ಶಿಕ್ಷಣ ಇಲಾಖೆ ಸಿಬ್ಬಂದಿ ಎಡವಟ್ಟು: ವಿಟ್ಲದ ವಿದ್ಯಾರ್ಥಿನಿಗೆ 83ರ ಬದಲು ನೀಡಿದ್ದು 13 ಅಂಕ!
Team Udayavani, Aug 24, 2020, 1:04 PM IST
ವಿಟ್ಲ: ವಿಟ್ಲ ಸಮೀಪದ ಕೋಡಪದವು ಶ್ರೀಧರ ಭಟ್ ಕುಕ್ಕೆಮನೆ ಅವರ ಪುತ್ರಿ ಚಾಂದಿನಿ ಅವರು ಪುತ್ತೂರು ವಿವೇಕಾನಂದ ಕಾಲೇಜಿನ ಪಿಯುಸಿ ವಿದ್ಯಾರ್ಥಿನಿಯಾಗಿದ್ದು, ಇತ್ತೀಚೆಗೆ ಫಲಿತಾಂಶ ಪ್ರಕಟವಾದಾಗ ಆಕೆಗೆ ಗರಬಡಿದಂತಾಗಿತ್ತು.
ಆಂಗ್ಲ ಭಾಷೆಯಲ್ಲಿ 13 ಅಂಕ ಬಂದು ಅನುತ್ತೀರ್ಣರಾಗಿದ್ದಾರೆಂದು ತಿಳಿಸಲಾಗಿತ್ತು. ಇದನ್ನು ಆಕೆಗೆ ನಂಬಲಾಗಲಿಲ್ಲ. ಬದಲಾಗಿ ಶಾಕ್ ಆಗಿತ್ತು. ಆಕೆ ಫೇಲ್ ಆಗುವ ವಿದ್ಯಾರ್ಥಿನಿಯಲ್ಲವೆಂದು ಮನೆಯವರಿಗೂ ಆಕೆಯ ವಿದ್ಯಾಸಂಸ್ಥೆಗೂ ಭರವಸೆ ಇತ್ತು. ಮನೆಯವರೆಲ್ಲರೂ ಸೇರಿ ಮರುಮೌಲ್ಯಮಾಪನಕ್ಕೆ ಅರ್ಜಿ ಹಾಕೋಣ ಎಂದು ಆಕೆಯನ್ನು ಸಂತೈಸಿದರು.
ಅದರಂತೆ ಆಕೆಯ ಹೆತ್ತವರು ಸ್ಕಾನಿಂಗ್ ಪ್ರತಿ ಪಡೆಯಲು 530 ರೂ. ಪಾವತಿಸಿ, ಉತ್ತರ ಪತ್ರಿಕೆಯನ್ನು ತರಿಸಿದರು. ಉತ್ತರ ಪತ್ರಿಕೆ ಬಂದು ತಲುಪುತ್ತಿದ್ದಂತೆ ತಪ್ಪಿದ್ದೆಲ್ಲಿ ಎಂಬುದು ಬಯಲಾಯಿತು. ಪ್ರಥಮ ಪುಟದಲ್ಲೇ ಆಕೆಗೆ ಅಂಕ 83 ಎಂದು ನಮೂದಿಸಲಾಗಿತ್ತು.
ಅಂಕ ದಾಖಲಿಸುವ ವೇಳೆ ಇಲಾಖೆಯ ಸಿಬಂದಿ ಮಾಡಿದ ಎಡವಟ್ಟು ಆತಂಕದ ವಾತಾವರಣವನ್ನು ಸೃಷ್ಟಿಸಿತ್ತು.