ಚುನಾವಣೆಗೆ 2ವರ್ಷ ಇರುವಾಗಲೇ ಸಿಎಂ ಸ್ಥಾನಕ್ಕೆ ಕಾಂಗ್ರೇಸ್ ನಲ್ಲಿ ಕುಸ್ತಿ : ಕಾರಜೋಳ ವ್ಯಂಗ್ಯ
Team Udayavani, Jun 22, 2021, 7:00 PM IST
ಧಾರವಾಡ : ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ ಇನ್ನೂ 2 ವರ್ಷ ಸಮಯವಿದ್ದು, ಆದರೆ ಕಾಂಗ್ರೆಸ್ ಪಕ್ಷದಲ್ಲಿ ಈಗಾಗಲೇ ಸಿಎಂ ಸ್ಥಾನಕ್ಕೆ ಕುಸ್ತಿ ಆರಂಭಗೊಂಡಿದೆ ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆಯಲ್ಲಿ ಗೆಲುವು ಸಾಽಸಿ ಬಹುಮತ ಪಡೆದ ಪಕ್ಷದ ಅಭ್ಯರ್ಥಿ ಮುಖ್ಯಮಂತ್ರಿ ಆಗುತ್ತಾರೆ. ಆದರೆ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ ಮಧ್ಯೆಯೇ ಈಗ ಸಿಎಂ ಸ್ಥಾನಕ್ಕೆ ಕುಸ್ತಿ ಶುರುವಾಗಿದೆ. ಕಾಂಗ್ರೆಸ್ನ ಜಿ.ಪರಮೇಶ್ವರ ಕಷ್ಟದ ದಿನಗಳಲ್ಲಿ ಅಧ್ಯಕ್ಷರಾಗಿದ್ದರು. ಅವರು ಮುಖ್ಯಮಂತ್ರಿ ಆಗಬೇಕು ಎನ್ನುವಾಗ ಸೋಲಿಸಿದ್ದರು. ಇದೀಗ ಮತ್ತೆ ಸಿಎಂ ಆಗುವ ಚಿಂತನೆ ನಡೆಸಿದ್ದಾರೆ. ಆದರೆ ಮಧ್ಯದಲ್ಲಿ ಇವರಿಬ್ಬರು ಇಣುಕುತ್ತಿದ್ದಾರೆ ಎಂದರು.
ಮಾಜಿ ಸಚಿವ ರಮೇಶ ಜಾರಕಿಹೊಳಿ ರಾಜೀನಾಮೆ ಬಗ್ಗೆ ಎಲ್ಲೂ ಹೇಳಿಲ್ಲ. ಇದು ಕೇವಲ ಮಾಧ್ಯಮಗಳ ಸೃಷ್ಟಿ. ಮಹಾರಾಷ್ಟ್ರ ಮಾಜಿ ಸಿಎಂಗೆ ಮೊದಲಿನಿಂದಲೂ ಪರಿಚಯ ಇದ್ದ ಕಾರಣಕ್ಕೆ ಆಗಾಗ ಭೇಟಿಯಾಗುತ್ತಾರೆ. ಬೆಳಗಾವಿಯವರಿಗೆ ಮಹಾರಾಷ್ಟ್ರ ಸಂಪರ್ಕ ಜಾಸ್ತಿ. ಹೀಗಾಗಿ ಬೆಳಗಾವಿ ರಾಜಕೀಯ ನಾಯಕರು ಮಹಾರಾಷ್ಟ್ರದ ನಾಯಕರನ್ನು ಭೇಟಿಯಾಗುತ್ತಾರೆ. ಅದೇ ರೀತಿ ಪಡ್ನವೀಸ್ ಅವರನ್ನು ಜಾರಕಿಹೊಳಿ ಭೇಟಿ ಮಾಡಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಸ್ಪಷ್ಟಪಡಿಸಿದರು.
ಕೊರೊನಾ ಮೂರನೇ ಅಲೆ ಕುರಿತಂತೆ ತಜ್ಞರು ಸಿಎಂಗೆ ಮಂಗಳವಾರ ವರದಿ ಸಲ್ಲಿಸಲಿದ್ದಾರೆ ಎಂಬ ಮಾಹಿತಿ ಇತ್ತು. ಹೀಗಾಗಿ ವರದಿ ಸಲ್ಲಿಸಿರಬಹುದು. ಮೂರನೇ ಅಲೆ ಮಕ್ಕಳ ಮೇಲೆ ಪ್ರಭಾವ ಬೀರುತ್ತದೆ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಕಾರಣಗಳಿಲ್ಲ ಎಂದರು.
ಇದನ್ನೂ ಓದಿ :ದೊಡ್ಡ ಕುಟುಂಬದಲ್ಲಿ ಅಸಮಾಧಾನ ಸಾಮಾನ್ಯ: ಸಚಿವ ನಿರಾಣಿ
ನಮ್ಮ ಪಕ್ಷದಲ್ಲಿ ಪೂರ್ಣಾವಽಗೆ ಬಿ.ಎಸ್. ಯಡಿಯೂರಪ್ಪ ಅವರೇ ಮುಖ್ಯಮಂತ್ರಿ. ಬಿಜೆಪಿಯವರು ಸ್ವಂತ ಕೆಲಸಕ್ಕೆ ದೆಹಲಿಗೆ ತೆರಳುತ್ತಾರೆ. ಇದಕ್ಕೆ ಬೇರೆ ಅರ್ಥ ಕಲ್ಪಿಸಬೇಕಿಲ್ಲ.
-ಗೋವಿಂದ ಕಾರಜೋಳ, ಡಿಸಿಎಂ
ರಾಜ್ಯದಲ್ಲಿ 45 ವರ್ಷ ಮೇಲ್ಪಟ್ಟವರಿಗೆ ಈಗಾಗಲೇ ಲಸಿಕೆ ನೀಡಲಾಗಿದೆ. ಲಸಿಕೆ ಹಾಕಿಸಿಕೊಳ್ಳದೇ ಇದ್ದವರಿಗೂ ಲಸಿಕೆ ಪಡೆಯುವಂತೆ ಹೇಳಲಾಗುತ್ತಿದ್ದು, ಮಕ್ಕಳಿಗೆ ಇನ್ನೂ ಲಸಿಕೆ ನೀಡಿಲ್ಲ. ಹೀಗಾಗಿ ಮೂರನೇ ಅಲೆ ಮಕ್ಕಳ ಮೇಲೆ ಪ್ರಭಾವ ಬೀರಬಹುದು ಎಂಬುದು ತಜ್ಞರ ಅಭಿಪ್ರಾಯ. ಆದರೆ, ಅದಕ್ಕೆ ಯಾವುದೇ ವೈಜ್ಞಾನಿಕ ಕಾರಣ ಇಲ್ಲ ಎಂದು ಡಿಸಿಎಂ ಗೋವಿಂದ ಕಾರಜೋಳ ಸ್ಪಷ್ಟಪಡಿಸಿದ್ದಾರೆ.