ಕುಂಬಳಕಾಯಿ ಒಡೆದ “ದಾರಿ ಯಾವುದಯ್ಯಾ ವೈಕುಂಠಕ್ಕೆ’
Team Udayavani, Jul 7, 2020, 8:16 AM IST
ಶ್ರೀ ಬಸವೇಶ್ವರ ಕ್ರಿಯೇಷನ್ಸ್ ಲಾಂಛನದಲ್ಲಿ ಶರಣಪ್ಪ ಎಂ ಕೊಟಗಿ ಅವರು ನಿರ್ಮಿಸಿರುವ “ದಾರಿ ಯಾವುದಯ್ಯಾ ವೈಕುಂಠಕ್ಕೆ’ ಚಿತ್ರದ ಚಿತ್ರೀಕರಣ ಪೂರ್ಣವಾಗಿದೆ. ಹೌದು! ಲಾಕ್ಡೌನ್ ತೆರವಿನ ನಂತರ ಚಿತ್ರೀಕರಣ ಆರಂಭಿಸಲು ಸರ್ಕಾರ ಅನುಮತಿ ನೀಡುತ್ತಿದ್ದಂತೆ, ಚಿತ್ರತಂಡ ಬಾಕಿ ಉಳಿದಿದ್ದ ಕೊನೆಯ ಹಂತದ ಚಿತ್ರೀಕರಣದ ಕೆಲಸವನ್ನು ಪೂರ್ಣಗೊಳಿಸಿ ಕುಂಬಳಕಾಯಿ ಒಡೆದಿದೆ. ಅಲ್ಲದೇ ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಸದ್ಯದಲ್ಲೇ ಚಿತ್ರೀಕರಣ ನಂತರದ ಚಟುವಟಿಕೆ ಶುರುವಾಗಲಿದೆ.
ಈ ಹಿಂದೆ “ಕೃಷ್ಣ ಗಾರ್ಮೆಂಟ್ಸ್’ ಚಿತ್ರ ನಿರ್ದೇಶಿಸಿದ್ದ ಸಿದ್ದು ಪೂರ್ಣಚಂದ್ರ ಈ ಚಿತ್ರದ ನಿರ್ದೇಶಕರು. ವರ್ಧನ್ ತೀರ್ಥಹಳ್ಳಿ ನಾಯಕರಾಗಿ ನಟಿಸಿರುವ ಈ ಚಿತ್ರದ ನಾಯಕಿ ಅನುಷ. “ಡಿಂಗ’ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದ ಅನುಷ ಅವರು ಶ್ರೀಮಾನ್ ಶ್ರೀಮತಿ ಹಾಗೂ ಅವಳು ಸುಜಾತ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಅಂದಹಾಗೆ “ಇದೊಂದು ಹೊಸ ಜಾನರ್ ಹೊಂದಿರುವ ಕಥೆ. ಇಲ್ಲಿ ಕಥೆಯೇ ನಾಯಕ, ನಾಯಕಿ. ಕಥೆಯ ಒನ್ಲೈನ್ ಹೇಳುವುದಾದರೆ, ಕ್ರಿಮಿನಲ್ ಒಬ್ಬನ ಎಮೋಷನಲ್ ಕಂಟೆಂಟ್ ಹೊಂದಿರುವ ಚಿತ್ರಣ ಇರಲಿದೆ. ತನ್ನ ಮನಸ್ಸಲ್ಲಿರುವುದನ್ನೆಲ್ಲಾ ಆಚೆ ಬಿಟ್ಟರೆ, ಏನೆಲ್ಲಾ ಪರಿಣಾಮ ಬೀರುತ್ತೆ ಎನ್ನುವುದರ ಅಂಶಗಳನ್ನು ಇಲ್ಲಿ ಹೇಳಲಾಗಿದೆ.
ಭಾವನಾತ್ಮಕ ಸನ್ನಿವೇಶಗಳು ಚಿತ್ರದ ಜೀವಾಳ ಎನ್ನುತ್ತಾರೆ ಚಿತ್ರದ ನಾಯಕ ವರ್ಧನ್, ಇದು ಆ್ಯಕ್ಷನ್,ಲವ್, ಹಾರರ್, ಕಾಮಿಡಿ, ಥ್ರಿಲ್ಲರ್ ಇವೆಲ್ಲದರಿಂದ ಹೊರತಾಗಿರುವ ಕ್ರಿಮಿನಲ್ ಒಬ್ಬನ ಕುರಿತಾದ ಭಾವುಕ ಪಯಣ ಹೊಂದಿದ್ದು, “ತಿಥಿ’ ಖ್ಯಾತಿಯ ಪೂಜಾ ಪ್ರಮುಖ ಆಕರ್ಷಣೆ. ಉಳಿದಂತೆ ಬಲ ರಾಜವಾಡಿ, ಶೀಬಾ, ಡಿ.ವಿ.ನಾಗರಾಜ್, ಸುಚಿತ್, ಅರುಣ್ ಮೂರ್ತಿ, ಸಂಗೀತ, ಗೌಡಿ, ಸಿದ್ಧಾರ್ಥ್, ಪ್ರಣಯ್ ಮೂರ್ತಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಭಗತ್ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ನಿತಿನ್ ಛಾಯಾಗ್ರಹಣ ಹಾಗೂ ಮುತ್ತುರಾಜ್ ಸಂಕಲನವಿದೆ.