ಉತ್ತಮ ಫಲಿತಾಂಶಕ್ಕೆ ಜಿಲ್ಲಾಮಟ್ಟದಲ್ಲಿ ಕಾರ್ಯಯೋಜನೆ
Team Udayavani, Mar 3, 2020, 3:10 AM IST
ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಿದ್ಧತೆಗಳು ಭರದಿಂದ ಸಾಗಿವೆ. ಫಲಿತಾಂಶದಲ್ಲಿ ಸುಧಾರಣೆ ತರಲು ಜಿಲ್ಲಾಮಟ್ಟದಲ್ಲಿ ಅಧಿಕಾರಿಗಳು ಹಲವು ತಂತ್ರಗಳನ್ನು ರೂಪಿಸುತ್ತಿದ್ದಾರೆ. ವಿಜನ್-05 ಕಾರ್ಯಕ್ರಮ, ಓದಿನ ಮನೆ ನಿರ್ಮಾಣ, ಗುರುಗಳು ಬಂದರು ಗುರುವಾರ, ನಿರಂತರ ಕಲಿಕಾ ಮೌಲ್ಯಮಾಪನ ಸೇರಿ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಜಿಲ್ಲಾಮಟ್ಟದಲ್ಲಿ ಕೈಗೊಂಡಿರುವ ಕಾರ್ಯಕ್ರಮಗಳ ಸಂಕ್ಷಿಪ್ತ ಪರಿಚಯ ಇಲ್ಲಿದೆ…
ವಿಜನ್-05 ಕಾರ್ಯಕ್ರಮ: ದಾವಣಗೆರೆ ಜಿಲ್ಲೆಯಲ್ಲಿ ಫಲಿತಾಂಶ ಸುಧಾರಣೆಗೆ ಶಿಕ್ಷಣ ಇಲಾಖೆ ವಿಜನ್-05 ಕಾರ್ಯಕ್ರಮ ರೂಪಿಸಿದೆ. ಫೋನ್-ಇನ್ ಕಾರ್ಯಕ್ರಮ, ದತ್ತು ಯೋಜನೆ ಸಮರ್ಪಕ ಅನುಷ್ಠಾನ, ಶಿಕ್ಷಕರೊಂದಿಗೆ ಸಂವಾದ, ಬೆಳಗ್ಗೆ, ಸಂಜೆ ವಿಶೇಷ ತರಗತಿ, ಕೆಲವೆಡೆ ರಾತ್ರಿ ತರಗತಿ ನಡೆಸುವ ಮೂಲಕ ಫಲಿತಾಂಶ ಹೆಚ್ಚಳಕ್ಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಓದಿನ ಮನೆ ನಿರ್ಮಾಣ: ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳನ್ನು ರೆಡ್ ಝೋನ್, ಎಲ್ಲೊ ಝೋನ್, ಗ್ರೀನ್ ಝೋನ್ಗಳೆಂದು ಮೂರು ಹಂತಗಳಲ್ಲಿ ಗುರುತಿಸಲಾಗಿದ್ದು, ಯಾವ್ಯಾವ ವಿದ್ಯಾರ್ಥಿಗಳು ಯಾವ್ಯಾವ ವಿಷಯಗಳಲ್ಲಿ ಪರಿಣಿತರಾಗಿಲ್ಲ ಎಂಬುದನ್ನು ಅರಿತು ಅದಕ್ಕೆ ಸೂಕ್ತ ತರಬೇತಿ ನೀಡಲಾಗುತ್ತಿದೆ. ಜಿಪಂ ಅಧ್ಯಕ್ಷರ ಸಲಹೆ ಮೇರೆಗೆ ಜಿಲ್ಲೆಯ ಪ್ರತಿ ಶಾಲೆಯಲ್ಲೂ ಓದಿನ ಮನೆಯನ್ನು ಆರಂಭಿಸಲಾಗಿದೆ.
ಗುರುಗಳು ಬಂದರು ಗುರುವಾರ: ಬಾಗಲಕೋಟೆ ಜಿಲ್ಲೆಯಲ್ಲಿ ಗುರುಗಳು ಬಂದರು ಗುರುವಾರ ಎಂಬ ವಿಶೇಷ ಕಾರ್ಯಕ್ರಮದ ಮೂಲಕ ಆಯಾ ಶಾಲೆಯ ಶಿಕ್ಷಕರು, ಪ್ರತಿ ಗುರುವಾರ (ಕೆಲ ಶಾಲೆಯ ಶಿಕ್ಷಕರು ವಾರಕ್ಕೆ ಮೂರು ದಿನ) ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಮನೆಗೆ ರಾತ್ರಿ ಭೇಟಿ ನೀಡಿ, ಅವರ ಅಭ್ಯಾಸದ ಪರಿಶೀಲನೆ ಹಾಗೂ ಮಕ್ಕಳಿಗೆ ಮನೆಯಲ್ಲಿ ಕೆಲಸಕ್ಕೆ ಬಳಸದಂತೆ ಪಾಲಕರ ಮನವೊಲಿಸುವ ಕೆಲಸ ಮಾಡಲಾಗುತ್ತಿದೆ. ಅಲ್ಲದೇ ಪ್ರತಿದಿನ ರಾತ್ರಿ (ಹೆಣ್ಣು ಮಕ್ಕಳು ಹೊರತುಪಡಿಸಿ) ವಿದ್ಯಾರ್ಥಿಗಳು ಶಾಲೆಯಲ್ಲೇ ವಾಸ್ತವ್ಯ ಮಾಡಿ, ಅಭ್ಯಾಸ ಮಾಡಲು ಪ್ರೇರೇಪಣೆ ನೀಡಲಾಗಿದೆ.
ಮಕ್ಕಳಿಗೆ ಪ್ರೇರಣಾ ಪತ್ರ: ಗದಗ ಜಿಲ್ಲೆಯಲ್ಲಿ ಮನೆಯಲ್ಲಿ ಓದಲು ಮುಕ್ತ ವಾತಾವರಣ ಇಲ್ಲದ ವಿದ್ಯಾರ್ಥಿ ಗಳಿಗಾಗಿ ರಾತ್ರಿಯಲ್ಲಿ ಆಯಾ ಶಾಲೆಯಲ್ಲಿ ಓದು ಮನೆಗಳನ್ನು ಆರಂಭಿಸಲಾಗಿದೆ. ಸ್ಥಳೀಯ ನಿವಾಸಿಯಾಗಿರುವ ಅದೇ ಶಾಲೆ ಶಿಕ್ಷಕರೊಬ್ಬರು ಮಾರ್ಗದರ್ಶನ ನೀಡುತ್ತಿದ್ದಾರೆ. ಜಿಲ್ಲಾ ಧಿಕಾರಿ, ಜಿಪಂ ಸಿಇಒ ಹಾಗೂ ಡಿಡಿಪಿಐ ಅವರಿಂದ ಜಿಲ್ಲೆಯ ಎಲ್ಲ ವಿದ್ಯಾರ್ಥಿಗಳಿಗೆ ಪ್ರೇರಣಾ ಪತ್ರ ಬರೆಯಲಾಗಿದೆ.
ಮನೆಮನೆಗೆ ತೆರಳಿ ಪರೀಕ್ಷೆ ಜಾಗೃತಿ: ಉಡುಪಿ ಜಿಲ್ಲೆಯನ್ನು ಮತ್ತೂಮ್ಮೆ ನಂ.1 ಮಾಡಲು ಸಾರ್ವಜನಿಕ ಶಿಕ್ಷಣ ಇಲಾಖೆ ಹಲವಾರು ಯೋಜನೆಗಳನ್ನು ಹಾಕಿಕೊಂಡಿದೆ. ಉಡುಪಿಯಲ್ಲಿ ನಮ್ಮ ನಡೆ ಮಕ್ಕಳ ಕಡೆ, ಕುಂದಾಪುರದಲ್ಲಿ ಅನು ತ್ತೀರ್ಣ ಪ್ರಮಾಣ ಶೂನ್ಯದೆಡೆಗೆ, ಬ್ರಹ್ಮಾವರದಲ್ಲಿ ನಿರೀಕ್ಷೆ 2020, ಬೈಂದೂರಿನಲ್ಲಿ ಬೈಂದೂರು ಬೆಳಗುತ್ತಿದೆ. ಕಾರ್ಕಳದಲ್ಲಿ ಎಸ್ಸೆಸ್ಸೆಲ್ಸಿ ಮಿಷನ್ 100 ಘೋಷ ಣೆಗಳ ಮೂಲಕ ಸಕಲ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ. ಶಿಕ್ಷಕರೇ ಮಕ್ಕಳನ್ನು ನಿದ್ದೆಯಿಂದ ಎಬ್ಬಿಸುವ ಜತೆಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ವಿದ್ಯಾರ್ಥಿಗಳ ಮನೆಮನೆಗಳಿಗೆ ಭೇಟಿ ನೀಡಿ ಜಾಗೃತಿ ಮೂಡಿಸುತ್ತಿದ್ದಾರೆ.
ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ: ಬೀದರ ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಸುಧಾರಣೆಗೆ ಹೊಸ ಸೂತ್ರಗಳನ್ನು ಅಳವಡಿಸಿಕೊಂಡಿದೆ. ವಿದ್ಯಾರ್ಥಿಗಳಲ್ಲಿ ಕಲಿಕಾ ಸಾಮರ್ಥ್ಯ ಹೆಚ್ಚಿಸಲು ಜಿಲ್ಲೆಯಲ್ಲಿ 100 ತೀವ್ರ ನಿಗಾ ಕಲಿಕಾ ತರಬೇತಿ ಕೇಂದ್ರಗಳನ್ನು ಆರಂಭಿಸಿ, ಶಾಲೆ ಆರಂಭವಾಗುವ ಮೊದಲು ಹಾಗೂ ಶಾಲೆ ಬಿಟ್ಟ ನಂತರ ಒಂದೊಂದು ತಾಸು ವಿಶೇಷ ತರಗತಿ ನಡೆಸಲಾಗುತ್ತಿದೆ. ಸಾಧನಾ ಚಾರಿಟೇಬಲ್ ಟ್ರಸ್ಟ್ಗೆ ಜಿಲ್ಲೆಯ ಶೇ. 50ಕ್ಕಿಂತ ಕಡಿಮೆ ಫಲಿತಾಂಶ ಪಡೆದ 80 ಶಾಲೆಗಳನ್ನು ದತ್ತು ನೀಡಲಾಗಿದೆ. ಟ್ರಸ್ಟ್ನ 10 ರಿಂದ 15ಕ್ಕೂ ಹೆಚ್ಚು ಸಂಪನ್ಮೂಲ ವ್ಯಕ್ತಿಗಳ ಮೂಲಕ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ಕೊಡಿಸಲಾಗುತ್ತಿದೆ.
ಫೋನ್-ಇನ್ ಕಾರ್ಯಕ್ರಮ: ಕೊಪ್ಪಳ ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ಪ್ರತಿ ತಾಲೂಕಿನಲ್ಲಿ ವಿಷಯಾಧಾರಿತ ಸಂಪನ್ಮೂಲ ವ್ಯಕ್ತಿಗಳನ್ನು ಕೂಡಿಸಿ ಫೋನ್ ಇನ್ ಕಾರ್ಯಕ್ರಮ ನಡೆಸಲಾಗುತ್ತಿದೆ. ವಿದ್ಯಾ ರ್ಥಿಗಳೇ ನೇರವಾಗಿ ಸಂಪನ್ಮೂಲ ವ್ಯಕ್ತಿಗಳಿಗೆ ಕರೆ ಮಾಡಿ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ತಮ್ಮದೇ ಶಿಕ್ಷಕರನ್ನು ವಿಷಯಕ್ಕೆ ಸಂಬಂಧಿ ಸಿದ ಉತ್ತರ ಕೇಳುವ ಬದಲು ಸಂಪನ್ಮೂಲ ವ್ಯಕ್ತಿಗಳಿಂದ ಉತ್ತರ ಕೊಡಿಸಲಾಗುತ್ತಿದೆ. ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಕಠಿಣ ಪ್ರಶ್ನೆಗಳಿಗೆ ಉತ್ತರ ಬರೆಯಲು ಪೂರ್ವ ಸಿದ್ಧತಾ ಪರೀಕ್ಷೆ ಕೈಗೊಳ್ಳುವ ಜೊತೆಗೆ ಪ್ರತಿ ತಾಲೂಕಿನಿಂದ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಲು ಜಿಲ್ಲಾ ಶಿಕ್ಷಣ ಇಲಾಖೆ ಸೂಚನೆ ನೀಡಿದೆ.
83 ತೀವ್ರ ನಿಗಾ ಕಲಿಕಾ ಕೇಂದ್ರ: ಶೈಕ್ಷಣಿಕವಾಗಿ ಹಿಂದುಳಿದ ಗಡಿ ಜಿಲ್ಲೆ ಯಾದಗಿರಿಯ 227 ಪ್ರೌಢಶಾಲೆಗಳಲ್ಲಿನ ಮಕ್ಕಳನ್ನು ಮೂರು ವಿಧಗಳಲ್ಲಿ ವಿಂಗಡಿಸಿ, ತೀರಾ ಹಿಂದುಳಿದ ವಿದ್ಯಾರ್ಥಿಗಳಿಗಾಗಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಸಹಯೋಗದಲ್ಲಿ 83 ತೀವ್ರ ನಿಗಾ ಕಲಿಕಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಕಲಿಕೆಯಲ್ಲಿ ಹಿಂದುಳಿದ 2600ರಷ್ಟು ಮಕ್ಕಳನ್ನು ಗುರುತಿಸಿ, ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳು ಸೇರಿದಂತೆ ಇತರೆ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ನಡೆಸಲಾಗುತ್ತಿದೆ. ಪ್ರೌಢ ಶಾಲೆಗಳಲ್ಲಿ ಬೆಳಗ್ಗೆ ಒಂದು ಗಂಟೆ ಹೆಚ್ಚುವರಿ ಬೋಧನೆ ಹಾಗೂ ಸಂಜೆ ಒಂದು ಗಂಟೆ ವಿವಿಧ ವಿಷಯಗಳ ಕುರಿತು ರಾಜ್ಯ ಮಟ್ಟದಿಂದ ಸಂಪನ್ಮೂಲ ವ್ಯಕ್ತಿಗಳನ್ನು ಕರೆಯಿಸಿ ಉಪನ್ಯಾಸ ನೀಡಲಾಗುತ್ತಿದೆ.
12 ವಾರಗಳ ಕಾರ್ಯಕ್ರಮ: ರಾಯಚೂರು ಜಿಲ್ಲೆಯಲ್ಲಿ ಕಳೆದ ಬಾರಿ ಫಲಿತಾಂಶದಲ್ಲಿ 33ನೇ ಸ್ಥಾನ ಪಡೆಯುವ ಮೂಲಕ ಜಿಲ್ಲೆ ಪಾತಾಳ ಕಂಡಿತ್ತು. ಆಗ ತಾನೆ ಅಧಿಕಾರ ವಹಿಸಿಕೊಂಡ ಜಿಪಂ ಸಿಇಒ ಲಕ್ಷ್ಮೀ ಕಾಂತರೆಡ್ಡಿ ಇದೇ ಜಿಲ್ಲೆಯವರು. ಹೇಗಾದರೂ ಫಲಿತಾಂಶ ಸುಧಾರಿಸಬೇಕು ಎನ್ನುವ ಕಾರಣಕ್ಕೆ 12 ವಾರಗಳ ಕಾರ್ಯಕ್ರಮ ಪರಿಚಯಿಸಿದ್ದಾರೆ.
ಗುಂಪು ಅಧ್ಯಯನ: ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಫಲಿತಾಂಶ ಕಡಿಮೆ ಬಂದಿರುವ ಶಾಲೆಯ ಮುಖ್ಯೋಪಾಧ್ಯಾಯರ ಸಭೆ ನಡೆಸಿ ಪ್ರಸಕ್ತ ಸಾಲಿನಲ್ಲಿ ಶೇ.10ರಷ್ಟು ಫಲಿತಾಂಶ ಸುಧಾರಣೆ. ಗುಂಪು ಅಧ್ಯಯನ. ರಾತ್ರಿ ಓದು. ಶಿಕ್ಷಕರು ಮಕ್ಕಳ ಮನೆಗೆ ಭೇಟಿ ನೀಡಿ ಅಭ್ಯಾಸ ಮಾಡಿಸುವುದು. ಪಿಕನಿಕ್ ಪಜಲ್, ಪಾಸಿಂಗ್ ಪ್ಯಾಕೇಜದಲ್ಲಿ ಕಂಠಪಾಠ. ಚಿತ್ರ ಬಿಡಿಸುವುದು. ಪತ್ರ ಬರೆದು ರೂಢಿಸಿಕೊಳ್ಳುವುದು. ಕೆಲ ಶಾಲೆಗಳಲ್ಲಿ ರಾತ್ರಿ ಹೊತ್ತು ಪಾಠ ಮಾಡಲಾಗುತ್ತಿದೆ.
ನಿರಂತರ ಮೌಲ್ಯಮಾಪನ: ಕಲಬುರಗಿ ಜಿಲ್ಲೆಯಲ್ಲಿ ಮಕ್ಕಳ ಹಾಜರಾತಿ ಕಡ್ಡಾಯಗೊಳಿಸುವುದು ಮತ್ತು ಪೋಷಕರೊಂದಿಗೆ ದೂರವಾಣಿ ಮೂಲಕ ನಿರಂತರವಾಗಿ ಸಂಕರ್ಪ ಹೊಂದುವುದು, ಶೇ.75 ಕಡಿಮೆ ಫಲಿತಾಂಶ ಬಂದ 117 ಶಾಲೆಗಳಲ್ಲಿ ತೀವ್ರ ನಿಗಾ ಕಲಿಕಾ ತರಗತಿಗಳು ಮತ್ತು ವಿಶೇಷ ಬೋಧನಾ ತರಗತಿಗಳನ್ನು ಪ್ರತಿದಿನ ಶಾಲೆ ಅವಧಿ ಹೊರತಾಗಿ ಬೆಳಿಗ್ಗೆ ಮತ್ತು ಸಂಜೆ ಒಂದು ಗಂಟೆ ನಡೆಸುವುದು, ವಿಷಯ ಶಿಕ್ಷಕರ ವೇದಿಕೆಗಳ ರಚಿಸಲಾಗಿದೆ. ತಾಲೂಕು ಹಂತದಲ್ಲಿ ಪ್ರತಿ ಶನಿವಾರ ವಿಷಯವಾರು ಶಿಕ್ಷಕರ ವೇದಿಕೆ ಮೂಲಕ ಕಾರ್ಯಾಗಾರ ನಡೆಸಿ ಶಿಕ್ಷಕರ ಸಾಮರ್ಥ್ಯ ಅಭಿವೃದ್ಧಿಗೊಳಿಸಲಾಗುತ್ತಿದೆ.
ವಿಶೇಷ ಕೋಚಿಂಗ್: ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ ಪ್ರತಿ ಶಾಲೆಯಲ್ಲಿ ಓದುವ ಕೋಣೆ ನಿರ್ಮಾಣ, ಎಲ್ಲ ಶಾಲೆಗಳ ಗ್ರಂಥಾಲಯದಲ್ಲಿ ಓದಲು ಪ್ರೇರೇಪಿಸುವುದು. ವಿಶೇಷ ಕೋಚಿಂಗ್ ನೀಡುವುದು, ಫೋನ್ ಇನ್ ಕಾರ್ಯಕ್ರಮ ಹಾಗೂ ಶಾಲೆಗಳಲ್ಲಿ ಕಾರ್ಯಗಾರ, ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಮುಖ್ಯ ಶಿಕ್ಷಕರ ಸಭೆಗಳನ್ನು ನಡೆಸಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್
Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ
Davanagere; ವಿಧಾನಸಭೆ ಸೋಲಿನ ಕಾರಣದಿಂದ ಬರಪರಿಹಾರ ನೀಡದೆ ಮೋದಿ-ಶಾ ಸೇಡು: ಸುರ್ಜೆವಾಲ ಆರೋಪ
State Govt ದಿವಾಳಿ ಆಗಿದೆ:ಸರ್ಕಾರದಿಂದಲೇ ಲೂಟಿ ನಡೆಯುತ್ತಿದೆ: ಮಾಜಿ ಸಿಎಂ ಯಡಿಯೂರಪ್ಪ ಆರೋಪ
Shahapura: ಎರಡು ಕೆಟ್ಟ ಕಾನೂನು ಜಾರಿಗೆ ಕಾಂಗ್ರೆಸ್ ಸಿದ್ಧತೆ: ಯತ್ನಾಳ ಆರೋಪ