ನೇಣು ಬಿಗಿದುಕೊಂಡು ಆತ್ಮಹತ್ಯೆ; ಕೊಲೆ-ದೂರು
Team Udayavani, May 3, 2022, 4:49 AM IST
ಬಂಟ್ವಾಳ: ಬಂಟ್ವಾಳದ ಕಾಯರ್ಮಾರ್ನಲ್ಲಿ ವ್ಯಕ್ತಿಯೊಬ್ಬರು ಮನೆಯ ಸಮೀಪದ ದನದ ಕೊಟ್ಟಿಗೆಯ ಪಕ್ಕಾಸಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದ್ದು, ಆದರೆ ಮೃತರ ಸಂಬಂಧಿಯೊಬ್ಬರು ಸೋಮವಾರ ಅದು ಆತ್ಮಹತ್ಯೆಯಲ್ಲ, ಕೊಲೆ ಎಂದು ದೂರು ನೀಡಿದ್ದಾರೆ.
ಕಾಯರ್ಮಾರ್ ನಿವಾಸಿ ಉಮೇಶ್ ಪೂಜಾರಿ (55) ಮೃತಪಟ್ಟ ವ್ಯಕ್ತಿ. ಕೃಷಿಕನಾಗಿರುವ ಉಮೇಶ್ ಅವರು ಕುಡಿತದ ಚಟ ಹೊಂದಿದ್ದು, ಕುಡಿದು ಬಂದು ಪತ್ನಿ, ಮಕ್ಕಳ ಜತೆ ಜಗಳವಾಡುತ್ತಿದ್ದರು. ರವಿವಾರ ರಾತ್ರಿ ಮನೆಯಲ್ಲಿ ಊಟದ ಕಾರಣಕ್ಕೆ ಜಗಳ ನಡೆದಿದ್ದು, ಇದರಿಂದ ಕೋಪಗೊಂಡು ಮನೆಯಿಂದ ಹೊರ ನಡೆದಿದ್ದರು. ಬಳಿಕ ಹುಡುಕಾಡಿದಾಗ ಮನೆಯ ಪಕ್ಕದ ದನದ ಕೊಟ್ಟಿಗೆಯ ಪಕ್ಕಾಸಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ತತ್ಕ್ಷಣ ಪತ್ನಿ ಹಾಗೂ ಮಕ್ಕಳು ತುಂಬೆ ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಉಮೇಶ್ ಅವರು ಅದಾಗಲೇ ಮೃತಪಟ್ಟಿದ್ದರು ಎಂದು ಮನೆಯವರು ಠಾಣೆಗೆ ನೀಡಿದ ಮಾಹಿತಿಯ ಆಧಾರದಲ್ಲಿ ಪ್ರಕರಣ ದಾಖಲಾಗಿದೆ.
ಆದರೆ ಘಟನೆಯ ಕುರಿತು ಮೃತರ ತಮ್ಮ ಆನಂದ ಪೂಜಾರಿ ಅವರು ಠಾಣೆಗೆ ದೂರು ನೀಡಿದ್ದು, ಅದು ಆತ್ಮಹತ್ಯೆಯಲ್ಲ, ಕೊಲೆಯಾಗಿದೆ. ಹೀಗಾಗಿ ಪ್ರಕರಣವನ್ನು ಸೂಕ್ತ ರೀತಿಯಲ್ಲಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ. ಘಟನ ಸ್ಥಳಕ್ಕೆ ನಗರ ಠಾಣಾ ಪಿಎಸ್ಐ ಅವಿನಾಶ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.