ಸಾಲಿಗ್ರಾಮ: ಮೃತಪಟ್ಟು ಐದು ದಿನದ ಅನಂತರ ಪಾಸಿಟಿವ್ ರಿಪೋಟ್
Team Udayavani, Aug 25, 2020, 5:06 PM IST
ಕೋಟ: ಗೃಹಿಣಿಯೋರ್ವರು ಮೃತಪಟ್ಟು ಐದು ದಿನಗಳ ಬಳಿಕ ಆಕೆಗೆ ಕೋವಿಡ್ ಪಾಸಿಟಿವ್ ಎನ್ನುವ ರಿಪೋರ್ಟ್ ಬಂದಿದ್ದು ಮನೆಯನ್ನು ಕಂಟೊನ್ಮೆಂಟ್ ಝೋನ್ಗೊಳಿಸಲು ಬಂದ ಅಧಿಕಾರಿಗಳ ವಿರುದ್ಧ ಕುಟುಂಬಿಕರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಸಾಲಿಗ್ರಾಮದ ಕಾರ್ಕಡದಲ್ಲಿ ಆ.24ರಂದು ಸಂಭವಿಸಿದೆ.
ಇಲ್ಲಿನ ನಿವಾಸಿಯೋರ್ವರು ಅನಾರೋಗ್ಯದಿಂದ ಕುಂದಾಪುರ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದು ಅನಂತರ ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆ. 19ರಂದು ಆಕೆ ಮೃತಪಟ್ಟಿದ್ದು ಸಾವಿಗೆ ಬಹು ಅಂಗಾಗ ವೈಫಲ್ಯ ಕಾರಣ ಎನ್ನಲಾಗಿತ್ತು. ಅನಂತರ ಉಡುಪಿ ಸರಕಾರಿ ಆಸ್ಪತ್ರೆಯ ಮೂಲಕ ಶವವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿತ್ತು. ಈ ಸಂದರ್ಭ ಕೋವಿಡ್ ಸೋಂಕಿನ ಲಕ್ಷಣವಿಲ್ಲ ಎಂದು ತಿಳಿಸಲಾಗಿತ್ತು. ಇದೀಗ ಐದು ದಿನಗಳ ಅನಂತರ ಆಕೆಯಲ್ಲಿ ಕೋವಿಡ್ ಸೋಂಕಿದೆ ಎನ್ನುವುದು ವರದಿ ನೀಡಲಾಗಿದೆ. ಹೀಗಾಗಿ ಶವದ ಅಂತಿಮ ಸಂಸ್ಕಾರದಲ್ಲಿ ಭಾಗವಹಿಸಿದವರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಕಂಟೊನ್ಮೆಂಟ್ ಝೋನ್ಗೊಳಿಸಲು ಬಂದ ಅಧಿಕಾರಿಗಳನ್ನು ಕುಟುಂಬಿಕರು ತರಾಟೆಗೆ ತೆಗೆದುಕೊಂಡರು ಹಾಗೂ ಅಧಿಕಾರಿಗಳ ಯಡವಟ್ಟಿನ ಕುರಿತು ಅಸಮಾಧಾನ ವ್ಯಕ್ತಪಡಿಸಿದರು. ಸುಮಾರು 4ತಾಸುಗಳ ಕಾಲ ವಾದ-ವಿವಾದ ನಡೆದು ಅನಂತರ ಕೋಟ ಪೊಲೀಸ್ ಉಪನಿರೀಕ್ಷಕ ಸಂತೋಷ್ ಹಾಗೂ ಸ್ಥಳೀಯ ಪ.ಪಂ. ಸದಸ್ಯ ರಾಜು ಪೂಜಾರಿ, ಸಂಜೀವ ದೇವಾಡಿಗ ಮುಂತಾದವರ ಮಧ್ಯಸ್ಥಿಕೆಯಲ್ಲಿ ಪ್ರಕ್ರಿಯೆ ನಡೆಸಲಾಯಿತು.