Karnataka: ಗರ್ಭಪಾತ ಪ್ರಕರಣಗಳ ಆಡಿಟ್ಗೆ ಸರಕಾರ ಚಿಂತನೆ
ಶಾಸಕಿಯರು, ರೇಡಿಯಾಲಜಿಸ್ಟ್, ತಜ್ಞ ವೈದ್ಯರಿರುವ ಮೇಲುಸ್ತುವಾರಿ ಸಮಿತಿ ರಚನೆ: ಗುಂಡೂರಾವ್
Team Udayavani, Jan 18, 2024, 11:11 PM IST
ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿರುವ ಗರ್ಭಪಾತ ಪ್ರಕರಣಗಳ ಆಡಿಟ್ಗೆ ಚಿಂತನೆ ನಡೆಸಿರುವ ಸರಕಾರ, ಗರ್ಭಪೂರ್ವ ಮತ್ತು ಪ್ರಸವಪೂರ್ವ ಪತ್ತೆ ತಂತ್ರವಿಧಾನಗಳ (ಪಿಸಿ ಆ್ಯಂಡ್ ಪಿಎನ್ಡಿಟಿ) ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಉದ್ದೇಶದಿಂದ ಕೆಲವು ಮಾರ್ಪಾಡುಗಳನ್ನು ತರಲೂ ಉದ್ದೇಶಿಸಿದೆ.
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅಧ್ಯಕ್ಷತೆಯಲ್ಲಿ ಶುಕ್ರವಾರ ವಿಕಾಸಸೌಧದಲ್ಲಿ ನಡೆದ ಸಭೆಯಲ್ಲಿ ಈ ವಿಚಾರಗಳ ಕುರಿತು ಚರ್ಚೆಗಳು ನಡೆದಿದ್ದು, ಸಭೆ ಬಳಿಕ ಸಚಿವ ದಿನೇಶ್ ಸುದ್ದಿಗಾರರಿಗೆ ವಿವರಣೆ ನೀಡಿದರು.
ಕಾರ್ಯಪಡೆಗೆ ಬೇಕಿದೆ ಪೊಲೀಸ್ ಸಹಕಾರ
ಇತ್ತೀಚೆಗೆ ಪತ್ತೆಯಾದ ಭ್ರೂಣಹತ್ಯೆ ಪ್ರಕರಣಗಳ ಹಿನ್ನೆಲೆಯಲ್ಲಿ ಸ್ಕ್ಯಾನಿಂಗ್ ಸೆಂಟರ್ಗಳ ಮೇಲೆ ನಿಗಾ ಇಡಲು ರಾಜ್ಯ ಹಾಗೂ ಜಿಲ್ಲಾ ಮಟ್ಟದ ಸಕ್ಷಮ ಪ್ರಾಧಿಕಾರಗಳಿವೆ. ಸ್ಕ್ಯಾನಿಂಗ್ ಸೆಂಟರ್ಗಳ ತಪಾಸಣೆ, ಅಲ್ಲಿ ಕಂಡುಬರುವ ಲೋಪಗಳ ವಿರುದ್ಧ ಕ್ರಮ ಕೈಗೊಳ್ಳುವುದು ಸಹಿತ ಇತರ ಪ್ರಕ್ರಿಯೆಗಳಿಗಾಗಿ ಆರೋಗ್ಯ ಇಲಾಖೆ ಆಯುಕ್ತರ ನೇತೃತ್ವದಲ್ಲಿ ರಾಜ್ಯ ಮಟ್ಟದ ಕಾರ್ಯಪಡೆ ಇದ್ದು, ಇದಕ್ಕೆ ಪೊಲೀಸ್ ಇಲಾಖೆಯ ಸಹಕಾರ ಬೇಕಿದೆ. ಹೀಗಾಗಿ ಪಿಸಿ ಆ್ಯಂಡ್ ಪಿಎನ್ಡಿಟಿ ಕಾಯ್ದೆಯಡಿ ಕಾರ್ಯಾಚರಣೆ ನಡೆಸಲು ಎಸಿಪಿ ಹಾಗೂ ಇಬ್ಬರು ಸಬ್ ಇನ್ಸ್ಪೆಕ್ಟರ್ ಒಳಗೊಂಡ ಅಧಿಕಾರಿಗಳ ತಂಡವನ್ನು ಪ್ರತ್ಯೇಕವಾಗಿ ನೀಡಬೇಕೆಂದು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುತ್ತದೆ. ಇದಲ್ಲದೆ, ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳು, ಪೊಲೀಸ್ ಅಧಿಕಾರಿ, ಆರೋಗ್ಯಾಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿಗಳು ಇರುತ್ತಾರೆ. ಇವುಗಳ ಮೇಲುಸ್ತುವಾರಿಗಾಗಿ ಶಾಸಕಿಯರಾದ ರೂಪಕಲಾ ಶಶಿಧರ್, ನಯನಾ ಮೋಟಮ್ಮ, ಲತಾ ಮಲ್ಲಿಕಾರ್ಜುನ ಹಾಗೂ ಮಾಜಿ ಸಚಿವೆ ಉಮಾಶ್ರೀ ಅವರನ್ನು ಒಳಗೊಂಡ ರಾಜ್ಯ ಮಟ್ಟದ ಸಮಿತಿ ರಚಿಸಲಾಗಿದೆ. ಇದರಲ್ಲಿ ರೇಡಿಯಾಲಜಿಸ್ಟ್, ತಜ್ಞ ವೈದ್ಯರೂ ಇರಲಿದ್ದಾರೆ.
ದಂಡ ಪ್ರಮಾಣ ಹೆಚ್ಚಿಸಲೂ ಸಲಹೆ
ಗರ್ಭಿಣಿಯರ ಮಾಹಿತಿಯು ಆರೋಗ್ಯಾಧಿಕಾರಿಗಳ ಬಳಿ ಇದ್ದರೂ ಎಷ್ಟು ಜನರಿಗೆ ಹೆರಿಗೆ ಆಯಿತು? ಎಷ್ಟು ಮಂದಿಗೆ ಗರ್ಭಪಾತ ಆಯಿತು? ಅದಕ್ಕಿದ್ದ ಕಾರಣಗಳೇನು? ಹೆರಿಗೆ ಆದ ಪ್ರಕರಣಗಳು ಎಷ್ಟು? ಗರ್ಭಪಾತ ಆದ ಪ್ರಕರಣಗಳು ಎಷ್ಟು ಮುಂತಾದ ಮಾಹಿತಿ ಇರುವುದೇ ಇಲ್ಲ. ಹೀಗಾಗಿ ಏಜೆನ್ಸಿಯೊಂದರ ಮೂಲಕ ಈ ಬಗ್ಗೆ ಆಡಿಟ್ ಮಾಡಿಸಲು ಚಿಂತನೆ ನಡೆದಿದ್ದು, ಆಡಿಟ್ ವರದಿಯನ್ನು 6 ತಿಂಗಳಿಗೊಮ್ಮೆ ಮೇಲುಸ್ತುವಾರಿ ಸಮಿತಿಗೆ ಸಲ್ಲಿಸಬೇಕು. ಅಕ್ರಮ ಗರ್ಭಪಾತದಲ್ಲಿ ಭಾಗಿಯಾದ ಸ್ಕ್ಯಾನಿಂಗ್ ಸೆಂಟರ್ ಸಹಿತ ಯಾರೇ ಆರೋಪಿ ಇದ್ದರೂ 10 ಸಾವಿರ ರೂ. ದಂಡ ಮತ್ತು ಜೈಲು ಶಿಕ್ಷೆ ಇದೆ. ಇದನ್ನು ಹೆಚ್ಚಿಸುವ ಸಲಹೆಗಳು ಬಂದಿದ್ದು, ಕಾನೂನು ಇಲಾಖೆಯೊಂದಿಗೆ ಚರ್ಚಿಸಿ ಮುಂದುವರಿಯುತ್ತೇವೆ ಎಂದು ಸಚಿವರು ತಿಳಿಸಿದರು.
ಬಾಡಿಗೆ ತಾಯಿಯಿಂದ ಮಗು: ಜಿಲ್ಲಾ ಹಂತದಲ್ಲೇ ಪ್ರಮಾಣಪತ್ರ?
ಎಆರ್ಟಿ ಕೇಂದ್ರ ಮತ್ತು ಐವಿಎಫ್ ಕೇಂದ್ರಗಳು ಕೆಎಂಪಿಯಿಂದ ಪರವಾನಗಿ ಪಡೆಯುತ್ತಿದ್ದವು. ಇನ್ನು ಮುಂದೆ ಆರೋಗ್ಯ ಇಲಾಖೆಯಲ್ಲೂ ನೋಂದಾಯಿಸಿಕೊಳ್ಳುವಂತೆ ನಿಯಮದಲ್ಲಿ ಮಾರ್ಪಾಡು ಮಾಡಲಾಗುತ್ತದೆ. ಅಂತೆಯೇ ಬಾಡಿಗೆ ತಾಯಿ ವಿಚಾರವಾಗಿ ಸಾಕಷ್ಟು ಗೊಂದಲಗಳಿದ್ದು, ಅವುಗಳನ್ನು ನಿವಾರಿಸುವ ಕುರಿತೂ ಸಮಾಲೋಚನೆ ನಡೆದಿದೆ. ಬಾಡಿಗೆ ತಾಯಿ ಮೂಲಕ ಮಗು ಪಡೆಯಬೇಕಾದವರು ಇಷ್ಟು ದಿನ ಪ್ರಮಾಣಪತ್ರ ಪಡೆಯಲು ಬೆಂಗಳೂರಿಗೇ ಹೋಗಬೇಕಿತ್ತು. ಈ ಅಧಿಕಾರವನ್ನು ಜಿಲ್ಲಾ ಆರೋಗ್ಯಾಧಿಕಾರಿ (ಡಿಎಚ್ಒ)ಗೇ ನೀಡುವ ಚಿಂತನೆ ಇದ್ದು, ಇದರಿಂದ ಅಧಿಕಾರ ವಿಕೇಂದ್ರೀಕರಣವೂ ಆಗಲಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ವಿಶ್ವಾಸ ವ್ಯಕ್ತಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
State Govt ದಿವಾಳಿ ಆಗಿದೆ:ಸರ್ಕಾರದಿಂದಲೇ ಲೂಟಿ ನಡೆಯುತ್ತಿದೆ: ಮಾಜಿ ಸಿಎಂ ಯಡಿಯೂರಪ್ಪ ಆರೋಪ
Shahapura: ಎರಡು ಕೆಟ್ಟ ಕಾನೂನು ಜಾರಿಗೆ ಕಾಂಗ್ರೆಸ್ ಸಿದ್ಧತೆ: ಯತ್ನಾಳ ಆರೋಪ
ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್
LokSabha; ರಾಹುಲ್ ಗಾಂಧಿಯನ್ನು ರಾಜ್ಯಕ್ಕೆ ಹೆಚ್ಚೆಚ್ಚು ಕರೆಯಿಸಬೇಕು: ವಿಜಯೇಂದ್ರ ವ್ಯಂಗ್ಯ
Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ
MUST WATCH
ಹೊಸ ಸೇರ್ಪಡೆ
Kalaburagi; ಕಾಂಗ್ರೆಸ್ ಮುಖಂಡನಿಗೆ ಸೇರಿದ ಎರಡು ಕೋಟಿ ರೂಪಾಯಿ ಹಣ ಸೀಜ್
“ನಾನು ಬಟ್ಟೆ ಬದಲಾಯಿಸುವಾಗ ಬಾಗಿಲು..” ನಿರ್ಮಾಪಕರ ಕಿರುಕುಳದ ಬಗ್ಗೆ ಮೌನ ಮುರಿದ ನಟಿ
State Govt ದಿವಾಳಿ ಆಗಿದೆ:ಸರ್ಕಾರದಿಂದಲೇ ಲೂಟಿ ನಡೆಯುತ್ತಿದೆ: ಮಾಜಿ ಸಿಎಂ ಯಡಿಯೂರಪ್ಪ ಆರೋಪ
“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?
Shahapura: ಎರಡು ಕೆಟ್ಟ ಕಾನೂನು ಜಾರಿಗೆ ಕಾಂಗ್ರೆಸ್ ಸಿದ್ಧತೆ: ಯತ್ನಾಳ ಆರೋಪ