮಾರ್ನ ಗಡಿ ಪ್ರದೇಶ ದಲ್ಲಿ ಮಿಲಿಟರಿ ಮತ್ತು ಬಂಡುಕೋರರ ನಡುವಿನ ಸಂಘರ್ಷಕ್ಕೆ ತೆರೆ ಬಿದ್ದಿದೆ. ದಕ್ಷಿಣ ಏಷ್ಯಾದಲ್ಲಿ ಕಬಂಧ ಬಾಹು ವಿಸ್ತರಿ ಸಿಕೊಳ್ಳುತ್ತಿರುವ ಚೀನ ನೇತೃತ್ವದಲ್ಲಿ ನಡೆದ ಸಂಧಾನ ಮಾತುಕತೆಯಲ್ಲಿ ಬಂಡುಕೋರರು ಮತ್ತು ಮಿಲಿಟರಿ ಅಧಿಕಾರಿಗಳ ನಡುವೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.
ಸರಿ ಸುಮಾರು 2 ತಿಂಗಳಿಂದ ನಡೆಯುತ್ತಿದ್ದ ಸಂಘರ್ಷದಲ್ಲಿ 200ಕ್ಕೂ ಅಧಿಕ ಸೈನಿಕರು, ಸ್ಥಳೀಯ ನಾಗರಿಕರು ಮಿಜೋರಾಮ್ಗೆ ಬಂದಿದ್ದಾರೆ. ಈ ನಡುವೆಯೇ ಅಲ್ಲಿ ಸಂಧಾನ ಪ್ರಕ್ರಿಯೆ ನಡೆದಿದು ಮಹತ್ವದ ಬೆಳವಣಿಗೆಯೇ ಆಗಿದೆ. ಆದರೆ, ಈ ಸಂಧಾನ ಮಾತುಕತೆ ಮ್ಯಾನ್ಮಾರ್ನ ಇತರ ಪ್ರದೇಶಗಳಲ್ಲಿನ ಹೋರಾಟಕ್ಕೆ ಅನ್ವಯವಾಗುವುದಿಲ್ಲ ಎಂದು ಹೇಳಲಾಗುತ್ತಿದೆ.
ಸಂಘರ್ಷದಲ್ಲಿ ತೊಡಗಿದ್ದ ಎರಡೂ ಗುಂಪುಗಳ ನಡುವೆ ಡಿಸೆಂಬರ್ನಲ್ಲಿ ಚೀನ ನೇತೃತ್ವದಲ್ಲಿ ಮಾತುಕತೆ ನಡೆದಿ ದ್ದರೂ ವಿಫಲವಾಗಿತ್ತು. ತನ್ನ ಗಡಿ ಪ್ರದೇಶ ದಲ್ಲಿನ ಸಮಸ್ಯೆ ಉಂಟಾಗಬಾರದು ಎಂದು ಶಾಂತಿ ಸ್ಥಾಪನೆಗೆ ಮಧ್ಯಸ್ಥಿಕೆ ವಹಿಸಿರುವ ಬಗ್ಗೆ ಚೀನ ಹೇಳಿಕೊಂಡರೂ ಪರೋಕ್ಷವಾಗಿ ಅದರ ಗುರಿ ಭಾರತ ಎಂಬ ವಿಶ್ಲೇಷಣೆ ನಡೆದಿದೆ.
ಚುನಾವಣೆಯಲ್ಲಿ ಗೆದ್ದು ಅಧಿಕಾರ ಹಿಡಿದಿದ್ದ ಹೋರಾಟಗಾರ್ತಿ ಆಂಗ್ ಸಾನ್ ಸೂಕಿ ಸರಕಾರವನ್ನು, 2021ರಲ್ಲಿ ಮಾಯೆನ್ಮಾರ್ ಸೇನೆ ಉರುಳಿಸಿತ್ತು. ಆಗಿನಿಂದ ಮೂರು ಗೆರಿಲ್ಲಾ ಗುಂಪುಗಳು ಸೇನೆ ವಿರುದ್ಧ ದಾಳಿ ಮಾಡುತ್ತಿವೆ.