ಮೃತ ಮಹಿಳೆಯ ಪತಿ, ಮಕ್ಕಳ ವರದಿ ನೆಗೆಟಿವ್
Team Udayavani, Apr 23, 2020, 6:30 AM IST
ಬಂಟ್ವಾಳ ಪುರಸಭಾ ಕಚೇರಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಅವರು ಅಧಿಕಾರಿಗಳಿಂದ ಮಾಹಿತಿ ಪಡೆದರು.
ಮಂಗಳೂರು: ತೀವ್ರ ಉಸಿರಾಟದ ಸಮಸ್ಯೆಯಿಂದ ಮೃತಪಟ್ಟು ಬಳಿಕ ಕೋವಿಡ್-19 ದೃಢಪಟ್ಟ ಬಂಟ್ವಾಳದ ಮಹಿಳೆಯ ಪತಿ, ಇಬ್ಬರು ಮಕ್ಕಳ ಗಂಟಲ ದ್ರವ ಮಾದರಿ ಆರೋಗ್ಯ ಇಲಾಖೆಯ ಕೈಸೇರಿದ್ದು, ಮೊದಲ ಹಂತದ ಮೂರೂ ವರದಿಗಳು ನೆಗೆಟಿವ್ ಬಂದಿವೆ. ಇನ್ನಿಬ್ಬರ ವರದಿಗೆ ಕಾಯಲಾಗುತ್ತಿದೆ.
ಬಂಟ್ವಾಳದ ಕಸಬಾ ನಿವಾಸಿ 50 ವರ್ಷದ ಮಹಿಳೆ ತೀವ್ರ ಉಸಿರಾಟದ ಸಮಸ್ಯೆಯಿಂದ ಎ. 18ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಕೋವಿಡ್-19 ಲಕ್ಷಣ ಇರುವುದರಿಂದ ಅವರ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಈ ನಡುವೆ ರವಿವಾರ ಮೃತಪಟ್ಟಿದ್ದರು. ಅದೇ ದಿನ ಮಧ್ಯಾಹ್ನ ಗಂಟಲ ದ್ರವ ಮಾದರಿ ವರದಿ ಬಂದಿದ್ದು, ಕೋವಿಡ್-19 ದೃಢಪಟ್ಟಿತ್ತು.
ಅನಾರೋಗ್ಯದ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮೃತ ಮಹಿಳೆಯ ಅತ್ತೆ ಮತ್ತು ಅವರ ಪರಿಚಾರಕರ (ಕೇರ್ ಟೇಕರ್) ಗಂಟಲ ದ್ರವ ಮಾದರಿ ಪರೀಕ್ಷಾ ವರದಿ ಇನ್ನಷ್ಟೇ ಸಿಗಬೇಕಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
85 ನೆಗೆಟಿವ್
ಪರೀಕ್ಷೆಗೆ ಕಳುಹಿಸಲಾಗಿದ್ದ 85 ಮಂದಿಯ ಗಂಟಲ ದ್ರವ ಮಾದರಿ ವರದಿ ಬುಧವಾರ ಸ್ವೀಕೃತವಾಗಿದ್ದು, ಎಲ್ಲವೂ ನೆಗೆಟಿವ್ ಆಗಿವೆ. 495 ವರದಿ ಇನ್ನಷ್ಟೇ ಸಿಗಬೇಕಿದೆ. 44 ಮಂದಿಯನ್ನು ಬುಧವಾರ ತಪಾಸಣೆ ಗೊಳಪಡಿಸಲಾಗಿದ್ದು, 11 ಮಂದಿ ಹೊಸದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ನಾಲ್ವರು ಗೃಹ ನಿಗಾವಣೆಗೊಳಪಟ್ಟಿದ್ದು, 49 ಮಂದಿ ಸುರತ್ಕಲ್ ಎನ್ಐಟಿಕೆಯಲ್ಲಿ ಕ್ವಾರಂಟೈನ್ ಆಗಿ ದ್ದಾರೆ. 10 ಮಂದಿ ಇಎಸ್ಐ ಆಸ್ಪತ್ರೆಯಲ್ಲಿ ನಿಗಾದಲ್ಲಿದ್ದಾರೆ.
ಮಹಿಳೆ ಆರೋಗ್ಯ ಯಥಾಸ್ಥಿತಿ
ಕೋವಿಡ್-19 ಪಾಸಿಟಿವ್ ಇರುವುದು ಮಂಗಳ ವಾರ ದೃಢಪಟ್ಟ ಬಂಟ್ವಾಳ ಕಸಬಾದ 67 ವರ್ಷದ ಮಹಿಳೆ ಆರೋಗ್ಯ ಯಥಾ ಸ್ಥಿತಿ ಯಲ್ಲಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ವೆಂಟಿಲೇಟರ್ ಅಳ ವಡಿಸ ಲಾಗಿದ್ದು, ಅಲ್ಲಿಯೇ ಚಿಕಿತ್ಸೆ ಮುಂದು ವರಿಸ ಲಾಗಿದೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ| ಸದಾನಂದ ತಿಳಿಸಿದ್ದಾರೆ.
ವೃದ್ಧ ಸಾವು: ಮನೆಯವರಿಗೆ ಕ್ವಾರಂಟೈನ್
ಎಡಪದವಿನಲ್ಲಿ ಜ್ವರದಿಂದ ಬಳಲುತ್ತಿದ್ದ 70 ವರ್ಷದ ವೃದ್ಧ ರೋರ್ವರು ಮಂಗಳವಾರ ರಾತ್ರಿ ಮೃತ ಪಟ್ಟ ಹಿನ್ನೆಲೆಯಲ್ಲಿ ಮನೆಯವರನ್ನು ಕ್ವಾರಂಟೈನ್ ಮಾಡಲಾಗಿದೆ.
ಜ್ವರದಿಂದ ಬಳಲುತ್ತಿದ್ದ ವೃದ್ಧನನ್ನು ಬಜಪೆ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿಂದ ವೆನ್ಲಾಕ್ ಗೆ ಶಿಫಾರಸು ಮಾಡಲಾಗಿತ್ತಾದರೂ ವೆನ್ಲಾಕ್ ಗೆ ಹೋಗಿರಲಿಲ್ಲ. ಬಳಿಕ ಸ್ಥಳೀಯ ಜನಪ್ರತಿನಿಧಿ ಯೋರ್ವರು ವೆನ್ಲಾಕ್ ವೈದ್ಯರಿಗೆ ಕರೆ ಮಾಡಿ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಬುಧವಾರ ಬೆಳಗ್ಗೆ ಆಸ್ಪತ್ರೆಗೆ ಕರೆ ತರುವುದಾಗಿ ವೆನಾÉಕ್ ವೈದ್ಯರು ಹೇಳಿದ್ದರು. ಆದರೆ ವೃದ್ಧ ಮಂಗಳವಾರ ರಾತ್ರಿಯೇ ಮೃತಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಊರಿನವರಿಗೆ ಆತಂಕ ಉಂಟಾಗದಿರಲೆಂಬ ಕಾರಣ ಮುನ್ನೆಚ್ಚರಿಕೆ ಕ್ರಮವಾಗಿ ಮೃತ ವೃದ್ಧನ ಕುಟುಂಬದವರನ್ನು ಕ್ವಾರಂಟೈನ್ ಮಾಡಲಾಗಿದೆ.
ಮೃತಳ ಅತ್ತೆ ವೆನ್ಲಾಕ್ ಗೆ
ತೀವ್ರ ಉಸಿರಾಟದ ತೊಂದರೆಗೆ ಚಿಕಿತ್ಸೆ ಪಡೆಯಲು ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ 12 ಮಂದಿ ಬುಧವಾರ ದಾಖಲಾಗಿದ್ದಾರೆ. ಈ ಪೈಕಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೃದ್ಧೆಯನ್ನು ವೆನ್ಲಾಕ್ ಆಸ್ಪತ್ರೆಗೆ ಕಳುಹಿಸಿ ಕೊಡಲಾಗಿದೆ. ಅವರು ರವಿವಾರ ಮೃತಪಟ್ಟ ಬಂಟ್ವಾಳ ಮಹಿಳೆಯ ಅತ್ತೆಯಾಗಿದ್ದು ಅವರಲ್ಲೂ ಈಗ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ.
ಬಂಟ್ವಾಳಕ್ಕೆ ಡಿಸಿ ಭೇಟಿ; ಪರಿಶೀಲನೆ
ಬಂಟ್ವಾಳ: ಬಂಟ್ವಾಳ ಕಸ್ಬಾ ಗ್ರಾಮದ ಇಬ್ಬರು ಮಹಿಳೆಯರಲ್ಲಿ ಸೋಂಕು ದೃಢಪಟ್ಟಿರುವುದರಿಂದ ಗ್ರಾಮದ ನಿರ್ದಿಷ್ಟ ಪ್ರದೇಶವನ್ನು ಸೀಲ್ಡೌನ್ ಮಾಡಲಾಗಿದ್ದು, ಬುಧವಾರ ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಅವರು ಬಂಟ್ವಾಳಕ್ಕೆ ಭೇಟಿ ನೀಡಿ ಸೀಲ್ಡೌನ್ ಕುರಿತು ಕೈಗೊಂಡಿರುವ ಕ್ರಮಗಳ ಬಗ್ಗೆ ಪರಿಶೀಲಿಸಿದರು.
ಅಗತ್ಯ ವಸ್ತುಗಳ ಪೂರೈಕೆಯ ಹಿನ್ನೆಲೆಯಲ್ಲಿ ಕೈಗೊಂಡಿರುವ ಕ್ರಮಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು. ಜತೆಗೆ ಬಂಟ್ವಾಳ ಪುರಸಭಾ ಕಚೇರಿಯಲ್ಲಿನ ಕಂಟ್ರೋಲ್ ರೂಂಗೆ ಭೇಟಿ ನೀಡಿ ಅಲ್ಲಿನ ಕಾರ್ಯಚಟುವಟಿಕೆಗಳ ಕುರಿತು ಪರಿಶೀಲಿಸಿದರು.
ಸೀಲ್ಡೌನ್ ಪ್ರದೇಶದ ನಿವಾಸಿಗಳಿಗೆ ದೂರವಾಣಿ ಸಂಖ್ಯೆ ಇರುವ ಕರಪತ್ರವನ್ನು ನೀಡಲಾಗಿದ್ದು, ಪುರಸಭೆ ಸಹಾಯವಾಣಿಯ ಸಂಖ್ಯೆಯನ್ನೂ ಒದಗಿಸಲಾಗಿದೆ. ಜತೆಗೆ ನಿಯಂತ್ರಿತ ವಲಯದ ವ್ಯಾಪ್ತಿಯಲ್ಲಿರುವ ನ್ಯಾಯಬೆಲೆ ಅಂಗಡಿಗಳನ್ನು ಸ್ಥಳಾಂತರ ಮಾಡುವ ಕುರಿತು ಸೂಚಿಸಿದರು.
ಪ್ರೊಬೆಷನರಿ ಐಎಎಸ್ ಅಧಿಕಾರಿ ರಾಹುಲ್ ಶಿಂಧೆ, ತಹಶೀ ಲ್ದಾರ್ ರಶ್ಮಿ ಎಸ್.ಆರ್., ಪುರಸಭೆ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೊ, ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ಟಿ.ಡಿ. ನಾಗರಾಜ್, ಬಂಟ್ವಾಳ ನಗರ ಪಿಎಸ್ಐ ಅವಿನಾಶ್, ಕಂದಾಯ ನಿರೀಕ್ಷಕರಾದ ರಾಮ ಕಾಟಿಪಳ್ಳ, ನವೀನ್ ಬೆಂಜನಪದವು, ಗ್ರಾಮಕರಣಿಕ ರಾಜು ಲಮಾಣಿ, ಜನಾರ್ದನ ಸಹಿತ ಕಂದಾಯ, ಆರೋಗ್ಯ, ಪುರಸಭೆ, ಪೊಲೀಸ್ ಇಲಾಖೆ ಸಿಬಂದಿ ಉಪಸ್ಥಿತರಿದ್ದರು.