ಪಿಂಕಿ ನವಾಜ್, ಆಕಾಶ ಭವನ ಶರಣ್ಗೆ ಗೂಂಡಾ ಕಾಯ್ದೆ ದೃಢಗೊಳಿಸಿದ ಹೈಕೋರ್ಟ್
ಈ ಇಬ್ಬರ ವಿರುದ್ಧ 2022ರ ಫೆ.10ರಂದು ನಗರ ಪೊಲೀಸ್ ಆಯುಕ್ತರು ಗೂಂಡಾ ಕಾಯ್ದೆ ಜಾರಿಗೊಳಿಸಿದ್ದರು.
Team Udayavani, Mar 30, 2022, 12:18 PM IST
ಮಂಗಳೂರು, ಮಾ. 29: ಕೊಲೆ, ಕೊಲೆ ಯತ್ನ, ಸುಲಿಗೆ, ದರೋಡೆ, ಅತ್ಯಾಚಾರ ಮೊದಲಾದ ಪ್ರಕರಣಗಳಲ್ಲಿ ರೌಡಿಶೀಟರ್ಗಳಾಗಿರುವ ಕಾಟಿಪಳ್ಳ ನಿವಾಸಿ ಮುಹಮ್ಮದ್ ನವಾಜ್ ಆಲಿಯಾಸ್ ಪಿಂಕಿ ನವಾಜ್ (27) ಮತ್ತು ಆಕಾಶಭವನ ಶರಣ್ ಆಲಿಯಾಸ್ ರೋಹಿದಾಸ್ (37) ಮೇಲಿನ ಗೂಂಡಾ ಕಾಯ್ದೆ ಜಾರಿ ಆದೇಶವನ್ನು ಹೈಕೋರ್ಟ್ ಮಂಗಳವಾರ ದೃಢಗೊಳಿಸಿದೆ.
ಈ ಇಬ್ಬರ ವಿರುದ್ಧ 2022ರ ಫೆ.10ರಂದು ನಗರ ಪೊಲೀಸ್ ಆಯುಕ್ತರು ಗೂಂಡಾ ಕಾಯ್ದೆ ಜಾರಿಗೊಳಿಸಿದ್ದರು. ಆಕಾಶಭವನ ಶರಣ್ ವಿಜಯಪುರ ಜೈಲಿನಲ್ಲಿದ್ದು ಅಲ್ಲಿಯೇ ಆತನನ್ನು ಗೂಂಡಾ ಕಾಯ್ದೆಯಡಿ ಬಂಧಿಸಬೇಕು. ಪಿಂಕಿ ನವಾಜ್ ಮೈಸೂರು ಜೈಲಿನಿಂದ ಬಿಡುಗಡೆಯಾಗುತ್ತಿದ್ದಂತೆ ವಶಕ್ಕೆ ಪಡೆದು ಗೂಂಡಾ ಕಾಯ್ದೆಯಡಿ ಬಂಧಿಸಬೇಕು ಎಂದು ಆದೇಶ ಹೊರಡಿಸಲಾಗಿತ್ತು. ಹೈಕೋರ್ಟ್ ನಲ್ಲಿ ಈ ಆದೇಶ ದೃಢವಾಗಿದ್ದು, ಫೆ. 10ರಿಂದ ಇಬ್ಬರಿಗೂ ಒಂದು ವರ್ಷದ ಅವಧಿಗೆ ಗೂಂಡಾ ಕಾಯ್ದೆ ಅನ್ವಯವಾಗುತ್ತದೆ.
ಇಬ್ಬರಿಗೂ ಗೂಂಡಾ ಕಾಯ್ದೆ ಜಾರಿಗೊಳಿಸಿ ಹೈಕೋರ್ಟ್ನಲ್ಲಿ ದೃಢಗೊಳ್ಳಲು ಕಾರಣಕರ್ತರಾದ ಪೊಲೀಸ್ ತಂಡಕ್ಕೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ 1 ಲ.ರೂ. ಬಹುಮಾನ ಘೋಷಿಸಿದ್ದಾರೆ.
ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ಹರಿರಾಂ ಶಂಕರ್, ಸಂಚಾರ ಮತ್ತು ಅಪರಾಧ ವಿಭಾಗದ ಡಿಸಿಪಿ ದಿನೇಶ್, ಉತ್ತರ ವಿಭಾಗ ಎಸಿಪಿ ಮಹೇಶ್ ಕುಮಾರ್, ಸಿಸಿಆರ್ಬಿ ಎಸಿಪಿ ರವೀಶ್, ಕಾವೂರು ಇನ್ಸ್ಪೆಕ್ಟರ್ ರಾಘವ್ ಪಡೀಲ್, ಸುರತ್ಕಲ್ ಪೊಲೀಸ್ ಇನ್ಸ್ಪೆಕ್ಟರ್ ಚಂದ್ರಪ್ಪ ಮತ್ತು ತಂಡ ಗೂಂಡಾ ಕಾಯ್ದೆ ಜಾರಿಗೆ ಪೂರಕವಾದ ದಾಖಲೆ ಸಂಗ್ರಹಿಸಿತು.