ರಸಗೊಬ್ಬರ-ಕ್ರಿಮಿನಾಶಕ ಕೊರತೆ ಆತಂಕ
Team Udayavani, Apr 8, 2020, 5:59 AM IST
ಹುಬ್ಬಳ್ಳಿ: ಲಾಕ್ಡೌನ್ ಒಂದೆಡೆ ಕೃಷಿ ಉತ್ಪನ್ನಗಳ ಮಾರಾಟಕ್ಕೆ ಕುತ್ತು ತಂದಿದ್ದರೆ ಇನ್ನೊಂದೆಡೆ ಮುಂಗಾರು ಹಂಗಾಮಿಗೆ ರಸಗೊಬ್ಬರ ಮತ್ತು ಕ್ರಿಮಿನಾಶಕದ ಕೊರತೆ ಎದುರಾಗುವ ಆತಂಕ ಎದುರಾಗಿದೆ.
ಸದ್ಯಕ್ಕೆ ರಸಗೊಬ್ಬರ ಕೊರತೆಯಿಲ್ಲ ಎಂದು ಹೇಳಲಾಗುತ್ತಿದ್ದರೂ ವಿದೇಶ ಗಳಿಂದ ಆಮದಾಗುವ ಪೊಟ್ಯಾಷ್ ಸಹಿತ ಅಗತ್ಯ ಕಚ್ಚಾಸಾಮಗ್ರಿಗಳು ದೇಶಕ್ಕೆ ತಲುಪುವುದು ವಿಳಂಬವಾಗಲಿದೆ. ಇನ್ನು ಸಕಾಲಕ್ಕೆ ರಸಗೊಬ್ಬರ ಮತ್ತು ಕ್ರಿಮಿನಾಶಕ ಲಭ್ಯತೆ ಸಾಧ್ಯವೇ? ಎಂಬ ಆತಂಕ ರೈತರದ್ದಾಗಿದೆ.
ರಸಗೊಬ್ಬರ ಬಳಕೆಯಲ್ಲಿ ಭಾರತ ವಿಶ್ವದಲ್ಲೇ 2ನೇ ಅತಿದೊಡ್ಡ ದೇಶವಾಗಿದ್ದರೆ, ಕ್ರಿಮಿನಾಶಕ ಉತ್ಪಾದನೆಯಲ್ಲಿ ವಿಶ್ವದ 6ನೇ ಅತಿದೊಡ್ಡ ಮತ್ತು ಏಷ್ಯಾದ 3ನೇ ಅತಿದೊಡ್ಡ ದೇಶವಾಗಿದೆ. ಸಾಮಾನ್ಯವಾಗಿ ರಾಜ್ಯದಲ್ಲಿ ಮುಂಗಾರು ಹಂಗಾಮಿಗೆ ಕೆಲವೆಡೆ ಮೇ ತಿಂಗಳಲ್ಲಿ ಬಿತ್ತನೆ ಆರಂಭವಾದರೆ, ಇನ್ನೂ ಕೆಲವೆಡೆ ಜೂನ್ನಲ್ಲಿ ಆರಂಭವಾಗುತ್ತದೆ.
ಕ್ರಿಮಿನಾಶಕದ್ದೂ ಅದೇ ಕಥೆ
ಇನ್ನು ಕ್ರಿಮಿನಾಶಕ ಉದ್ಯಮದ ಕಥೆ ಭಿನ್ನವಿಲ್ಲ. ಸಾಮಾನ್ಯವಾಗಿ ಕ್ರಿಮಿನಾಶಕ ಉತ್ಪಾದನ ಕಂಪೆನಿಗಳು ಫೆಬ್ರವರಿ-ಮಾರ್ಚ್ನಲ್ಲಿ ಕಚ್ಚಾ ಸಾಮಗ್ರಿ ಖರೀದಿಯೊಂದಿಗೆ ಉತ್ಪಾದನೆ ಆರಂಭಿಸಿ, ಮೇ- ಜೂನ್ ವೇಳೆಗೆ ಉತ್ಪನ್ನಗಳನ್ನು ಪೂರೈಸುತ್ತವೆ. ರಾಜ್ಯದಲ್ಲಿ ಒಟ್ಟು ಕ್ರಿಮಿನಾಶಕ ಬಳಕೆಯಲ್ಲಿ ಶೇ. 25 ಭತ್ತಕ್ಕೆ ಬಳಕೆಯಾದರೆ, ಶೇ. 15 ಎಣ್ಣೆಕಾಳು, ತರಕಾರಿಗೆ ಮತ್ತು ಶೇ. 10 ಮೆಣಸಿನಕಾಯಿಗೆ ಬಳಕೆಯಾಗುತ್ತದೆ. ರಾಜ್ಯದಲ್ಲಿ ವಾರ್ಷಿಕ ಅಂದಾಜು 1,300 ಕೋ.ರೂ. ಗಳಷ್ಟು ಕ್ರಿಮಿನಾಶಕ ವಹಿವಾಟು ನಡೆಯುತ್ತಿದೆ. ರಸಗೊಬ್ಬರ ಕೊರತೆಯಿಂದ ರಾಜ್ಯದಲ್ಲಿ ಈ ಹಿಂದೆ ಗೋಲಿಬಾರ್ನಂಥ ಘಟನೆಗಳೂ ನಡೆದಿವೆ. ಈ ಹಿನ್ನೆಲೆಯಲ್ಲಿ ಸರಕಾರ ಮುಂಜಾಗ್ರತೆ ವಹಿಸಬೇಕಾಗಿದೆ.
ಕೋವಿಡ್ 19 ತಂದಿಟ್ಟ ಸಂಕಷ್ಟ
ರಾಜ್ಯದಲ್ಲಿ ಕಳೆದೊಂದು ದಶಕದಿಂದ ಪ್ರತಿ ಹೆಕ್ಟೇರ್ಗೆ ಸರಾಸರಿ 150-160 ಕೆ.ಜಿ.ಗಿಂತ ಹೆಚ್ಚು ರಸಗೊಬ್ಬರ ಬಳಕೆ ಮಾಡಲಾಗುತ್ತಿದೆ. ಒಟ್ಟು ರಸಗೊಬ್ಬರ ಬಳಕೆಯಲ್ಲಿ ಭತ್ತ, ಗೋಧಿ, ಹತ್ತಿ, ಕಬ್ಬು, ಸಾಸಿವೆ ಬೆಳೆಗಳಿಗೆ 2/3ರಷ್ಟು ರಸಗೊಬ್ಬರ ಬಳಕೆಯಾದರೆ ಶೇ. 40 ನೀರಾವರಿ ಪ್ರದೇಶದಲ್ಲಿ ಶೇ. 60 ಬಳಕೆ ಆಗುತ್ತಿದೆ.