ಕೋಡಿಕಲ್ ಕ್ರಾಸ್ ಬಳಿ ಹೆದ್ದಾರಿ ಬದಿ ಬಿರುಕು?
Team Udayavani, May 17, 2022, 11:40 PM IST
ಪಣಂಬೂರು: ಕೊಟ್ಟಾರಚೌಕಿ ಬಳಿಯ ಕೋಡಿಕಲ್ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ ಬದಿ ನಿರ್ಮಿಸುತ್ತಿರುವ ಬೃಹತ್ ರಾಜಕಾಲುವೆ ಕಾಮಗಾರಿ ವಿಳಂಬವಾಗುತ್ತಿದ್ದು, ಸೋಮವಾರ ಸುರಿದ ಭಾರೀ ಮಳೆಗೆ ಇಲ್ಲಿ ಹಾಕಲಾದ ಮಣ್ಣು ಕೊಚ್ಚಿ ಹೋಗಿ ಬಿರುಕು ಬಿದ್ದಿದೆ ಎಂಬ ಆರೋಪ ಕೇಳಿ ಬಂದಿದೆ.
ಕಳೆದ ಎಂಟು ತಿಂಗಳಿನಿಂದ ಇಲ್ಲಿನ ರಾಜಕಾಲುವೆ ಕಾಮಗಾರಿ ಹಾಗೂ ಸರ್ವಿಸ್ ರಸ್ತೆ ನಿರ್ಮಾಣದ ಕಾಮಗಾರಿ ಆಗುತ್ತಿದ್ದು, ರಾಜಕಾಲುವೆಯನ್ನು ಅವೈಜ್ಞಾನಿಕವಾಗಿ ತಿರುಗಿಸಿದ ಕಾರಣ ಸ್ಥಳೀಯರ ಪ್ರತಿಭಟನೆಗೆ ಕಾರಣವಾಗಿತ್ತು.
ಪಾಲಿಕೆ ಮತ್ತು ಹೆದ್ದಾರಿ ಇಲಾಖೆ ನಡುವೆ ಸಮನ್ವಯತೆಯ ಕೊರತೆಯಿಂದ ರಾಜಕಾಲುವೆ ನಿರ್ಮಾಣ ಹಳಿತಪ್ಪಿದೆ. ಇದೀಗ ಮಳೆಗಾಲ ಆರಂಭವಾಗಿದ್ದು ಕಾಮಗಾರಿ ಹೆದ್ದಾರಿಗೆ ಕಂಟಕವಾಗುವ ಭೀತಿ ಎದುರಾಗಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ.