ಕೋವಿಡ್-19 ವಿರುದ್ಧ ಹೋರಾಟಕ್ಕೆ ಕೊಡುಗೈ ದಾನಿಯಾದ ಗೌತಮ್ ಗಂಭೀರ್
Team Udayavani, Apr 7, 2020, 11:08 AM IST
ಹೊಸದಿಲ್ಲಿ: ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ , ಪೂರ್ವ ದೆಹಲಿ ಸಂಸದ ಗೌತಮ್ ಗಂಭೀರ್ ಇಡೀ ದೇಶಕ್ಕೆ ಮಾದರಿಯಾಗುವಂತಹ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಕೋವಿಡ್-19 ಬಿಕ್ಕಟ್ಟಿನ ಸಂದರ್ಭದಲ್ಲಿ ಅತ್ಯುತ್ತಮ ಕಾರ್ಯ ಮಾಡುತ್ತಿದ್ದಾರೆ.
ಈಗಾಗಲೇ ತಮ್ಮ ಸಂಸದರ ನಿಧಿಯಿಂದ ಒಂದು ಕೋಟಿ ರೂ. ಬಿಡುಗಡೆ ಮಾಡಿರುವ ಗೌತಿ ತಮ್ಮ ಎರಡು ವರ್ಷದ ವೇತನವನ್ನೂ ಪ್ರಧಾನಿ ನಿಧಿಗೆ ಅರ್ಪಿಸಿದ್ದಾರೆ.
ಈಗ ಮತ್ತೊದು ಹೆಜ್ಜೆ ಮುಂದೆ ಹೋಗಿರುವ ಗೌತಮ್ ಗಂಭೀರ್, ದಿಲ್ಲಿ ರಾಜ್ಯ ಸರ್ಕಾರಕ್ಕೆ ಸಂಸದರ ನಿಧಿಯಿಂದ 50 ಲಕ್ಷ ರೂ ನೀಡುತ್ತಿದ್ದಾರೆ. ಅವರ ಕೆಲಸ ಅಷ್ಟಕ್ಕೇ ನಿಂತಿಲ್ಲ. ತಮ್ಮ ಕ್ಷೇತ್ರದಲ್ಲಿರುವ ಬಡವರಿಗೆ ಆಹಾರವನ್ನೂ ತಮ್ಮ ಗಂಭೀರ್ ಫೌಂಡೇಶನ್ ಮೂಲಕ ವಿತರಿಸುತ್ತಿದ್ದಾರೆ.
ಅವರು ಸಂಸದರಾಗುವ ಮೊದಲೇ ನಕ್ಸಲರಿಂದ ಹತರಾದ ಯೋಧರ ಮಕ್ಕಳ ಶಿಕ್ಷಣದ ಪೂರ್ಣ ಹೊಣೆಯನ್ನು ಗಂಭೀರ್ ಹೊತ್ತಿದ್ದರು. ಕಾಶ್ಮೀರದಲ್ಲಿ ಭಯೋತ್ಪಾದನೆಯಿಂದ ಮೃತಪಟ್ಟ ಪೊಲೀಸರ ಮಕ್ಕಳ ಶಿಕ್ಷಣವನ್ನೂ ನೋಡಿಕೊಳ್ಳುತ್ತಿದ್ದಾರೆ.