ಸಮವಸ್ತ್ರ ನೀತಿ ಧಿಕ್ಕರಿಸುವುದು ಸರಿಯಲ್ಲ: ಸಚಿವ ಸಿ.ಸಿ.ಪಾಟೀಲ್
Team Udayavani, Feb 10, 2022, 10:30 PM IST
ಚಿತ್ರದುರ್ಗ: ಹಿಜಾಬ್-ಕೇಸರಿ ಶಾಲು ಗಲಾಟೆಗೆ ಕಾರಣ ಯಾರೆಂದು ಎಲ್ಲರಿಗೂ ಗೊತ್ತಿದೆ. ಎಲ್ಲವನ್ನೂ ಬಿಟ್ಟು ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಕಡೆ ಗಮನ ನೀಡಬೇಕು ಎಂದು ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್ ಹೇಳಿದರು.
ಸುದ್ದಿಗಾರರ ಜತೆ ಮಾತನಾಡಿದ ಅವರು, ಇಷ್ಟು ದಿನ ಇಲ್ಲದ ವ್ಯವಸ್ಥೆಗೆ ಪ್ರೇರಣೆ ಕೊಟ್ಟವರು ಯಾರು? ಉಳ್ಳವರು ಸೂಟು ಬೂಟು ಧರಿಸುತ್ತಾರೆ, ಬಡವ ಹರಕು ಬಟ್ಟೆ ಧರಿಸುತ್ತಾನೆ. ಶಾಲಾ-ಕಾಲೇಜಲ್ಲಿ ಸಮವಸ್ತ್ರ ಧರಿಸುವ ಉದ್ದೇಶ ಸಮಾನತೆ, ಭೇದ ಭಾವ ಬರಕೂಡದು ಎನ್ನುವುದಾಗಿದೆ. ಸಮವಸ್ತ್ರ ನೀತಿ ಧಿಕ್ಕರಿಸಿ ಹಿಜಾಬ್ ಧರಿಸುವುದು ಸರಿಯಲ್ಲ.
ವಿದ್ಯಾರ್ಥಿಗಳ ಹಿಂದಿರುವ ಶಕ್ತಿಗಳು ಹಾಗೂ ಬೆಂಬಲ ನೀಡುತ್ತಿರುವ ರಾಜಕಾರಣಿಗಳು ಯಾರು ಎಂಬುದು ಜನತೆಗೆ ಗೊತ್ತಿದೆ. ಈ ವಿವಾದ ನ್ಯಾಯಾಲಯದಲ್ಲಿದೆ, ವಿಮರ್ಶಿಸಲು ಹೋಗಲ್ಲ. ಕೋರ್ಟ್ ತೀರ್ಪಿಗೆ ಬದ್ಧರಾಗಿ ಮುಂದುವರಿಯೋಣ ಎಂದರು.
ಇದನ್ನೂ ಓದಿ:ಸ್ಯಾಮ್ಸಂಗ್ನ 3 ಫೋನ್ ಬಿಡುಗಡೆ; ಎಸ್22, ಎಸ್22+, ಎಸ್22 ಅಲ್ಟ್ರಾ
ಬಿಜೆಪಿ ಸರ್ಕಾರ ಟೀಕಿಸಲು ಕಾಂಗ್ರೆಸ್ಗೆ ಒಂದು ಕಾರಣ ಬೇಕು. ಅವರಲ್ಲೇ ಅನೇಕ ಹುಳುಕುಗಳಿದ್ದು, ಡಿಕೆಶಿ, ಹಿಂದುಳಿದ ನಾಯಕರ ನಡುವೆ ಭಿನ್ನಮತವಿದೆ. ಕಾಂಗ್ರೆಸ್ ಕಚೇರಿ ಬಳಿ ಕಸದ ಬುಟ್ಟಿಯಲ್ಲಿ ರಾಷ್ಟ್ರಧ್ವಜ ಹಾರಿಸಿದ್ದರು. ಅಂಥವರು ಇವತ್ತು ರಾಷ್ಟ್ರಧ್ವಜದ ಬಗ್ಗೆ ಮಾತಾಡುತ್ತಿದ್ದಾರೆ. ರಾಷ್ಟ್ರಧ್ವಜ ಹಿಡಿದು ಕಣ್ಣೀರು ಹಾಕುತ್ತಾರೆ ಎಂದರು.