ನಾಡಿನೆಲ್ಲೆಡೆ ಜಾನಪದ ಉತ್ಸವ: ಸಿಎಂ ಬಸವರಾಜ ಬೊಮ್ಮಾಯಿ
Team Udayavani, Apr 11, 2022, 6:25 AM IST
ಬೆಂಗಳೂರು: ಈ ನಾಡಿನ ಶ್ರೀಮಂತ ಸಂಸ್ಕೃತಿಯ ಹಿನ್ನೆಲೆಯುಳ್ಳ ಜಾನಪದ ಉತ್ಸವವನ್ನು ನಾಡಿನಲ್ಲೆಡೆ ಹಮ್ಮಿಕೊಳ್ಳುವ ಆಲೋಚನೆ ಸರಕಾರದ ಮುಂದಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪದ್ಮನಾಭನಗರ ಕ್ಷೇತ್ರದ ವಾಜಪೇಯಿ ಆಟದ ಮೈದಾನದಲ್ಲಿ ರವಿವಾರ ಹಮ್ಮಿಕೊಂಡಿದ್ದ ಜಾನಪದ ಜಾತ್ರೆಯ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ನಾಡಿನ ಶ್ರೀಮಂತ ಜಾನಪದವನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಜಾನಪದ ಜಾತ್ರೆಗಳನ್ನು ಆಯೋಜಿಸಲಾಗುವುದು ಎಂದರು.
ಒಂದೊಂದು ಪ್ರದೇಶದಲ್ಲಿ ಒಂದೊಂದು ರೀತಿಯ ಜಾನಪದವನ್ನು ನಾವು ಕಾಣಬಹುದಾಗಿದೆ. ಚಾಮರಾಜನಗರ ಭಾಗದಲ್ಲಿ ಮಹಾದೇಶ್ವರನ ಜಾನಪದ ಶ್ರೀಮಂತಿಕೆ ಇದ್ದರೆ, ಉತ್ತರ ಕರ್ನಾಟಕದಲ್ಲಿ ಸಂತ ಶಿಶುನಾಳನ ಶರೀಫರ ಜನಪದ ಶ್ರೀಮಂತಿಕೆ ಇದೆ. ಹೀಗೆ ಹಲವಾರು ಪ್ರದೇಶಗಳ ಶ್ರೀಮಂತಿಕೆ ಒಗ್ಗೂಡಿಸಿ ನಾಡಿನ ಜಾನಪದ ಕೀರ್ತಿ ಬೆಳಗಿವೆ ಎಂದು ಹೇಳಿದರು.
ಶೇ. 47ರಷ್ಟು ಎಫ್ ಡಿಐ
ಆರ್ಥಿಕ ಕ್ಷೇತ್ರದಲ್ಲಿ ಕೂಡ ಅಭಿವೃದ್ಧಿ ಹೊಂದುತ್ತಿರುವ ನಗರವಾಗಿ ಬೆಂಗಳೂರು ಬೆಳೆಯುತ್ತಿದ್ದು ವಿಶ್ವದ ಗಮನ ಸಳೆಯುತ್ತಿದೆ. ಹೂಡಿಕೆದಾರರರು ಬಂಡಾಳ ಹೂಡಲು ಆಸಕ್ತಿ ತೋರಿದ್ದಾರೆ. ಶೇ. 47ರಷ್ಟು ಎಫ್ಡಿಐ ಕರ್ನಾಟಕ್ಕೆ ಬಂದಿದೆ ಎಂದು ಹೇಳಿದರು.
ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಸಚಿವ ಆರ್.ಅಶೋಕ್, ಸಂಸದ ತೇಜಸ್ವಿ ಸೂರ್ಯ ಸೇರಿದಂತೆ ಬಿಜೆಪಿಯ ಹಲವು ಶಾಸಕರು ಮತ್ತು ಮುಖಂಡರು ಭಾಗವಹಿಸಿದ್ದರು.
ಕನ್ನಡ ಭಾಷೆಗೆ “ಜಾನಪದ ಶಕ್ತಿ’
ಕನ್ನಡಕ್ಕೆ ಶಾಶ್ವತವಾದಂತಹ ಅಗ್ರ ಸ್ಥಾನವನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ. ಭಾರತದಲ್ಲಿ ಅತ್ಯಂತ ಪ್ರಾಚೀನವಾಗಿರುವ ಭಾಷೆ ಕನ್ನಡ ಭಾಷೆಯಾಗಿದೆ. ಹಲವಾರು ಯುಗಗಳು ಕಳೆದರೂ ಕೂಡ ಕನ್ನಡ ಭಾಷೆ ಶ್ರೀಮಂತವಾಗಿ, ಗಟ್ಟಿಯಾಗಿ ಎದ್ದು ನಿಂತಿದೆ. ಈ ಬಗ್ಗೆ ಯಾರಿಗೂ ಅನುಮಾನ ಬೇಡ. ಕನ್ನಡ ಭಾಷೆಗೆ ಶಕ್ತಿ ಜಾನಪದಿಂದ ಬರುತ್ತದೆ ಎಂದು ತಿಳಿಸಿದರು.
ಜಾನಪದ ವಿವಿ ಸ್ಥಾಪನೆ
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಹಾವೇರಿಯಲ್ಲಿ ಜಾನಪದ ವಿವಿ ಸ್ಥಾಪನೆ ಮಾಡುವ ಮೂಲಕ ಜಾನಪದ ಉಳಿವಿಗೆ ಕೊಡುಗೆ ನೀಡಿದರು. ಇದು ಈಗ ದೊಡ್ಡ ಪ್ರಮಾಣದಲ್ಲಿ ಬೆಳೆದಿದ್ದು, ವಿವಿಧ ರಾಜ್ಯಗಳಿಂದ ಕಲಾವಿದರು ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ ಎಂದರು.