Christmas: ಬಿಷಪ್ ಸಂದೇಶ- ಆರ್ತರಿಗೆ ನೆರವಾಗೋಣ
Team Udayavani, Dec 22, 2023, 12:12 AM IST
ಕಡಬ: ಪರರಿಗೆ ನಮ್ಮ ಸಮಾಜ, ದೇವಾಲಯಗಳು, ಮನೆಗಳು ಹಾಗೂ ನಮ್ಮ ನಮ್ಮ ಹೃದಯದಲ್ಲೇ ದೇವರ ಸಾನ್ನಿಧ್ಯವಿದೆ. ಆದರೆ ಅದನ್ನು ಗುರುತಿಸಲು ನಮ್ಮೊಳಗಿನ ಅಹಂಕಾರ, ಸ್ವಾರ್ಥ ಆಡ್ಡಿಯಾಗಿದೆ. ನಾವು ತಲೆಬಾಗಿ ನಮ್ಮೊಳಗೆ ನೋಡೋಣ, ಬಾಹ್ಯದಿಂದ ಆಂತರ್ಯದ ಕಡೆಗೆ ಸಾಗೋಣ. ಈ ಕ್ರಿಸ್ತ ಜಯಂತಿಯ ಸಂದರ್ಭದಲ್ಲಿ ನಮ್ಮ ಸ್ವಾರ್ಥವನ್ನು ಬದಿಗಿಟ್ಟು ಪರರಿಗಾಗಿ ತನ್ನನ್ನು ತಾನೇ ಬರಿದು ಮಾಡಿಕೊಳ್ಳುವ ರೀತಿಯಲ್ಲಿ ಇತರರ ಬದುಕಿಗೆ ನಮ್ಮ ಕೈಲಾದ ನೆರವು ನೀಡೋಣ.
ಯೇಸು ಕಂದ ನಮ್ಮೆಲ್ಲರ ಹೃದಯವೆಂಬ ಗೋದಲಿಯಲ್ಲಿ ಹುಟ್ಟಿದಾಗ ಮಾತ್ರ ನಾವು ಆಚರಿಸುವ ಕ್ರಿಸ್ತ ಜಯಂತಿ ಹಬ್ಬವು ಸಾರ್ಥಕವಾಗುವುದು. ಎಲ್ಲ ರೀತಿಯ ಅಭದ್ರತೆಗಳಿಂದ, ಕಷ್ಟ-ಕಾರ್ಪಣ್ಯಗಳಿಂದ ನಮ್ಮ ಜೀವನವು ಬಿಡುಗಡೆ ಹೊಂದಲಿ. ನಾವು ಪ್ರತಿಯೊಬ್ಬರೂ ಶಾಂತಿಯ ದೂತರಾಗಿ ಏಸುವಿನ ಅನ್ವೇಷಣೆಗೆ ತೊಡಗೋಣ. ವಿಶ್ವ ಶಾಂತಿಯ ಸಾಧಕರಾಗೋಣ. ಮನುಷ್ಯತ್ವ ಹಾಗೂ ಮಾನವೀಯತೆ ಮರೀಚಿಕೆಯಾಗುವಂತಹ ಪ್ರಸ್ತುತ ಸಮಾಜದಲ್ಲಿ ದೇವರೂ, ಸಂಪೂರ್ಣ ಮಾನವರೂ ಆದ ಯೇಸು ಕ್ರಿಸ್ತರ ಜಯಂತಿ ಮಾನವ ಕುಲದ ಭಾವೈಕ್ಯ ಹಾಗೂ ನೈತಿಕತೆಯನ್ನು ಜ್ಞಾಪಿಸುವಂತಾಗಲಿ. ಪ್ರಭು ಯೇಸು ನಮ್ಮ ಜೀವನದ ಅಮೂಲ್ಯ ನಿಧಿಯಾಗಿ ಬದುಕಿಗೆ ಅರ್ಥ, ಮೌಲ್ಯ ಹಾಗೂ ಸುರಕ್ಷೆಯನ್ನು ಒದಗಿಸಿ ಶಾಂತಿಯನ್ನು ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ.
– ರೈ| ರೆ| ಡಾ| ಗೀವರ್ಗೀಸ್ ಮಾರ್ ಮಕಾರಿಯೋಸ್, ಧರ್ಮಾಧ್ಯಕ್ಷರು, ಪುತ್ತೂರು ಧರ್ಮಪ್ರಾಂತ